ತಮ್ಮ ಮನೆಯ ಗಣೇಶ ಪೂಜೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸಲಾಗಿರುವ ಕುರಿತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮೌನ ಮುರಿದಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರಲ್ಲಿ ಸಾಕಷ್ಟು ಪ್ರಬುದ್ಧತೆ ಇದೆ. ಕಾರ್ಯನಿರ್ವಾಹಕ ಮುಖ್ಯಸ್ಥರಲ್ಲಿ ನ್ಯಾಯಾಂಗಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಚರ್ಚಿಸಲಾಗಿಲ್ಲ. ಪ್ರೋಟೋಕಾಲ್ ತುಂಬ ಕಟ್ಟುನಿಟ್ಟಾಗಿರುತ್ತವೆ. ರಾಜಕೀಯ ಕಾರ್ಯನಿರ್ವಾಹಕ ಮುಖ್ಯಸ್ಥರೊಂದಿಗೆ ನ್ಯಾಯಾಂಗದ ಯಾವುದೇ ವಿಷಯಗಳನ್ನು ಚರ್ಚಿಸಲಾಗಿಲ್ಲ. ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತ ಕರ್ತವ್ಯಗಳ ಬಗ್ಗೆ ತಿಳಿದಿದೆ. ಅವರಿಗೂ ರಾಜಕೀಯ ನಡವಳಿಕೆಗಳ ಬಗ್ಗೆ ಅರಿವಿದೆ. ಸ್ವಾಯತ್ತ ನ್ಯಾಯಾಂಗದ ಮುಖ್ಯ ನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿ ಒಳಗೊಂಡಂತೆ ಯಾವುದೇ ನ್ಯಾಯಾಧೀಶರು ಯಾವುದೇ ಬೆದರಿಕೆಗೆ ಒಳಗಾಗುವುದಿಲ್ಲ” ಎಂದಿದ್ದಾರೆ.
ರಾಜ್ಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ವಾಡಿಕೆ. ಹಾಗೆಯೇ ಇದು ಕೂಡ. ರಾಜಕೀಯದಲ್ಲಿಯೂ ಕೂಡ ನ್ಯಾಯಾಂಗಕ್ಕೆ ಹೆಚ್ಚಿನ ಗೌರವವಿದೆ. ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸುಗಮವಾಗಿ ಕಾರ್ಯಗಳು ಸಾಗಲು ಸಭೆಗಳು ಅಗತ್ಯವಾಗಿವೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ
ನಾವು ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಬೇಕು. ಏಕೆಂದರೆ ಬಜೆಟ್ ಒದಗಿಸುವವರು ಅವರು. ನ್ಯಾಯಾಂಗಕ್ಕೆ ಬಜೆಟ್ ಒದಗಿಸುವವರು ಅವರೇ ವಿನಾ: ನ್ಯಾಯಾಧೀಶರಲ್ಲ. ನಾವು ಭೇಟಿಯಾಗದೇ ಪತ್ರಗಳ ಮೇಲೆ ಮಾತ್ರ ಅವಲಂಬಿತವಾಗಿದ್ದರೆ ನಮ್ಮ ಕೆಲಸ ನಡೆಯುವುದಿಲ್ಲ ಎಂದು ಹೇಳಿದರು.
ನ.10ರಂದು ನಿವೃತ್ತಿ ಹೊಂದಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ದೆಹಲಿ ನಿವಾಸಕ್ಕೆ ಸೆಪ್ಟೆಂಬರ್ನಲ್ಲಿ ಗಣೇಶ ಪೂಜೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದರು. ಈ ಭೇಟಿಗೆ ಸಂಬಂಧಿಸಿದಂತೆ ವಿಪಕ್ಷಗಳು ಟೀಕೆ ಮಾಡಿದ್ದವು.
ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರಧಾನಿಯವರು ಉನ್ನತ ವ್ಯಕ್ತಿಗಳು. ಒಬ್ಬ ಹಾಲಿ ಸಿಜೆಐ ಮನೆಗೆ ಪ್ರಧಾನಿಯೊಬ್ಬರು ಭೇಟಿ ನೀಡುವುದು ಸರಿಯೇ? ಇದು ನ್ಯಾಯಾಂಗಕ್ಕೆ ಧಕ್ಕೆ ತಂದಹಾಗಲ್ಲವೇ? ಎಂದು ವಿಪಕ್ಷಗಳು ಕಿಡಿಕಾರಿದ್ದವು.





