1995ರ ‘ಉದ್ಯೋಗಿಗಳ ಪಿಂಚಣಿ ಯೋಜನೆ’ (ಇಪಿಎಸ್) ಅಡಿ ನೀಡಲಾಗುತ್ತಿರುವ 1,000 ರೂ.ಗಳ ಕನಿಷ್ಠ ಮಾಸಿಕ ಪಿಂಚಣಿಯನ್ನು ತುರ್ತಾಗಿ ಮರುಪರಿಶೀಲಿಸುವಂತೆ ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಈ ಸಮಸ್ಯೆಯ ಪರಿಹಾರಕ್ಕಾಗಿ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, “ಮೋದಿ ಸರ್ಕಾರದ ಸುಮಾರು 12 ವರ್ಷಗಳ ಆಡಳಿತಾವಧಿಯಲ್ಲಿ ಅನೇಕ ಸಾಮಾಜಿಕ ಭದ್ರತಾ ಯೋಜನೆಗಳು ಕ್ರಮೇಣ ದುರ್ಬಲಗೊಂಡಿವೆ. ಕೆಲವನ್ನು ಉದ್ದೇಶಪೂರ್ವಕವಾಗಿ ಹಳ್ಳ ಹಿಡಿಸಲಾಗಿದೆ. ಏರುತ್ತಿರುವ ಹಣದುಬ್ಬರದ ಹೊರತಾಗಿಯೂ, ಪಿಂಚಣಿಯಂತಹ ಮೂಲಭೂತ ಸೌಲಭ್ಯವು ದೀರ್ಘಕಾಲದವರೆಗೆ ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಉಳಿದಿದೆ” ಎಂದು ಕಿಡಿಕಾರಿದ್ದಾರೆ.
“1,000 ರೂ.ಗಳ ಪಿಂಚಣಿಯು ಸಮಾಜದ ಅತ್ಯಂತ ದುರ್ಬಲ ವರ್ಗಗಳೆಂದು ಪರಿಗಣಿಸಲಾದ ಹಿರಿಯ ನಾಗರಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರಿದೆ. ಸರ್ಕಾರದ ಕಳಪೆ ನೀತಿಗಳಿಂದಾಗಿ ಹಣದುಬ್ಬರವು ತಾರಕಕ್ಕೇರಿರುವ, ಆರೋಗ್ಯ ವೆಚ್ಚಗಳು ಹಾಗೂ ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿರುವ ಇಂದಿನ ಕಾಲದಲ್ಲಿ, 1,000 ರೂ.ಗಳ ಕನಿಷ್ಠ ಇಪಿಎಫ್ ಪಿಂಚಣಿಯು ಹಾಸ್ಯದಂತಿದೆ” ಎಂದು ರಮೇಶ್ ಹೇಳಿದ್ದಾರೆ.
“1995ರ ಪಿಂಚಣಿ ಯೋಜನೆಯಡಿ ನೀಡಲಾಗುತ್ತಿರುವ 1,000 ರೂಪಾಯಿ ಮಾಸಿಕ ಪಿಂಚಣಿಯು ಇಂದಿನ ಸಂದರ್ಭದಲ್ಲಿ ಸಂಪೂರ್ಣವಾಗಿ ಅಸಮರ್ಪಕವಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ” ಎಂದು ಅವರು ಬೆಟ್ಟು ಮಾಡಿದ್ದಾರೆ.
मोदी सरकार के पिछले लगभग 12 साल के कार्यकाल में सामाजिक सुरक्षा की कई योजनाएं धीरे-धीरे कमजोर होती चली गई हैं, या उन्हें जानबूझकर कमजोर कर दिया गया है।
— Jairam Ramesh (@Jairam_Ramesh) March 18, 2026
पेंशन जैसी बुनियादी सुविधा भी लंबे समय से बढ़ती महंगाई के बावजूद लगभग जस की तस बनी हुई है।
इसका सीधा असर बुजुर्गों और आर्थिक… pic.twitter.com/Ur9d3Z2Rr8
“ಕನಿಷ್ಠ ಪಿಂಚಣಿಯನ್ನು ಜೀವನೋಪಾಯ ಮತ್ತು ಗೌರವಯುತ ಜೀವನಕ್ಕೆ ಸೂಕ್ತವಾದ ಮಟ್ಟಕ್ಕೆ ಹೆಚ್ಚಿಸಬೇಕೆಂದು ಸಮಿತಿಯು ಶಿಫಾರಸು ಮಾಡಿದೆ. ಇದು ಲಕ್ಷಾಂತರ ನಿವೃತ್ತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಗೌರವಯುತ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬಿಜೆಪಿ ಲೋಕಸಭಾ ಸಂಸದರ ನೇತೃತ್ವದ ‘ಕಾರ್ಮಿಕ, ಜವಳಿ ಮತ್ತು ಕೌಶಲ್ಯಾಭಿವೃದ್ಧಿ ಸ್ಥಾಯಿ ಸಮಿತಿ’ ನೀಡಿರುವ ವರದಿಯಿಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ವಿಷಯದಲ್ಲಿ ತ್ವರಿತಕ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿ ಆಶಿಸುತ್ತೇವೆ” ಎಂದು ರಮೇಶ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: LPG ಹೊತ್ತು ಭಾರತಕ್ಕೆ ಬಂದ ‘ಶಿವಾಲಿಕ್’ ಹಡಗು; ತಣಿಯುವುದೇ ಕೊರತೆ-ಆತಂಕ?
ಸಂಸದೀಯ ಸ್ಥಾಯಿ ಸಮಿತಿಯು ತನ್ನ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ‘ಅನುದಾನಗಳ ಬೇಡಿಕೆ (2026-27)’ ಕುರಿತ 15ನೇ ವರದಿಯಲ್ಲಿ, 1995ರ ಉದ್ಯೋಗಿಗಳ ಪಿಂಚಣಿ ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿಯನ್ನು ಹೆಚ್ಚು ವಾಸ್ತವಿಕ ಮತ್ತು ಗೌರವಯುತ ಮಟ್ಟಕ್ಕೆ ಏರಿಸಲು ತುರ್ತು ಮತ್ತು ಸಮಗ್ರ ಮರುಪರಿಶೀಲನೆ ನಡೆಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
1,000 ರೂ.ಗಳು ಜೀವನ ನಡೆಸಲು ಸಾಕಾಗುತ್ತಿಲ್ಲವಾದ್ದರಿಂದ ಪಿಂಚಣಿಯನ್ನು ತಿಂಗಳಿಗೆ 7,500 ರೂಪಾಯಿಗೆ ಹೆಚ್ಚಿಸಬೇಕೆಂದು ಪಿಂಚಣಿದಾರರು ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಮಿತಿಯು ಮಹತ್ವದ ಶಿಫಾರಸು ಮಾಡಿದೆ. ಜೀವನ ವೆಚ್ಚ ಏರಿಕೆಯಾಗುತ್ತಿದ್ದರೂ, 1995ರ ಯೋಜನೆಯಡಿ ನೀಡಲಾಗುವ 1,000 ರೂಪಾಯಿ ಕನಿಷ್ಠ ಪಿಂಚಣಿಯು ದೀರ್ಘಕಾಲದವರೆಗೆ ಬದಲಾಗದೆ ಉಳಿದಿದೆ ಎಂದು ಸಮಿತಿಯು ಗಮನಿಸಿದೆ.




