ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಪಕ್ಷದ ಆನ್ಲೈನ್ ಕ್ರೌಡ್ಫಂಡಿಂಗ್ ಕಾರ್ಯಕ್ರಮ ‘ದೇಶಕ್ಕಾಗಿ ದೇಣಿಗೆ’ಗೆ 1.38 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದರು. ಉತ್ತಮ ಭಾರತವನ್ನು ನಿರ್ಮಿಸುವ ಪ್ರಯತ್ನಗಳಲ್ಲಿ ಕಾರ್ಯಕರ್ತರು ಆರ್ಥಿಕ ನೆರವನ್ನು ನೀಡಬೇಕೆಂದು ಒತ್ತಾಯಿಸಿದರು.
ಪಕ್ಷದ ಬೊಕ್ಕಸ ಖಾಲಿಯಾದ ಸಮಯದಲ್ಲಿ ‘ದೇಶಕ್ಕಾಗಿ ದೇಣಿಗೆ’ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಹಣದ ಅಗತ್ಯವಿದೆ. ಅಸಹಕಾರ ಚಳವಳಿಗೆ ನಿಧಿ ಸಂಗ್ರಹಿಸಲು ಮಹಾತ್ಮ ಗಾಂಧಿಯವರ ‘ತಿಲಕ್ ಸ್ವರಾಜ್ ನಿಧಿ’ಯಿಂದ ಈ ಕಾರ್ಯಕ್ರಮಕ್ಕೆ ಪ್ರೇರೇಪಣೆ ಪಡೆಯಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಖರ್ಗೆ, ”ಶ್ರೀಮಂತರಿಂದ ಹಣ ವಸೂಲಿ ಮಾಡುವುದನ್ನು ಮುಂದುವರಿಸಿದರೆ ಅವರ ಇಚ್ಛೆಗೆ ತಕ್ಕಂತೆ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ನಮ್ಮ ಪಕ್ಷ ಯಾವಾಗಲೂ ಹಿಂದುಳಿದವರು, ದಲಿತರು, ಆದಿವಾಸಿಗಳು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಮೇಲ್ಜಾತಿಗಳ ಜೊತೆಗಿದೆ. ನಾವು ಅವರಿಗೆ ಸಹಾಯ ಮಾಡಲು ಬಯಸುತ್ತೇವೆ. ಜನ ಸಾಮಾನ್ಯರ ನೆರವಿನಿಂದ ದೇಶವನ್ನು ಕಟ್ಟುವ ಪ್ರಯತ್ನ ಇದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಕೊರೋನಾ ಮತ್ತೆ ಸಕ್ರಿಯ: 1800 ಪ್ರಕರಣ ದಾಖಲು
ಕಾಂಗ್ರೆಸ್ ಮುಖಂಡ ಅಜಯ್ ಮಕಾನ್, “ಇದು ಪ್ರಚಾರಕ್ಕಿಂತ ಹೆಚ್ಚು. ಇದು ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳನ್ನು ಎತ್ತಿಹಿಡಿಯಲು, ಅಸಮಾನತೆಗಳನ್ನು ನಿವಾರಿಸಲು ಮತ್ತು ಶ್ರೀಮಂತರಿಗೆ ಒಲವು ತೋರುವ ಸರ್ಕಾರದ ವಿರುದ್ಧದ ಕಾರ್ಯಕ್ರಮವಾಗಿದೆ. ನಾವು ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಬೆಲೆ ಏರಿಕೆಯ ವಿರುದ್ಧ ಹೋರಾಡುತ್ತಿದ್ದೇವೆ” ಎಂದು ಹೇಳಿದರು.
ಕ್ರಾಡ್ ಫಂಡಿಂಗ್ ಉಪಕ್ರಮವು ಆನ್ಲೈನ್ ಮತ್ತು ಆಫ್ಲೈನ್ ಘಟಕವನ್ನು ಹೊಂದಿದೆ. ಪಕ್ಷವು ಡಿಸೆಂಬರ್ 28 ರಂದು 138 ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ, ಇದು ಕಾರ್ಯಕರ್ತರಲ್ಲಿ 138 ರೂ.ಗಳ ಗುಣಾಕಾರಗಳಲ್ಲಿ ದೇಣಿಗೆ ನೀಡುವಂತೆ ಕೇಳುತ್ತಿದೆ. ಉದಾ, ರೂ 138, ರೂ 1,380, ರೂ 13,800 ಅಥವಾ ಅದಕ್ಕಿಂತ ಹೆಚ್ಚು. ಉತ್ತಮ ಭಾರತಕ್ಕಾಗಿ ಪಕ್ಷದ ನಿರಂತರ ಬದ್ಧತೆಯನ್ನು ಕಾರ್ಯಕ್ರಮ ಸಂಕೇತಿಸುತ್ತದೆ.
ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಮತ್ತು ರಾಜ್ಯಾಧ್ಯಕ್ಷರು ಮತ್ತು ಎಐಸಿಸಿ ಪದಾಧಿಕಾರಿಗಳು ಅಭಿಯಾನಕ್ಕೆ ತಲಾ ಕನಿಷ್ಠ 1,380 ರೂ. ದೇಣಿಗೆ ನೀಡಲಿದ್ದಾರೆ. ಡಿಸೆಂಬರ್ 28 ರವರೆಗೆ ಆನ್ಲೈನ್ನಲ್ಲಿರುತ್ತದೆ. ನಂತರ ಸ್ವಯಂಸೇವಕರಿಂದ ಮನೆ-ಮನೆ ಪ್ರಚಾರವನ್ನು ಪ್ರಾರಂಭಿಸಲಾಗುವುದು. ಪ್ರತಿ ಬೂತ್ನಲ್ಲಿ ಕನಿಷ್ಠ ಹತ್ತು ಮನೆಗಳಿಗೆ ಕನಿಷ್ಠ 138 ರೂಪಾಯಿಗಳ ಕೊಡುಗೆಗಾಗಿ ಗುರಿಪಡಿಸಲಾಗುತ್ತದೆ.
ಆನ್ಲೈನ್ ಕ್ರೌಡ್ಫಂಡಿಂಗ್ಗಾಗಿ ಪಕ್ಷವು www.donateinc.in ಮತ್ತು www.inc.in ಎಂಬ ಎರಡು ವೆಬ್ಸೈಟ್ಗಳನ್ನು ಸ್ಥಾಪಿಸಿದೆ.





