ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಯುಜಿಸಿ ನಿಯಮಗಳ ಕುರಿತು ‘ಜಾತಿವಾದಿ ಹೇಳಿಕೆ’ ನೀಡಿದ್ದಾರೆ. ಅವರ ಹೇಳಿಕೆಯನ್ನು ಜೆಎನ್ಯು ವಿದ್ಯಾರ್ಥಿ ಸಂಘ ಖಂಡಿಸಿದ್ದು, ರಾಜೀನಾಮೆಗೆ ಆಗ್ರಹಿಸಿದೆ.
ಫೆಬ್ರವರಿ 16ರಂದು 52 ನಿಮಿಷಗಳ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದ ಪಂಡಿತ್, “ಶಾಶ್ವತ ಬಲಿಪಶುವಾಗಿ ಅಥವಾ ಸಂತ್ರಸ್ತರೆಂಬ ಕಾರ್ಡ್ ಬಳಸುವ ಮೂಲಕ ನೀವು ಪ್ರಗತಿ ಹೊಂದಲು ಸಾಧ್ಯವಿಲ್ಲ. ಅಮೆರಿಕಾದಲ್ಲಿ ಕಪ್ಪು ಜನರಿಗಾಗಿ ನೀತಿಗಳನ್ನು ರೂಪಿಸಿದಂತೆಯೇ ಭಾರತದಲ್ಲಿ ದಲಿತರಿಗೂ ‘ಬಲಿಪಶು ಕಾರ್ಡ್’ಅನ್ನು ಜಾರಿಗೆ ತಂದಿದ್ದಾರೆ. ಇದರಿಂದ, ದಲಿತರು ಸದಾ ಸಂತ್ರಸ್ತರಾಗಿ ಉಳಿಯುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಯಾರನ್ನಾದರೂ ದೆವ್ವವನ್ನಾಗಿ ಮಾಡುವ ಮೂಲಕ, ಪ್ರಗತಿ ಸಾಧಿಸುವುದು ಸುಲಭವಲ್ಲ. ಇದು ತಾತ್ಕಾಲಿಕ ಮಾದಕವಸ್ತು ಇದ್ದಂತೆ” ಎಂದು ಹೇಳಿದ್ದರು.
ಅವರ ಈ ಹೇಳಿಕೆಯು ಸ್ಪಷ್ಟವಾಗಿ ಜಾತಿವಾದಿ ಹೇಳಿಕೆಯಾಗಿದೆ ಎಂದು ಜೆಎನ್ಯು ವಿದ್ಯಾರ್ಥಿ ಸಂಘ ಆರೋಪಿಸಿದೆ. ಶುಕ್ರವಾರ ಪ್ರತಿಭಟನೆ ನಡೆಸಿದೆ. ಉಪಕುಲಪತಿಗಳು ಪಾಡ್ಕ್ಯಾಸ್ಟ್ನಲ್ಲಿ ಮಾಡಿದ ಸ್ಪಷ್ಟ ಜಾತಿವಾದಿ ಹೇಳಿಕೆಗಳಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಎಂದಿರುವ ಸಂಘವು, ಉಪಕುಲಪತಿ ಹುದ್ದೆಗೆ ಪಂಡಿತ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
ಆದರೆ, ಆರೋಪವನ್ನು ನಿರಾಕರಿಸಿರುವ ಪಂಡಿತ್, “ನಾನು ಜಾತಿವಾದಿ ಹೇಳಿಕೆ ನೀಡಿಲ್ಲ. ವೋಕ್ಸ್ ಇತಿಹಾಸವನ್ನು ಈ ರೀತಿ ಬರೆದಿದ್ದಾರೆ ಎಂಬುದನ್ನು ವಿವರಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ.




