ನ್ಯಾಯಾಂಗದ ಕುರಿತಾದ ವಿವಾದಾತ್ಮಕ ಅಧ್ಯಾಯವನ್ನು ಹೊಂದಿದ್ದ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮೇಲೆ ಸುಪ್ರೀಂ ಕೋರ್ಟ್ ಸಂಪೂರ್ಣ ನಿಷೇಧ ಹೇರಿತ್ತು. ಈ ನಿಷೇಧದ ಆದೇಶ ಬಂದ ಎರಡು ವಾರಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಇಂದು ಬೇಷರತ್ ಬಹಿರಂಗ ಕ್ಷಮೆಯಾಚಿಸಿದೆ. ಪುಸ್ತಕವನ್ನು ಹಿಂಪಡೆದಿರುವುದಾಗಿ ಘೋಷಿಸಿದೆ.
ಕ್ಷಮಾಪಣಾ ಪತ್ರ ಪ್ರಕಟಿಸಿರುವ ಎನ್ಸಿಇಆರ್ಟಿ; “ಇತ್ತೀಚೆಗೆ 8ನೇ ತರಗತಿಯ (ಭಾಗ-II) ‘ಎಕ್ಸ್ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್’ ಎಂಬ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಸಿದ್ದಪಡಿಸಲಾಗಿತ್ತು. ಇದರಲ್ಲಿ ‘ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಶೀರ್ಷಿಕೆಯ 4ನೇ ಅಧ್ಯಾಯವಿತ್ತು. ಆ ಅಧ್ಯಾಯವನ್ನು ಸೇರಿಸಿದ್ದಕ್ಕಾಗಿ ಎನ್ಸಿಇಆರ್ಟಿಯ ನಿರ್ದೇಶಕರು ಮತ್ತು ಸದಸ್ಯರು ಬೇಷರತ್ ಕ್ಷಮೆಯಾಚಿಸುತ್ತಿದ್ದಾರೆ. ಇಡೀ ಪುಸ್ತಕವನ್ನು ಹಿಂಪಡೆಯಲಾಗಿದೆ ಮತ್ತು ಅದು ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ” ಎಂದು ಹೇಳಿದೆ.
ಪಠ್ಯಪುಸ್ತಕದ 4ನೇ ಅಧ್ಯಾಯದಲ್ಲಿ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಎಂಬ ವಿಭಾಗವನ್ನು ಸೇರಿಸಲಾಗಿತ್ತು. ಈ ಕಾರಣದಿಂದಾಗಿ ಎನ್ಸಿಇಆರ್ಟಿ ಸುಪ್ರೀಂ ಕೋರ್ಟ್ನಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಪಠ್ಯವನ್ನು ಖಂಡಿಸಿದ್ದ ಸಿಜೆಐ ಸೂರ್ಯ ಕಾಂತ್, “ನ್ಯಾಯಾಂಗದ ಸಮಗ್ರತೆಗೆ ಕಳಂಕ ತರಲು ಮತ್ತು ಸಂಸ್ಥೆಯನ್ನು ದೂಷಿಸಲು ಭೂಮಿಯ ಮೇಲಿನ ಯಾರನ್ನೂ ನಾನು ಬಿಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ನಾನು ಅದನ್ನು ಅನುಮತಿಸುವುದಿಲ್ಲ. ಅವರು ಎಷ್ಟೇ ದೊಡ್ಡವರಾಗಿದ್ದರೂ, ಕಾನೂನು ತನ್ನ ಹಾದಿಯಲ್ಲಿ ನಡೆಯಲಿದೆ. ಇದನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿದಿದೆ” ಎಂದು ಕಠುವಾಗಿ ಹೇಳಿದ್ದರು.
ಈ ಲೇಖನ ಓದಿದ್ದೀರಾ?: ಟಿಆರ್ಪಿ ವರದಿಗೆ ನಾಲ್ಕು ವಾರಗಳ ಕೊಕ್ಕೆ; ಮಾಧ್ಯಮಗಳಿಗೆ TRP ಗೀಳು ಯಾಕೆ?
“ಇಂತಹ ಬೆಳವಣಿಗೆಗಳನ್ನು ಪರಿಶೀಲಿಸದೆ ಬಿಟ್ಟರೆ ಅದು ನ್ಯಾಯಾಂಗದ ಮೇಲೆ ಜನರಿಗಿರುವ ವಿಶ್ವಾಸವನ್ನು ಕುಗ್ಗಿಸುತ್ತದೆ. ಇದಕ್ಕೆ ಜವಾಬ್ದಾರರು ಯಾರು ಎಂಬುದನ್ನು ಕಂಡುಹಿಡಿಯುವುದು ಸಂಸ್ಥೆಯ ಮುಖ್ಯಸ್ಥನಾಗಿ ನನ್ನ ಕರ್ತವ್ಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಸಿಜೆಐ ಹೇಳಿದ್ದರು. ಪುಸ್ತಕದ ಮೇಲೆ ಸುಪ್ರೀಂ ಕೋರ್ಟ್ ಸಂಪೂರ್ಣ ನಿಷೇಧ ಹೇರಿತ್ತು. ಎಲ್ಲ ಭೌತಿಕ ಪ್ರತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಡಿಜಿಟಲ್ ಆವೃತ್ತಿಗಳನ್ನು ಅಳಿಸಿಹಾಕಲು ಆದೇಶಿಸಿತ್ತು.




