ಉತ್ತರ ಭಾರತದಲ್ಲಿ ಶೀತಮಾರುತ ಹೆಚ್ಚಾಗುತ್ತಿದೆ. ಈ ನಡುವೆ ಮುಂದಿನ ವಾರದಲ್ಲಿ ಉತ್ತರ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟವಾದ ಮಂಜು ಮುಂದುವರೆಯುವ ಸಾಧ್ಯತೆಯಿದೆ. ಜತೆಗೆ ಹಿಮಪಾತದ ಅಪಾಯವೂ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಮುಂದಿನ ಕೆಲವು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಬಿಹಾರ, ಜಾರ್ಖಂಡ್, ರಾಜಸ್ಥಾನ ಮತ್ತು ಪೂರ್ವ ಭಾರತದ ಕೆಲವು ಭಾಗಗಳಿಗೆ ಪ್ರತ್ಯೇಕ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣ ವಿಸ್ತರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ಶೀತಗಾಳಿ: ಎರಡು ದಿನಗಳ ಬಳಿಕ ಮಳೆ
ಜನವರಿ ಮಧ್ಯದವರೆಗೆ ಇದೇ ರೀತಿಯ ಹವಾಮಾನ ಇರಲಿದೆ. ಜನವರಿ 5ರಂದು ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಮಧ್ಯಪ್ರದೇಶ ಮತ್ತು ಬಿಹಾರದ ಪ್ರತ್ಯೇಕ ಪ್ರದೇಶಗಳಲ್ಲಿ ಹಗಲಿನಲ್ಲಿ ಶೀತ ಗಾಳಿ ಇರಲಿದೆ. ಪೂರ್ವ ರಾಜಸ್ಥಾನ ಮತ್ತು ಪೂರ್ವ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿಯೂ ಇದೇ ರೀತಿ ಶೀತಮಾರುತ ಇರಲಿದೆ ಎಂದು ಐಎಂಡಿ ಎಚ್ಚರಿಸಿದೆ.
ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಪ್ರತ್ಯೇಕ ಸ್ಥಳಗಳಲ್ಲಿ ಜನವರಿ 5ರಿಂದ 8ರವರೆಗೆ, ಪಶ್ಚಿಮ ರಾಜಸ್ಥಾನದಲ್ಲಿ ಜನವರಿ 5ರಿಂದ 9ರವರೆಗೆ, ಪೂರ್ವ ರಾಜಸ್ಥಾನದಲ್ಲಿ ಜನವರಿ 5ರಿಂದ 10ರವರೆಗೆ ಮತ್ತು ಜಾರ್ಖಂಡ್ನಲ್ಲಿ ಜನವರಿ 6 ಮತ್ತು 7ರವರೆಗೆ ಶೀತಗಾಳಿ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇನ್ನು 5 ಮತ್ತು 6ರಂದು ಉತ್ತರಾಖಂಡದಲ್ಲಿ ಹಿಮಪಾತವಾಗುವ ಸಾಧ್ಯತೆಯಿದೆ.
ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ನ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು 0 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ. ಪೂರ್ವ ರಾಜಸ್ಥಾನದ ಸಿಕಾರ್ನಲ್ಲಿ ಕನಿಷ್ಠ ತಾಪಮಾನವು 2.5 ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗಿದೆ.





