ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಇಂದು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶ ಜಸ್ಟೀಸ್ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಮತ್ತು ಸುಪ್ರೀಂ ಕೋರ್ಟ್ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಿದ್ದಾರೆ.
ಕಳೆದ ವಾರ ಕೇಂದ್ರ ಸರ್ಕಾರವು ಸಿಜೆಐ ಗವಾಯಿ ಅವರಿಗೆ ಶಿಫಾರಸಿನ ಕುರಿತು ಪತ್ರ ಬರೆದಿತ್ತು. ಆದರೆ, ಆ ಸಮಯದಲ್ಲಿ ಸಿಜೆಐ ಗವಾಯಿ ಅವರು ಭೂತಾನ್ಗೆ ಅಧಿಕೃತ ಭೇಟಿಯಲ್ಲಿದ್ದರು. ದೀಪಾವಳಿ ರಜೆಯ ನಂತರ ಕೋರ್ಟ್ನ ಮೊದಲ ಕೆಲಸದ ದಿನವಾದ ಸೋಮವಾರ ತಮ್ಮ ಶಿಫಾರಸು ಪತ್ರದೊಂದಿಗೆ ಜಸ್ಟೀಸ್ ಕಾಂತ್ ಅವರನ್ನು ಭೇಟಿಯಾದರು.
ಸಿಜೆಐ ಗವಾಯಿ ಅವರು ನವೆಂಬರ್ 24 ರಂದು ನಿವೃತ್ತರಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಕಾರ್ಯವಿಧಾನದ ಪ್ರಕಾರ, ಕಾನೂನು ಸಚಿವಾಲಯವು ಹಾಲಿ ಮುಖ್ಯ ನ್ಯಾಯಮೂರ್ತಿಯಿಂದ ಶಿಫಾರಸನ್ನು ಕೋರಿತ್ತದೆ. ಇದಕ್ಕೆ ಉತ್ತರವಾಗಿ ಸಿಜೆಐ ಶಿಫಾರಸನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ, ಇದು ಮುಂದಿನ ಮುಖ್ಯ ನ್ಯಾಯಮೂರ್ತಿಯ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುತ್ತದೆ.
ಜಸ್ಟೀಸ್ ಸೂರ್ಯ ಕಾಂತ್ ಅವರು ಫೆಬ್ರವರಿ 10, 1962 ರಂದು ಹರಿಯಾಣದ ಹಿಸಾರ್ನಲ್ಲಿ ಜನಿಸಿದರು. ಹಿಸಾರ್ನಿಂದ ಪದವಿ ಪೂರ್ಣಗೊಳಿಸಿದ ನಂತರ, 1984 ರಲ್ಲಿ ರೋಹ್ಟಕ್ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ತಮ್ಮ ವೃತ್ತಿಜೀವನವನ್ನು ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ಆರಂಭಿಸಿದ ಅವರು, 1985 ರಲ್ಲಿ ಚಂಡೀಗಢಕ್ಕೆ ಸ್ಥಳಾಂತರಗೊಂಡು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ವಕೀಲಿಕೆ ಮಾಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಗಷ್ಟೇ ಅಲ್ಲ, ಸಮಾಜಕ್ಕೆ ಅರ್ಥವಾಗಿದೆಯೇ ಆರ್ಎಸ್ಎಸ್ ಅಜೆಂಡಾ?
ಜುಲೈ 7, 2000 ರಂದು ಅವರು ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು ಮತ್ತು ಮಾರ್ಚ್ 2001 ರಲ್ಲಿ ಹಿರಿಯ ವಕೀಲರಾಗಿ ಗುರುತಿಸಲ್ಪಟ್ಟರು. ಜನವರಿ 9, 2004 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡರು. ಅಕ್ಟೋಬರ್ 2018 ರಲ್ಲಿ ಅವರು ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾದರು. ಮೇ 24, 2019 ರಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಆಯ್ಕೆಯಾದರು. ಅವರು ಫೆಬ್ರವರಿ 9, 2027 ರಂದು ನಿವೃತ್ತರಾಗಲಿದ್ದಾರೆ.
ಜಸ್ಟೀಸ್ ಕಾಂತ್ ಅವರು ಸುಪ್ರೀಂ ಕೋರ್ಟ್ನ ಹಲವು ಪ್ರಮುಖ ತೀರ್ಪುಗಳಲ್ಲಿ ಭಾಗಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ 370 ನೇ ವಿಧಿ ರದ್ದತಿ, ಚುನಾವಣಾ ಬಾಂಡ್ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದ ತೀರ್ಪು, ಪೆಗಾಸಸ್ ಸ್ಪೈವೇರ್ ಪ್ರಕರಣ ಮತ್ತು ರಾಜದ್ರೋಹ ಕಾನೂನಿನ ಅಮಾನತುಗೊಳಿಸುವಿಕೆಯಂತಹ ಪ್ರಮುಖ ಪ್ರಕರಣಗಳಲ್ಲಿ ಅವರು ಪೀಠದ ಸದಸ್ಯರಾಗಿದ್ದರು.





