ಕೇರಳದ ಸಿಪಿಐ(ಎಂ) ನೇತೃತ್ವದ ಎಡಪಂಥೀಯ (ಎಲ್ಡಿಎಫ್) ಸರ್ಕಾರವು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ನಡೆಸಲಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಒಂದು ಭಾಗದ ಉದ್ಘಾಟನೆ ನಡೆಸಲಿರುವ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಮೊಹಮ್ಮದ್ ರಿಯಾಜ್ ಅವರನ್ನು ಆಹ್ವಾನಿಸದೆ ಇರುವ ಕಾರಣಕ್ಕೆ ಇಡೀ ಕೇರಳ ಸರ್ಕಾರವೇ ಅಸಮಾಧಾನಗೊಂಡಿದ್ದು, ಪ್ರಧಾನಿ ಮೋದಿ ಅಧಿಕೃತ ಕಾರ್ಯಕ್ರಮಗಳಿಗೆ ಹಾಜರಾಗದಿರಲು ತೀರ್ಮಾನಿಸಿದೆ.
ಕೊಚ್ಚಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿದ್ಯುತ್ ಸಚಿವ ಕೆ. ಕೃಷ್ಣನ್ ಕುಟ್ಟಿ ಮತ್ತು ಸ್ಥಳೀಯ ಆಡಳಿತ ಸಚಿವ ಎಂ.ಬಿ. ರಾಜೇಶ್ ಅವರನ್ನು ಆಹ್ವಾನಿಸಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ತಮ್ಮನ್ನು ಆಹ್ವಾನಿಸದ ಬಗ್ಗೆ ಪ್ರತಿಕ್ರಿಯಿಸಿರುವ ರಿಯಾಜ್ ಅವರು, “ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಯ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವನಾದ ನನ್ನನ್ನು ಆಹ್ವಾನಿಸಿಲ್ಲ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರನ್ನು ಆಹ್ವಾನಿಸಿಸಲಾಗಿದೆ ಎಂಬುದು ಆಶ್ಚರ್ಯಕರ” ಎಂದು ತಿಳಿಸಿದ್ದಾರೆ.
ಆದರೆ ಚಂದ್ರಶೇಖರ್, “ಮುಖ್ಯಮಂತ್ರಿಯ ಅಳಿಯ ಅಥವಾ ಇತರ ಯಾವುದೇ ಕುಟುಂಬ ಸದಸ್ಯರನ್ನು ಆಹ್ವಾನಿಸಬೇಕೆಂದು ಶಿಷ್ಟಾಚಾರದಲ್ಲಿ ಉಲ್ಲೇಖಿಸಿಲ್ಲ” ಎಂದಿದ್ದಾರೆ. ಆದರೆ ಇಲ್ಲಿ ರಿಯಾಜ್ ಲೋಕೋಪಯೋಗಿ ಸಚಿವ. ಆದ್ದರಿಂದ ಅವರನ್ನು ಆಹ್ವಾನಿಸಬೇಕಿತ್ತು ಎಂದು ಸಿಪಿಐಎಂ ಹೇಳಿದೆ.
ಇನ್ನು ಕೇರಳ ಸರ್ಕಾರದ ಅಬಕಾರಿ ಸಚಿವ ಎಂ ಬಿ ರಾಜೇಶ್, “ಲೋಕೋಪಯೋಗಿ ಸಚಿವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಕೇರಳಕ್ಕೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ ಪ್ರಧಾನಿ ಮೋದಿ ಕೇರಳ ಭೇಟಿ ನೀಡಿದ ವೇಳೆ ಭದ್ರತಾ ಸಿಬ್ಬಂದಿ ಗುರುತಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್ ತೋರಿಸಲು ಕೇಳಿದ ತಮ್ಮ ಕಹಿ ಅನುಭವವನ್ನೂ ವಿವರಿಸಿದ್ದಾರೆ. ಇನ್ನು ವಿದ್ಯುತ್ ಸಚಿವರು ಅನಾರೋಗ್ಯದ ಕಾರಣ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ಕೇರಳದಲ್ಲಿ ಬಿಜೆಪಿ-ಸಿಪಿಐಎಂ ಸಂಬಂಧವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ. ಬಿಜೆಪಿ, ಸಿಪಿಐಎಂ ನಾಯಕರುಗಳು ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದಾರೆ.
ಕೇರಳದಲ್ಲಿ ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಕೇಂದ್ರ ಸರ್ಕಾರ ಕೇರಳದಲ್ಲಿ ಬಿಜೆಪಿಯ ಗುರುತನ್ನು ವಿಸ್ತರಿಸುವ ಸತತ ಪ್ರಯತ್ನ ಮಾಡುತ್ತಿದೆ. ಇನ್ನೊಂದೆಡೆ ಎಲ್ಡಿಎಫ್ ಸದ್ಯ ಇರುವ ಅಧಿಕಾರವನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿದೆ. ಇವೆಲ್ಲವುದರ ನಡುವೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ರಚನೆಗೆ ತಯಾರಿ ನಡೆಸುತ್ತಿದೆ.





