ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈದ್ಯೆಯೊಬ್ಬರ ಹಿಜಾಬ್ ಎಳೆದ ಘಟನೆ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿತೀಶ್ ಅವರ ಮಾನಸಿಕ ಸ್ಥಿತಿಗತಿಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ನಿತೀಶ್ ಕುಮಾರ್ ವಿರುದ್ಧ ಬೆಂಗಳೂರು ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ವಕೀಲ ಓವೈಜ್ ಹುಸೇನ್ ಎಸ್ ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಎಂ.ಎ ಸಲೀಮ್, ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆ. ನಿತೀಶ್ ವಿರುದ್ಧ ಶೂನ್ಯ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ಹಿಜಾಬ್ ಎಳೆದಿದ್ದಾರೆ. ಅವರ ವಿರುದ್ಧ ಲೈಂಗಿಕ ದೌರ್ಜನ್ಯ, ಒಪ್ಪಿಗೆಯಿಲ್ಲದ ದೈಹಿಕ ಹಸ್ತಕ್ಷೇಪ, ಮಹಿಳೆಯ ಘನತೆಯ ಉಲ್ಲಂಘನೆ, ಸಾರ್ವಜನಿಕ ಅವಮಾನ ಹಾಗೂ ಧಾರ್ಮಿಕ ಘನತೆಯ ಉಲ್ಲಂಘನೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಬೇಕೆಂದು ವಕೀಲ ಹುಸೇನ್ ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪಾಕಿಸ್ತಾನಕ್ಕೆ ಸಾಲ ನೀಡಲು ಅಂತಾರಾಷ್ಟ್ರೀಯ ವಿತ್ತ ನಿಧಿ ಹೇರಿದ 11 ಷರತ್ತುಗಳೇನು?
ಸೋಮವಾರ, ಬಿಹಾರದಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದ್ದು, ನಿತೀಶ್ ಕುಮಾರ್ ಮಹಿಳಾ ವೈದ್ಯರಿಗೆ ಪ್ರಮಾಣಪತ್ರ ನೀಡುವಾಗ ಅವರ ಹಿಜಾಬ್ ತೆಗೆಯುವಂತೆ ಸನ್ನೆ ಮಾಡುತ್ತಿರುವುದು ಕಂಡುಬಂದಿದೆ. ಮಹಿಳೆ ಪ್ರತಿಕ್ರಿಯಿಸುವ ಮೊದಲೇ ನಿತೀಶ್ ಅವರು ಹಿಜಾಬ್ ಅನ್ನು ಹಿಡಿದು ಕೆಳಗೆ ಎಳೆಯುತ್ತಿರುವುದು ಕಂಡುಬಂದಿದೆ.
ಹಿಜಾಬ್ ಎಳೆದ ಘಟನೆಗೆ ಸಂಬಂಧಿಸಿದಂತೆ ನಿತೀಶ್ ವಿರುದ್ಧ ಬೆಂಗಳೂರು ಮಾತ್ರವಲ್ಲದೆ, ದೇಶದ ನಾನಾ ಭಾಗಗಳಲ್ಲಿ ದೂರು ದಾಖಲಾಗಿದೆ.




