ಛತ್ತೀಸ್ಗಢದ ರಾಯ್ಗಢ ಜಿಲ್ಲೆಯ ತಮ್ನಾರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ವಿರುದ್ಧ ಶನಿವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರು ಘರ್ಷಣೆ ನಡೆಸಿದ್ದಾರೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನಾಕಾರರು ಮತ್ತು ಕೆಲವು ಪೊಲೀಸರಿಗೆ ಗಾಯಗಳಾಗಿವೆ.
ಕಲ್ಲಿದ್ದಲು ಸಾಗಿಸುತ್ತಿದ್ದ ಭಾರೀ ವಾಹನವೊಂದು ಸೈಕಲ್ ಸವಾರಿ ಮಾಡುತ್ತಿದ್ದ ಸ್ಥಳೀಯ ಗ್ರಾಮಸ್ಥನಿಗೆ ಡಿಕ್ಕಿ ಹೊಡೆದಿದ್ದು, ಆತ ಲಾರಿಯ ಕೆಳಗೆ ನಿಲುಕಿ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ, ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ಶನಿವಾರ ಪ್ರತಿಭಟನೆಗಳು ಭುಗಿಲೆದ್ದಿವೆ.
ಶನಿವಾರ ಬೆಳಗ್ಗೆ ಆರಂಭಗೊಂಡ ಪ್ರತಿಭಟನೆ ಮಧ್ನಾಹ್ನದ ವೇಳೆಗೆ ಹಿಂಸಾಚಾರಕ್ಕೆ ತಿರುಗಿತು. ಸಂಜೆಯವರೆಗೂ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿತ್ತು. ವಾಹನಗಳಿಗೆ ಬೆಂಕಿ ಹಚ್ಚುವಿಕೆ, ಕಲ್ಲು ತೂರಾಟ ಹಾಗೂ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದವರಲ್ಲಿ ಒಬ್ಬರಾದ ರಾಧೇಶ್ಯಾಮ್ ಶರ್ಮಾ ಸೇರಿದಂತೆ ಸುಮಾರು 35–40 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ನಾರ್ ಪ್ರದೇಶದ 14 ಹಳ್ಳಿಗಳ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಗೇರ್ ಪೆಲ್ಮಾದಲ್ಲಿ ಖಾಸಗಿ ಕಂಪನಿಯ ಕಲ್ಲಿದ್ದಲು ಗಣಿಗಾರಿಕೆಗಾಗಿ ‘ಪರಿಸರ ಸಾರ್ವಜನಿಕ ವಿಚಾರಣೆ’ಯ ನಕಲಿ ವರದಿಯನ್ನು ಸಿದ್ದಪಡಿಸಿ, ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಗಣಿಗಾರಿಕೆ ವಿರುದ್ಧ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳೀಯ ಗ್ರಾಮಸ್ಥನ ಸವಿನ ಬಳಿಕ, ಪ್ರತಿಭಟನೆ ಉದ್ವಿಗ್ನಗೊಂಡಿದೆ.
ಈ ಲೇಖನ ಓದಿದ್ದೀರಾ?: ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಮತ್ತು ತಮಿಳುನಾಡಿನ ರಾಜಕಾರಣ
“ಗ್ರಾಮಸ್ಥರು ಭದ್ರತಾ ಪಡೆಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದ್ದಾರೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಪ್ರದೇಶದಲ್ಲಿ ಬಿಗಿಬಂದೋಬಸ್ತ್ಗಾಗಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಗ್ರಾಮವನ್ನು ನಿರ್ಬಂಧಿಸಲಾಗಿದೆ” ಎಂದು ಬಿಲಾಸ್ಪುರ್ ವಲಯ ಐಜಿಪಿ ಸಂಜೀವ್ ಶುಕ್ಲಾ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಘಟನೆಯನ್ನು ‘ಛತ್ತೀಸ್ಗಢ ಬಚಾವೋ ಆಂದೋಲನ’ವು ದುರದೃಷ್ಟಕರವೆಂದು ಕರೆದಿದೆ. ಘಟನೆಗೆ ರಾಜ್ಯ ಸರ್ಕಾರವನ್ನು ದೂಷಿಸಿದೆ. “ಹಸ್ದಿಯೊದಿಂದ ಅಮೇರಾವರೆಗೆ ಅರಣ್ಯ ಪ್ರದೇಶಗಳಲ್ಲಿ ರಾಜ್ಯಾದ್ಯಂತ ಗಣಿಗಾರಿಕೆಗಳು ನಡೆಯುತ್ತಿವೆ. ಅವುಗಳ ವಿರುದ್ಧ ನಡೆಯುತ್ತಿರುವ ಶಾಂತಿಯುತ, ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರಗಳು ಪೊಲೀಸ್ ಬಲವನ್ನು ಪ್ರಯೋಗಿಸುತ್ತಿವೆ. ಆದಿವಾಸಿ ಮತ್ತು ರೈತರ ಜೀವನೋಪಾಯವನ್ನು ಬಲಿಕೊಟ್ಟು ಛತ್ತೀಸ್ಗಢವನ್ನು ‘ಕಾರ್ಪೊರೇಟ್ ಲೂಟಿ’ಗೆ ಒಡ್ಡುತ್ತಿವೆ” ಎಂದು ಆರೋಪಿಸಿದೆ.




