ತೆಲಂಗಾಣದ ಅಭಿವೃದ್ಧಿಯನ್ನು ಈಗ ನೆರೆರಾಜ್ಯಗಳ ಮಟ್ಟಕ್ಕೆ ಸೀಮಿತಗೊಳಿಸದೆ, ಜಾಗತಿಕ ಆರ್ಥಿಕ ಶಕ್ತಿಗಳ ಮಟ್ಟದಲ್ಲಿ ಅಳೆಯುವ ಹಂತಕ್ಕೆ ರಾಜ್ಯ ಬಂದಿದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.
ಹೈದರಾಬಾದ್ನ ಸಚಿವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ʼತೆಲಂಗಾಣ ರೈಸಿಂಗ್ 2047ʼ ಎಂಬ ದೂರದೃಷ್ಟಿ ದಸ್ತಾವೇಜನ್ನು ಬಿಡುಗಡೆ ಮಾಡಿ ಮಾತನಾಡಿದರು. 2047ರ ವೇಳೆಗೆ ರಾಜ್ಯವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ನೀಲನಕ್ಷೆ ಇದಾಗಿದೆ ಎಂದು ತಿಳಿಸಿದರು.
“ನಮ್ಮ ಸ್ಪರ್ಧೆ ಈಗ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ್ ಜೊತೆಗೆ, ತೆಲಂಗಾಣಕ್ಕೆ ದೊಡ್ಡ ಮಟ್ಟದ ವಿದೇಶಿ ಹೂಡಿಕೆಗಳನ್ನು ತರುತ್ತೇವೆ; ಆಂಧ್ರಪ್ರದೇಶ ಮತ್ತು ತಮಿಳುನಾಡು ನಮ್ಮ ಅಭಿವೃದ್ಧಿಗೆ ಮಾನದಂಡಗಳಲ್ಲ” ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
‘ದೂರದೃಷ್ಟಿ ಮತ್ತು ತಂತ್ರ’ ಕೇಂದ್ರಿತವಾದ ಈ ದಸ್ತಾವೇಜು ದೇಶದ ಅಭಿವೃದ್ಧಿಯಲ್ಲಿ ತೆಲಂಗಾಣದ ಪಾಲನ್ನು ಶೇ.10ರಷ್ಟು ಗಂಭೀರವಾದ ಗುರಿಯೊಂದಿಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್
ಡಿಸೆಂಬರ್ 8 ಮತ್ತು 9ರಂದು ಹೈದರಾಬಾದ್ನ ಫ್ಯೂಚರ್ ಸಿಟಿಯಲ್ಲಿ ನಡೆಯಲಿರುವ ಜಾಗತಿಕ ಶೃಂಗಸಭೆಯಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಗುವುದು. ವಿಶ್ವದಾದ್ಯಂತ ನಾಯಕರನ್ನು ಆಹ್ವಾನಿಸಲಾಗುತ್ತಿದೆ. ನೀತಿ ಆಯೋಗ ಮತ್ತು ಐಎಸ್ಬಿ ಸಂಸ್ಥೆಗಳ ಸಹಕಾರದೊಂದಿಗೆ ತಯಾರಾದ ಈ ಸಮಗ್ರ ದಸ್ತಾವೇಜು ಜನರನ್ನು ಪಾಲುದಾರರನ್ನಾಗಿ ಮಾಡಿಕೊಂಡಿದೆ ಮತ್ತು ರಾಜ್ಯವನ್ನು ಪರಸ್ಪರ ಬೆಂಬಲಿತ ಮೂರು ಆರ್ಥಿಕ ವಲಯಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಶೃಂಗಸಭೆಗೆ ಆಹ್ವಾನಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರೇವಂತ್ ರೆಡ್ಡಿ ಭೇಟಿಯಾಗಿ ವೈಯಕ್ತಿಕವಾಗಿ ಆಹ್ವಾನ ನೀಡಲಿದ್ದಾರೆ.
ಕೇಂದ್ರ ಸಚಿವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಮುಖ ಕೈಗಾರಿಕಾ ಉದ್ಯಮಿಗಳು, ಖ್ಯಾತ ಅರ್ಥಶಾಸ್ತ್ರಜ್ಞರು, ಕ್ರೀಡಾಪಟುಗಳು, ಮಾಧ್ಯಮ ವ್ಯಕ್ತಿಗಳು ಮತ್ತು ರಾಯಭಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ 4,500 ಪ್ರಮುಖ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ರೇವಂತ್ ರೆಡ್ಡಿ ತಿಳಿಸಿದರು.





