ಅಕ್ರಮ ಮರಳು ಗಣಿಗಾರಿಕೆಯನ್ನು ವಿರೋಧಿಸಿದಕ್ಕೆ ದಲಿತ ಯುವಕನ ಮೇಲೆ ಗ್ರಾಮ ಪಂಚಾಯತಿ ಸರಪಂಚ್ ಮತ್ತು ಸಹಾಯಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮತ್ವಾರಾ ಗ್ರಾಮದಲ್ಲಿ ಘಟನೆ ನಡೆದಿದೆ, ಗ್ರಾಮದ ದಲಿತ ವ್ಯಕ್ತಿ ರಾಜ್ಕುಮಾರ್ ಚೌಧರಿ ಮೇಲೆ ಸರಪಂಚ್ ರಾಮಾನುಜ ಪಾಂಡೆ ಮತ್ತು ಆತನ ಸಹಾಯಕರು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಆತನ ಮೇಲೆ ರಾಮಾನುಜ ಪಾಂಡೆಯ ಮಗ ಪವನ್ ಪಾಂಡೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಲಾಗಿದೆ.
ಸಂತ್ರಸ್ತ ರಾಜ್ಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಗ್ರಾಮದ ಸರಪಂಚ್ ರಾಮಾನುಜ್ ಪಾಂಡೆ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಅವರ ಅಕ್ರಮವನ್ನು ನಾನು ವಿರೋಧಿಸಿದಕ್ಕೆ, ಪಾಂಡೆ, ಅವರ ಮಗ ಹಾಗೂ ಸಹಚರರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಸರಪಂಚ್ ಅವರ ಮಗ ಪವನ್ ಪಾಂಡೆ ನನ್ನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ನನ್ನ ಮೇಲೆ ನಡೆಯುತ್ತಿದ್ದ ಕ್ರೌರ್ಯವನ್ನು ನನ್ನ ತಾಯಿ ಪ್ರಶ್ನಿಸಿದ್ದಕ್ಕೆ, ಆಕೆಯ ಕೂದಲನ್ನು ಹಿಡಿದು ಎಳೆದಾಡಿ ಆಕೆಯ ಮೇಲೂ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ನಿ ಜಿಲ್ಲೆಯ ಹೆಚ್ಚುವರಿ ಎಸ್ಪಿ (ಎಎಸ್ಪಿ) ಸಂತೋಷ್ ಡೆಹ್ರಿಯಾ ತಿಳಿಸಿದ್ದಾರೆ.




