ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಪ್ರಚಾರವನ್ನು ಕೋಮು ವಿಭಜನೆ ಉತ್ತೇಜಿಸುವ ಭಾಷಣದ ಮೂಲಕವೇ ಬಿಜೆಪಿ ಶುರು ಮಾಡಿದೆ. ಇದೀಗ ಈ ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಅಭ್ಯರ್ಥಿ ವಿರುದ್ಧ ದೂರು ದಾಖಲಾಗಿದೆ.
ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ಬಿ ಗೋಪಾಲಕೃಷ್ಣನ್ ಕೋಮು ವಿಭಜನೆ ಪ್ರಚೋದಿಸುವ ಭಾಷಣ ಮಾಡಿದ್ದು, ಇದರ ವಿರುದ್ಧ ಕಾಂಗ್ರೆಸ್ನ ವಿದ್ಯಾರ್ಥಿ ಸಂಘಟನೆ ಕೆಎಸ್ಯು ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ. ಹಾಗೆಯೇ ಕೆಎಸ್ಯು ದೂರುಗಳನ್ನೂ ಸಲ್ಲಿಸಿದೆ.
ಇದನ್ನು ಓದಿದ್ದೀರಾ? ಕೇರಳ | ಕೋಮು ವಿಭಜನೆ ಉತ್ತೇಜಿಸುವ ಭಾಷಣದ ಮೂಲಕವೇ ಬಿಜೆಪಿ ಪ್ರಚಾರ ಶುರು
“ಗುರುವಾಯೂರಿನಲ್ಲಿ ಐದು ದಶಕಗಳಿಗೂ ಅಧಿಕ ಕಾಲದಿಂದ ಹಿಂದೂ ಶಾಸಕರನ್ನು ಆಯ್ಕೆ ಮಾಡಲಾಗಿಲ್ಲ” ಎಂದು ಗೋಪಾಲಕೃಷ್ಣನ್ ಭಾಷಣದ ವೇಳೆ ಹೇಳಿದ್ದಾರೆ. ಹಾಗೆಯೇ ಎಡ ಪ್ರಜಾಸತ್ತಾತ್ಮಕ ರಂಗ ಮತ್ತು ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ ಎರಡೂ ಕ್ಷೇತ್ರದಲ್ಲಿ ಹಿಂದೂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಿದೆ ಎಂದು ಆರೋಪಿಸಿದ್ದಾರೆ.
ಇನ್ನು ಗುರುವಾಯೂರಪ್ಪನ ಭೂಮಿಯನ್ನು ಮರಳಿ ಪಡೆಯುವ ಜವಾಬ್ದಾರಿ ನಮ್ಮದು ಎಂದು ಘೋಷಿಸಿಕೊಂಡರು. ದೇವರ ನಾಡನ್ನು ಹೆಸರಿಸದ ಶಕ್ತಿಗಳು ವರ್ಷಗಳಿಂದ ನಿಯಂತ್ರಿಸುತ್ತಿದೆ ಎಂದರು. ಪ್ರಚಾರದ ವೇಳೆ ಧರ್ಮವನ್ನು ನಡುವೆ ತಂದಿದ್ದಕ್ಕೆ ಸದ್ಯ ಇತರೆ ಪಕ್ಷಗಳ ವಾಗ್ದಾಳಿಗೆ ಬಿಜೆಪಿ ಗುರಿಯಾಗಿದೆ.
ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೇರಳ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಕೆಎಸ್ಯು ತ್ರಿಶೂರ್ ಜಿಲ್ಲಾಧ್ಯಕ್ಷ ಗೋಕುಲ್ ಗುರುವಾಯೂರ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಗಳು ಮತದಾರರ ಮೇಲೆ ಪ್ರಭಾವ ಬೀರಲು ಕೋಮು ವಿಭಜನೆಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಮುಖ್ಯಸ್ಥರು, ರಾಜ್ಯ ಚುನಾವಣಾ ಅಧಿಕಾರಿಗಳು ಮತ್ತು ಗುರುವಾಯೂರ್ ಎಸಿಪಿಗೆ ದೂರು ಸಲ್ಲಿಸಲಾಗಿದೆ ಎಂದೂ ತಿಳಿಸಿದ್ದಾರೆ. ಈ ಆರೋಪಗಳ ಬಗ್ಗೆ ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





