ಪಂಜಾಬ್ನ ಲುಧಿಯಾನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಕೋಮು ಘರ್ಷಣೆ ನಡೆದಿದ್ದು, ಹಲವು ಕೈದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಜೈಲು ಸೂಪರಿಂಟೆಂಡೆಂಟ್ ಕುಲ್ವಂತ್ ಸಿಂಗ್ ಸಿಧು, ಜೈಲು ಡಿಎಸ್ಪಿ ಜಗಜೀತ್ ಸಿಂಗ್ ಮೇಲೂ ಕೈದಿಗಳು ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ರಾತ್ರಿ, ಲುಧಿಯಾನದಲ್ಲಿ ಪೊಲೀಸ್ ವಾಹನಗಳು ಸೈರನ್ ಮೊಳಗಿಸುತ್ತಾ ಜೈಲು ಇರುವ ತಾಜ್ಪುರ ರಸ್ತೆಗೆ ಕಡೆಗೆ ವೇಗವಾಗಿ ಧಾವಿಸುತ್ತಿದ್ದವು. ಅವುಗಳನ್ನು ಗಮನಿಸಿದ ನಿವಾಸಿಗಳು ಏನೋ ಗಂಭೀರ ಸಮಸ್ಯೆಯಾಗಿದೆ ಎಂಬುದನ್ನು ಭಾವಿಸಿದರು. ಹಲವರು ಪೊಲೀಸ್ ವಾಹನಗಳ ಹಿಂದೆ ದೌಡಾಯಿಸಿದರು. ಪೊಲೀಸ್ ವಾಹನಗಳು ಜೈಲಿಗೆ ಧಾವಿಸಿ, ತ್ವರಿತ ಕಾರ್ಯಾಚರಣೆ ಆರಂಭಿಸಿದವು. ಘರ್ಷಣೆ ನಡೆಸುತ್ತಿದ್ದ ಕೈದಿಗಳನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದರು.
ಪೊಲೀಸರ ಪ್ರಕಾರ, ಆರಂಭದಲ್ಲಿ ಕೈದಿಗಳ ನಡುವೆ ಮುಷ್ಟಿ ಕಾಳಗ ನಡೆದಿದೆ. ಇದು, ಹಿಂಸಾಚಾರಕ್ಕೆ ಕಾರಣವಾಗಿದೆ. ಇಬ್ಬರು ಮತ್ತು ಮೂವರಿದ್ದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಅವರನ್ನು ಅಧಿಕಾರಿಗಳು ತಡೆದು, ಸ್ಥಳಾಂತರಗೊಳಿಸಿದ್ದಾರೆ. ಆದರೆ, ಐವರು ಮತ್ತೆ ಗಲಾಟೆ ನಡೆಸಿದ್ದಾರೆ.
ಘರ್ಷಣೆ ಆರಂಭಿಸಿದ್ದ ಐವರಲ್ಲಿ ಓರ್ವ ಕೈದಿಯು ತಮ್ಮನ್ನು ತಮ್ಮ ಧರ್ಮದ ಕಾರಣಕ್ಕಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡೂ ಗುಂಪುಗಳಿಗೆ ಇತರ ಕೈದಿಗಳು ಸೇರಿಕೊಂಡಿದ್ದು, ಗಲಾಟೆ ತೀವ್ರತೆ ಪಡೆದುಕೊಂಡಿದೆ. ಘರ್ಷಣೆಯನ್ನು ತಡೆಯಲು ಜೈಲು ಸಿಬ್ಬಂದಿ ಯತ್ನಿಸಿದರೂ, ತಡೆಯಲಾಗಿಲ್ಲ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ವಿಮಾನಯಾನ ದರಕ್ಕಿಲ್ಲ ಮಿತಿ: ‘ಹವಾಯಿ ಚಪ್ಪಲಿ ಧರಿಸಿದವರು ಹವಾಯಿ ಜಹಜು ಹತ್ತಬೇಕು’ -ಮೋದಿ ಮಾತು ಮಾತಾಗಿಯೇ ಉಳಿಯಿತೇ?
ಜೈಲು ಸೂಪರಿಂಟೆಂಡೆಂಟ್ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ, ಜೈಲು ಸಿಬ್ಬಂದಿಗಳ ಮೇಲೆ ಕೈದಿಗಳು ಇಟ್ಟಿಗೆಗಳನ್ನು ತೂರಿದ್ದಾರೆ. ಈ ವೇಳೆ, ಸೂಪರಿಂಟೆಂಡೆಂಟ್ ಮೇಲೆ ಇಟ್ಟಿಗೆ ಬಿದ್ದು, ಅವರು ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಘರ್ಷಣೆ ಹೆಚ್ಚಾಗುತ್ತಿದ್ದಂತೆಯೇ, ಜೈಲು ಅಧಿಕಾರಿಗಳು ಸೈರನ್ಅನ್ನು ಆನ್ ಮಾಡಿ ಪೊಲೀಸರನ್ನು ಕರೆದಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಲುಧಿಯಾನ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳ ನೇತೃತ್ವದ ಪೊಲೀಸ್ ಪಡೆಗಳು ಜೈಲಿಗೆ ಧಾವಿಸಿವೆ. ಜೈಲು ಅಧಿಕಾರಿಗಳಿಗೆ ಕೈದಿಗಳನ್ನು ಮತ್ತೆ ತಮ್ಮ ಬ್ಯಾರಕ್ಗಳಿಗೆ ದೂಡಿ, ಕೂಡಿ ಹಾಕಿದ್ದಾರೆ.
ಈ ಹಿಂದೆ, 2019ರ ಜೂನ್ನಲ್ಲಿಯೂ ಲುಧಿಯಾನ ಜೈಲಿನಲ್ಲಿ ಹಿಂಸಾಚಾರ ನಡೆದಿತ್ತು. ಆ ಘರ್ಷಣೆಯನ್ನು ಹತ್ತಿಕ್ಕಲು ಪೊಲೀಸರು 150ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದರು.




