ಬಿಜೆಪಿ ನೇತೃತ್ವದ ಛತ್ತೀಸ್ಗಢ ರಾಜ್ಯ ಸರ್ಕಾರವು ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಆರೋಪವು ಛತ್ತೀಸ್ಗಢ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದೆ. 34 ಶಾಸಕರನ್ನು ವಿಧಾನಸಭಾ ಸ್ಪೀಕರ್ ರಮಣ್ ಸಿಂಗ್ ಸದನದಿಂದ ಅಮಾನತುಗೊಳಿಸಿದ್ದಾರೆ.
ತನಿಖಾ ಸಂಸ್ಥೆಗಳ ದುರುಪಯೋಗ ಕುರಿತು ಚರ್ಚೆ ಕೋರಿ ಕಾಂಗ್ರೆಸ್ ಮಂಡಿಸಿದ ನಿರ್ಣಯವನ್ನು ಸ್ಪೀಕರ್ ತಿರಸ್ಕರಿಸಿದರು. ಸ್ಪೀಕರ್ ನಡೆಯನ್ನು ಖಂಡಿಸಿ, ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಗದ್ದಲ ಆರಂಭವಾಗುತ್ತಿದ್ದಂತೆಯೇ ವಿಧಾನಸಭೆ ನಿಯಮಗಳ ಅಡಿಯಲ್ಲಿ 34 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಆದಾಗ್ಯೂ, ಕೆಲವೇ ನಿಮಿಷಗಳಲ್ಲಿ ಅಮಾನತನ್ನು ರದ್ದುಗೊಳಿಸಲಾಗಿದೆ. ಆದರೆ, ವಿಪಕ್ಷದ ಶಾಸಕರು ಸಭಾತ್ಯಾಗ ಮಾಡಿ, ಹೊರನಡೆದಿದ್ದಾರೆ.
ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, “ವಿರೋಧ ಪಕ್ಷದ (ಕಾಂಗ್ರೆಸ್) ಕತ್ತು ಹಿಸುಕಲು ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಸಾಕ್ಷಿಗಳನ್ನು ಸಹ ಬೆದರಿಸಲಾಗುತ್ತಿದೆ. ನ್ಯಾಯಾಲಯದ ಎದುರು ಸಾಕ್ಷಿಗಳೆಂದು ತೋರಿಸಲಾದ ಸಾಕ್ಷಿಗಳು ಮತ್ತು ಅವರ ಹೇಳಿಕೆಗಳನ್ನು ವಾಸ್ತವವಾಗಿ ರಾಜ್ಯದ ಆರ್ಥಿಕ ಅಪರಾಧಗಳ ವಿಭಾಗದ (ಇಒಡಬ್ಲ್ಯೂ) ಕಚೇರಿಯಲ್ಲಿ ಮೊದಲೇ ತಯಾರಿಸಲಾಗಿತ್ತು. ನಂತರ ತನಿಖೆಯ ಸಮಯದಲ್ಲಿ ಆ ಸಾಕ್ಷಿಗಳೇ ನೈಜವೆಂದು ಬಿಂಬಿಸಲಾಯಿತು.ಇದು ತುಂಬಾ ದುರದೃಷ್ಟಕರ” ಎಂದು ಹೇಳಿದ್ದಾರೆ.
“ಜುಲೈನಲ್ಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನನ್ನ ಮಗ ಚೈತನ್ಯ ಬಾಘೇಲ್ ಅವರನ್ನು ಬಂಧಿಸಿತು. ರಾಯ್ಗಢ ಜಿಲ್ಲೆಯ ತಮ್ನಾರ್ನಲ್ಲಿ ಕಲ್ಲಿದ್ದಲು ಗಣಿಗಾಗಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರು ನಡೆಸಿದರು. ಆ ಪ್ರತಿಭಟನೆಯಲ್ಲಿ ಮುನ್ನಡೆಸಿದ ಕಾರಣಕ್ಕಾಗಿ, ನನ್ನ ಮಗನನ್ನು ಇಡಿ ಬಂಧಿಸಿದೆ” ಎಂದು ಬಾಘೇಲ್ ದೂರಿದ್ದಾರೆ.
ಈ ಲೇಖನ ಓದಿದ್ದೀರಾ?: ಯಾದವೇತರ ಒಬಿಸಿ ಮತಗಳಿಗೆ ಯುಪಿ ಬಿಜೆಪಿ ಎಸೆದಿರುವ ಹೊಸ ಗಾಳ: ಪಂಕಜ್ ಚೌಧರಿ ಯಾರು ಗೊತ್ತಾ?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧದ ಇಡಿ ಕ್ರಮವನ್ನು ಉಲ್ಲೇಖಿಸಿದ ಬಾಘೇಲ್, “ವಿರೋಧ ಪಕ್ಷಗಳನ್ನು ಹತ್ತಿಕ್ಕುವ ದುರುದ್ದೇಶದಿಂದಲೇ ಎಫ್ಐಆರ್ಅನ್ನೂ ದಾಖಲಿಸದೆ ಇಡಿ ಚಾರ್ಜ್ಶೀಟ್ ಸಲ್ಲಿಸಿತು” ಎಂದು ಆರೋಪಿಸಿದ್ದಾರೆ.
ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ಶಾಸಕ ಅಜಯ್ ಚಂದ್ರಕರ್, “ಕೇಂದ್ರ ತನಿಖಾ ಸಂಸ್ಥೆಗಳ ಕ್ರಮಗಳನ್ನು ರಾಜ್ಯ ವಿಧಾನಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಸ್ಪೀಕರ್ ಅವರು ತಮ್ಮ ಕೊಠಡಿಯಲ್ಲಿಯೇ ನಿರ್ಣಯವನ್ನು ತಿರಸ್ಕರಿಸಿದ್ದಾರೆ. ಸ್ಪೀಕರ್ ನಿರ್ಧಾರವನ್ನು ಗೌರವಿಸಬೇಕು” ಎಂದು ಹೇಳಿದ್ದಾರೆ.
ಆದಾಗ್ಯೂ, ವಿಪಕ್ಷಗಳ ದನಿಯನ್ನು ಸ್ಪೀಕರ್ ಮತ್ತು ಸರ್ಕಾರ ಆಲಿಸಬೇಕು. ವಿಪಕ್ಷಗಳ ದನಿಗೆ ಮನ್ನಣೆ ಸಿಗದೇ ಇರುವುದು ಪ್ರಭುಪ್ರಭುತ್ವದ ಮೇಲಿನ ದಾಳಿಯಾಗಿದೆ. ತನಿಖಾ ಸಂಸ್ಥೆಗಳ ದುರುಪಯೋಗದ ಕುರಿತು ಚರ್ಚೆಗೆ ಅವಕಾಶ ನೀಡಲೇಬೇಕೆಂದು ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದರು.
ಆದಾಗ್ಯೂ, ಅವರ ಬೇಡಿಕೆಯನ್ನು ಸ್ಪೀಕರ್ ಅಂಗೀಕರಿಸಲಿಲ್ಲ. ಆದ್ದರಿಂದ, ಕಾಂಗ್ರೆಸ್ ಶಾಸಕರು ‘ಸತ್ಯಮೇವ ಜಯತೇ’ ಎಂಬ ಘೋಷಣೆಗಳನ್ನು ಕೂಗಿದರು.




