ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣ ದೇವಸ್ಥಾನದಲ್ಲಿ ತಮಟೆ ಬಾರಿಸಲು ಬರದ ಕಾರಣ ಹಳ್ಳಿಯಲ್ಲಿರುವ ಎಲ್ಲಾ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಭಾರತ-ಚೀನಾ ಗಡಿಯ ಸಮೀಪವಿರುವ ನಿತಿ ಕಣಿವೆಯಲ್ಲಿರುವ ಸುಭಾಯ್ ಗ್ರಾಮದ ಸ್ಥಳೀಯ ಪಂಚಾಯತ್ ಭಾನುವಾರ ಬಹಿಷ್ಕಾರವನ್ನು ಘೋಷಿಸಿದೆ. ಗ್ರಾಮದಲ್ಲಿ ಸುಮಾರು ಅರ್ಧ ಡಜನ್ನಷ್ಟು ಪರಿಶಿಷ್ಟ ಜಾತಿ ಕುಟುಂಬಗಳಿದದು ಗ್ರಾಮದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳಲ್ಲಿ ತಮಟೆ ಬಾರಿಸುವ ಪದ್ಧತಿ ಬೆಳೆದುಬಂದಿದೆ.
ಆದರೆ ಪುಷ್ಕರ್ ಲಾಲ್ ಎಂಬವರು ತಮ್ಮ ಪಾಳಿಯ ಸಂದರ್ಭದಲ್ಲಿ ಅನಾರೋಗ್ಯದ ಕಾರಣ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಮಟೆ ಬಾರಿಸಲು ಹೋಗಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಸ್ಥಳೀಯ ಪಂಚಾಯತ್ ಇಡೀ ಸಮುದಾಯಕ್ಕೆ ಗ್ರಾಮದಿಂದ ಸಾಮಾಜಿಕ ಬಹಿಷ್ಕಾರಕ್ಕೆ ಆದೇಶಿಸಿದೆ.
ಇದನ್ನು ಓದಿದ್ದೀರಾ? ಹದಗೆಟ್ಟ ರಸ್ತೆ| 600ಕ್ಕೂ ಹೆಚ್ಚು ತ್ರಿಪುರಾ ಬುಡಕಟ್ಟು ಮತದಾರರಿಂದ ಚುನಾವಣೆ ಬಹಿಷ್ಕಾರ
ಪಂಚಾಯತ್ ಸದಸ್ಯರೊಬ್ಬರು ಬಹಿಷ್ಕಾರವನ್ನು ಘೋಷಿಸಿದ್ದು ಆದೇಶವನ್ನು ಪಾಲಿಸದಿದ್ದರೆ ಇದೇ ರೀತಿಯ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಪಂಚಾಯತ್ ಆದೇಶದ ಪ್ರಕಾರ, ಎಸ್ಸಿ ಕುಟುಂಬಗಳು ಗ್ರಾಮದಲ್ಲಿರುವ ಅರಣ್ಯ ಮತ್ತು ಜಲಮೂಲಗಳನ್ನು ಬಳಸದಂತೆ ತಿಳಿಸಲಾಗಿದೆ. ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಲು, ವಾಹನಗಳಲ್ಲಿ ಪ್ರಯಾಣಿಸಲು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.
ಪ್ರಸ್ತುತ ಬಹಿಷ್ಕಾರಕ್ಕೆ ಒಳಗಾದ ದಲಿತ ಕುಟುಂಬಗಳು ಜೋಶಿಮಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಮಕೃಷ್ಣ ಖಂಡ್ವಾಲ್ ಮತ್ತು ಯಶವೀರ್ ಸಿಂಗ್ ಎಂಬ ಇಬ್ಬರು ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ.




