ತಡರಾತ್ರಿಯಲ್ಲಿ ತೆರಳುತ್ತಿದ್ದ ಕಾರೊಂದು ಸರಿಯಾಗಿ ರಸ್ತೆ ಕಾಣದೆ ಹೊಂಡಕ್ಕೆ ಬಿದ್ದಿದೆ. ಘಟನೆಯನ್ನು ಗಮನಿಸಿದ ಮಸೀದಿಯ ಇಮಾಮ್ವೊಬ್ಬರು ಅಪಘಾತದ ಬಗ್ಗೆ ಮೈಕ್ನಲ್ಲಿ ಕೂಗಿದ್ದು, ಎಚ್ಚೆತ್ತ ಜನರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಅಸ್ಸಾಂನ ಕರೀಮ್ಗಂಜ್ ಜಿಲ್ಲೆಯ ಶ್ರೀಭೂಮಿ ನೀಲಮ್ ಬಜಾರ್ನಲ್ಲಿ ಘಟನೆ ನಡೆದಿದೆ. ಬಹದ್ದೂರ್ ಪುರ ಪ್ರದೇಶದಲ್ಲಿ ತೆರಳುತ್ತಿದ್ದ ಕಾರು, ರಸ್ತೆ ಕಾಣದೆ ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಉರುಳಿದೆ. ಇದನ್ನು ಗಮನಿಸಿದ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಬಾಸಿತ್ ಅವರು ತಕ್ಷಣವೇ ಘಟನೆ ಬಗ್ಗೆ ಮೈಕ್ನಲ್ಲಿ ಕೂಗಿದ್ದಾರೆ. ಮೈಕ್ನಲ್ಲಿ ಅನೌನ್ಸ್ ಆಗುತ್ತಿದ್ದಂತೆಯೇ ಸ್ಥಳೀಯ ಮುಸ್ಲಿಮರು ಸ್ಥಳಕ್ಕೆ ಧಾವಿಸಿ, ಬಾವಿಗಿಳಿದು ಕಾರಿನಲ್ಲಿದ್ದ 7 ಮಂದಿಯನ್ನು ರಕ್ಷಿಸಿದ್ದಾರೆ.
“ನೀರಿನೊಳಗೆ ಕಾರಿನ ದೀಪಗಳು ಉರಿಯುತ್ತಿದ್ದುದನ್ನು ಗಮನಿಸಿ, ಮಸೀದಿಯ ಧ್ವನಿವರ್ಧಕದಲ್ಲಿ ಜನರನ್ನು ಎಚ್ಚರಿಸಿದೆ. ಜೀವ ಉಳಿಸುವುದು ನಮ್ಮ ಆದ್ಯತೆಯಾಗಿತ್ತು. ಜಾತಿ/ಧರ್ಮದ ಮಾತೇ ಇದರಲಿಲ್ಲ” ಎಂದು ಮದರಸಾ ಜಾಮಿಯಾ ಉಲ್ ಉಲೂಮ್ ಫುರ್ಕಾನಿಯಾ ಕರೀಮ್ ಗಂಜ್ನಲ್ಲಿ ಶಿಕ್ಷಕರಾಗಿರುವ ಬಾಸಿತ್ ತಿಳಿಸಿದ್ದಾರೆ.
A late-night #accident in #Sribhumi Neelam Bazar could have turned tragic if not for the quick thinking and humanity displayed by an Imam. Seven Hindu passengers narrowly escaped #death after their Eco vehicle lost control and fell into a roadside pond, leaving them trapped and… pic.twitter.com/J46lxPPyXN
— India Today NE (@IndiaTodayNE) December 1, 2025
“ತಕ್ಷಣವೇ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದು, ಹೊಂಡಕ್ಕಿಳಿದು ಕಾರಿನ ಕಿಟಕಿಗಳನ್ನು ಒಡೆದು, ಏಳು ಮಂದಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ವಾಹನ ಸಂಪೂರ್ಣವಾಗಿ ಮುಳುಗಿತು. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ” ಎಂದು ಅವರು ಹೇಳಿದ್ದಾರೆ.
ಅಪಘಾತಕ್ಕೀಡಾಗಿದ್ದವರನ್ನು ತ್ರಿಪುರಾದ ನಿವಾಸಿಗಳು ಎಂದು ಹೆಸರಿಸಿದ್ದಾರೆ. ಘಟನೆಯ ನಂತರ ಸ್ಥಳೀಯ ಬಿಜೆಪಿ ನಾಯಕ ಇಕ್ಬಾಲ್ ಅವರು ಬಾಸಿತ್ ಅವರನ್ನು ಭೇಟಿ ಮಾಡಿ ಅವರನ್ನು ಶ್ಲಾಘಿಸಿದ್ದಾರೆ. ಪೊಲೀಸರು ಘಟನೆಯ ವಿವರಗಳನ್ನು ಸಂಗ್ರಹಿಸಿದ್ದು, ಬಾಸಿತ್ ಅವರಿಗೆ ಅಧಿಕೃತ ಗೌರವ ಅಥವಾ ಪ್ರಶಸ್ತಿ ನೀಡುವ ಸಾಧ್ಯತೆಯಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.




