ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ಗೆ ಹಿನ್ನಡೆ ಉಂಟಾಗಿದೆ. ಪಕ್ಷಕ್ಕೆ ರಾಜೀನಾಮೆ ನೀಡಿದ ಕೇವಲ ಒಂದು ದಿನದ ಬಳಿಕ, ಹಾಲಿ ಸಂಸದ ಪ್ರದ್ಯುತ್ ಬೊರ್ಡೊಲೊಯಿ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಅವರ ಸಮ್ಮುಖದಲ್ಲಿ ಪ್ರದ್ಯುತ್ ಅವರು ಕಮಲ ಪಾಳಯವನ್ನು ಸೇರಿದರು.
ಈ ಬೆಳವಣಿಗೆಯನ್ನು ಖಚಿತಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, “ಹಾಲಿ ಕಾಂಗ್ರೆಸ್ ಸಂಸದರು ಇಂದು ಬಿಜೆಪಿ ಸೇರಿದ್ದಾರೆ. ಪ್ರದ್ಯುತ್ ಬೊರ್ಡೊಲೊಯಿ ಓರ್ವ ಹಿರಿಯ ಸಂಸದರಾಗಿದ್ದು, ಅವರ ಸೇರ್ಪಡೆಯು ಪಕ್ಷಕ್ಕೆ ಖಂಡಿತವಾಗಿಯೂ ಆನೆಬಲ ತಂದಿದೆ” ಎಂದರು. ಅಲ್ಲದೆ, ಬೊರ್ಡೊಲೊಯಿ ಅವರ ಸೇರ್ಪಡೆಗೆ ರಾಷ್ಟ್ರೀಯ ನಾಯಕತ್ವವು ಒಂದು ದಿನದ ಹಿಂದೆಯೇ ಒಪ್ಪಿಗೆ ಸೂಚಿಸಿತ್ತು ಮತ್ತು ಅವರ ಪ್ರಸ್ತುತ ಸಂಸದೀಯ ಅವಧಿಯು ಇನ್ನೂ ಮೂರು ವರ್ಷಗಳ ಕಾಲ ಬಾಕಿ ಇದೆ ಎಂಬುದನ್ನು ಶರ್ಮಾ ಉಲ್ಲೇಖಿಸಿದರು.
ಅಸ್ಸಾಂನ ಮಾಜಿ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರು ಬಿಜೆಪಿ ಸೇರಿದ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಈ ಬೆಳವಣಿಗೆ ನಡೆದಿದೆ. ಬೊರ್ಡೊಲೊಯಿ ಅವರ ನಿರ್ಗಮನದೊಂದಿಗೆ, ಅಸ್ಸಾಂನಲ್ಲಿ ಕಾಂಗ್ರೆಸ್ ತನ್ನ ಮೂವರು ಲೋಕಸಭಾ ಸಂಸದರಲ್ಲಿ ಒಬ್ಬರನ್ನು ಕಳೆದುಕೊಂಡಂತಾಗಿದೆ.
ಇದನ್ನು ಓದಿದ್ದೀರಾ? ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ
ನಗಾಂವ್ನಿಂದ ಎರಡು ಬಾರಿ ಸಂಸದರಾಗಿರುವ ಮತ್ತು ಮಾಜಿ ಸಿಎಂ ತರುಣ್ ಗೊಗೊಯ್ ಸರ್ಕಾರದಲ್ಲಿ ಸಚಿವರಾಗಿದ್ದ ಬೊರ್ಡೊಲೊಯಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದರು. “ತೀವ್ರ ದುಃಖದಿಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ಹಾಗೂ ಎಲ್ಲಾ ಹುದ್ದೆಗಳು ಮತ್ತು ಸವಲತ್ತುಗಳಿಗೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಅವರು ಪತ್ರದಲ್ಲಿ ಬರೆದಿದ್ದರು.
ಈ ಬೆಳವಣಿಗೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರು ಭಿನ್ನಾಭಿಪ್ರಾಯ ಎಂದು ಕರೆದಿದೆ. ಅಸ್ಸಾಂ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಮಾತನಾಡಿ, “ಬೊರ್ಡೊಲೊಯಿ ಅವರ ರಕ್ತದಲ್ಲಿಯೇ ಕಾಂಗ್ರೆಸ್ ಹರಿಯುತ್ತಿದೆ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಮತ್ತು ಮುಂದೆಯೂ ಹಾಗೆಯೇ ಇರುತ್ತೇವೆ” ಎಂದಿದ್ದಾರೆ.
ಮತ್ತೊಂದೆಡೆ, ಬೊರ್ಡೊಲೊಯಿ ಅವರನ್ನು ರಾಜಕೀಯವಾಗಿ ಗುರಿಯಾಗಿಸುವ ಯತ್ನಗಳು ನಡೆಯುತ್ತಿವೆ ಮತ್ತು ಅವರ ತೇಜೋವಧೆ ಮಾಡಲು ಇಂತಹ ಬೆಳವಣಿಗೆಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೌರವ್ ಗೊಗೊಯ್ ಆರೋಪಿಸಿದ್ದಾರೆ.
ಬೊರ್ಡೊಲೊಯಿ ಅವರ ನಿರ್ಗಮನವು ಆಂತರಿಕ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸುಳಿವು ನೀಡಿದ್ದಾರೆ. “ಟಿಕೆಟ್ ಹಂಚಿಕೆ ವಿಚಾರದಲ್ಲಿ ಅವರು ಅಸಮಾಧಾನಗೊಂಡಿದ್ದರು. ಇದು ದುರದೃಷ್ಟಕರ” ಎಂದು ಅವರು ಹೇಳಿದ್ದಾರೆ. ತಮ್ಮ ಪ್ರಭಾವದ ಕ್ಷೇತ್ರಗಳಲ್ಲಿ ಕೆಲವು ನಾಯಕರಿಗೆ ಮರು ಟಿಕೆಟ್ ನೀಡುವ ಸಾಧ್ಯತೆಯ ಬಗ್ಗೆ ಬೊರ್ಡೊಲೊಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ತಲೆದೋರಿದ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.





