ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಪ್ರಬಲ ಜಾತಿಯ ದುರುಳರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮಹಿಳೆಯ ಎರಡು ತಿಂಗಳ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ನಾಗರ್ಕರ್ನೂಲ್ ಜಿಲ್ಲೆಯ ಕುಮ್ಮೇರಾ ಗ್ರಾಮದಲ್ಲಿ ‘ಕುಮ್ಮೇರಾ ಜಾತ್ರೆ’ ನಡೆದಿದೆ. ಜಾತ್ರೆ ಸಂದರ್ಭದಲ್ಲಿ ದೇವಾಲಯ ಪ್ರವೇಶ ವಿಚಾರವಾಗಿ ದಲಿತ ‘ಚಕ್ಲಿ’ ಸಮುದಾಯ ಮತ್ತು ಪ್ರಬಲ ಜಾತಿಯವರ ನಡುವೆ ವಿವಾದ ಉಂಟಾಗಿತ್ತು. ಇದೇ ಕಾರಣಕ್ಕಾಗಿ, ದಲಿತ ಸಮುದಾಯದ ಕುಟುಂಬದ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಕುಟುಂಬದ ಹಿರಿಯ ಚಿಲುಕೇಶ್ವರಂ ಚಂದ್ರಕಲಾ, ಅವರ ಕಿರಿಯ ಮಗ ಗಣೇಶ್, ಸೊಸೆ ಮೋನಿಕಾ ಹಾಗೂ ಕುಟುಂಬದ ಇತರ ಸದಸ್ಯರ ಮೇಲೆ ಜಾತಿನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ಈ ಸೊಸೆ ಮೋನಿಕಾಗೆ ಗಂಭೀರಗಾಯಗಳಾಗಿವೆ. ಆಕೆಯ ಮಗು ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಘಟನೆಯ ನಂತರ, ಕುಟುಂಬವು ನಾಗರ್ಕರ್ನೂಲ್ ಪಟ್ಟಣಕ್ಕೆ ತೆರಳಿದೆ. ಪೊಲೀಸರಿಗೆ ದೂರು ದಾಖಲಿಸಿದೆ. ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದ ಆರೋಪಿ ದುರುಳರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪೊಲೀಸರು ಎಸ್ಸಿ/ಎಸ್ಟಿ ಕಾಯ್ದೆ ಮತ್ತು ಕೊಲೆಯತ್ನಕ್ಕೆ ಸಂಬಂಧಿಸಿದ ಬಿಎನ್ಎಸ್ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.




