ಒಬಿಸಿ ಸಮುದಾಯದ ಯುವಕನಿಗೆ ಬ್ರಾಹ್ಮಣ ವ್ಯಕ್ತಿಯ ಪಾದ ತೊರೆದು ನೀರು ಕುಡಿಯುವಂತೆ ಮಾಡಿ ಜಾತಿ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸತಾರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಮದ್ಯ ಮಾರಾಟ ಮಾಡುತ್ತಿದ್ದ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ಚಪ್ಪಲಿ ಹಾರ ಹಾಕಿರುವಂತೆ ಎಐ ಚಿತ್ರ ರಚಿಸಿದ್ದಕ್ಕಾಗಿ ಒಬಿಸಿ ಪ್ರವರ್ಗಕ್ಕೆ ಸೇರಿದ ಕುಶ್ವಾಹ ಸಮುದಾಯದ ಯುವಕನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ವರದಿಯಾಗಿದೆ.
ಸತಾರಿಯಾ ಗ್ರಾಮವನ್ನು ಇತ್ತೀಚೆಗೆ ಮದ್ಯ ಮುಕ್ತ ಗ್ರಾಮವೆಂದು ಘೋಷಿಸಲಾಗಿತ್ತು. ಆದಾಗ್ಯೂ, ಬ್ರಾಹ್ಮಣ ಸಮುದಾಯದ ಅನ್ನು ಪಾಂಡೆ ಎಂಬಾತ ಮದ್ಯ ಮಾರಟವನ್ನು ಮುಂದುವರೆಸಿದ್ದರು. ಆತನನ್ನು ‘ರೆಡ್ ಹ್ಯಾಂಡ್’ಆಗಿ ಹಿಡಿದು, 2,100 ರೂ. ದಂಡ ವಿಧಿಸಿ, ಬ್ರಾಹ್ಮಣ ಸಮುದಾಯದಲ್ಲಿ ಕ್ಷಮೆ ಕೇಳುವಂತೆ ಸೂಚಿಸಲಾಗಿತ್ತು. ಗ್ರಾಮಸ್ಥರ ನಿರ್ಧಾರವನ್ನು ಪಾಂಡೆ ಒಪ್ಪಿಕೊಂಡಿದ್ದರು ಮತ್ತು ಪಾಲಿಸಿದ್ದರು.
ಆದಾಗ್ಯೂ, ಗ್ರಾಮದ ಯುವಕ, ಕುಶ್ವಾಹ ಸಮುದಾಯದ ಪರ್ಶೋತ್ತಮ್ ಕುಶ್ವಾಹ ಎಂಬವರು ಪಾಂಡೆಗೆ ಚಪ್ಪಲಿ ಹಾರ ಹಾಕಿರುವಂತೆ ಎಐ ಚಿತ್ರವನ್ನು ರಚಿಸಿ, ವಾಟ್ಸಾಪ್ನಲ್ಲಿ ಹಂಚಿಕೊಂಡಿದ್ದರು. ಆದರೂ, ಕೆಲವೇ ನಿಮಿಷಗಳಲ್ಲಿ ಪೋಸ್ಟ್ಅನ್ನು ಅಳಿಸಿ ಹಾಕಿದ್ದರು. ಆದರೂ, ಘಟನೆಯು ವಿವಾದಕ್ಕೆ ತಿರುಗಿತು.
ಈ ಲೇಖನ ಓದಿದ್ದೀರಾ?: ಬೂಟು- ಅಸ್ತವ್ಯಸ್ತಗೊಂಡ ಭಾರತದ ಸಂಕೇತ
ಗ್ರಾಮದ ಬ್ರಾಹ್ಮಣ ಸಮುದಾಯದವರು ಪಂಚಾಯತಿ ನಡೆಸಿ, ಪಾರ್ಷೋತ್ತಮ್ ಅವರು ತಮ್ಮ ಕೃತ್ಯಕ್ಕೆ ‘ಪ್ರಾಯಶ್ಚಿತ್ತ’ ಮಾಡಿಕೊಳ್ಳಬೇಕು. ಅವರು ಪಾಂಡೆಯ ಕಾಲು ತೊಳೆದು, ಆ ನೀರು ಕುಡಿಯಬೇಕು. 5,100 ರೂ. ದಂಡ ಪಾವತಿಸಬೇಕು ಎಂದು ಒತ್ತಾಯಿಸಿದೆ. ಅವರ ಒತ್ತಾಯಕ್ಕೆ ಮಣಿದ ಪಾರ್ಷೋತ್ತಮ್, ಬ್ರಾಹ್ಮಣ ಮುಖಂಡರು ಹೇಳಿದಂತೆ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡದ ನೆಟ್ಟಿಗರು ಜಾತಿ ಆಧಾರಿತ ತಾರತಮ್ಯವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಶ್ವಾಹ ಸಮುದಾಯದ ಸದಸ್ಯರೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




