ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆಂತರಿಕ ಪರಿಸ್ಥಿತಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಒಡಿಶಾದ ಹಿರಿಯ ನಾಯಕ ಹಾಗೂ ಬಾರಾಬತಿ-ಕಟಕ್ನ ಮಾಜಿ ಶಾಸಕ ಮೊಹಮ್ಮದ್ ಮೊಕ್ವಿಮ್ ಅವರು, ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರೀಯ ನಾಯಕತ್ವದಲ್ಲಿನ ಬಿಕ್ಕಟ್ಟು ಮತ್ತು ಕಾರ್ಯಕರ್ತರಲ್ಲಿನ ನಿರುತ್ಸಾಹವನ್ನು ಎತ್ತಿ ತೋರಿಸಿದ್ದಾರೆ.
ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣಾ ವೈಫಲ್ಯಗಳು ಪಕ್ಷದಲ್ಲಿನ ಗಂಭೀರವಾದ ಸಾಂಸ್ಥಿಕ ಸಂಪರ್ಕ ಕಡಿತವನ್ನು ಪ್ರತಿಬಿಂಬಿಸುತ್ತಿವೆ ಎಂದು ಮೊಕ್ವಿಮ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ತಪ್ಪು-ತಪ್ಪಾಗಿ ತೆಗೆದುಕೊಂಡ ನಿರ್ಧಾರಗಳ ಸರಣಿ, ದಾರಿ ತಪ್ಪಿದ ನಾಯಕತ್ವದ ಆಯ್ಕೆಗಳು, ಎಲ್ಲ ಜವಾಬ್ದಾರಿ ಮತ್ತು ಅಧಿಕಾರವನ್ನೂ ಒಬ್ಬರ ಕೈಗೆ (ಅಥವಾ ತಪ್ಪು ವ್ಯಕ್ತಿಗಳ ಕೈಗೆ) ಕೊಟ್ಟಿದ್ದಾರೆ. ಇದರಿಂದ ಪಕ್ಷದ ಒಳಗೆ ಯಾರೂ ತಮ್ಮದೇ ಧ್ವನಿಯಲ್ಲಿ ಮಾತನಾಡಲು ಅಥವಾ ಕೆಲಸ ಮಾಡಲು ಆಗುತ್ತಿಲ್ಲ.ಇದು ಪಕ್ಷವನ್ನು ದುರ್ಬಲಗೊಳಿಸಿದೆ. ಈ ದೋಷಗಳನ್ನು ಸರಿಪಡಿಸುವ ಬದಲು ಪಕ್ಷ ಇವೇ ತಪ್ಪುಗಳನ್ನು ಪುನರಾವರ್ತಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಸಕ್ರಿಯ ನಾಯಕತ್ವಕ್ಕೆ ಕರೆ
ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಪಡಿಸಿ, ಸಕ್ರಿಯಗೊಳಿಸಬೇಕಾದರೆ ಪಕ್ಷದ ಒಳಗೆ ಬಲವಾದ ಸಂಘಟನಾತ್ಮಕ ಬದಲಾವಣೆಗಳೂ, ದೊಡ್ಡ ತತ್ವ- ಸಿದ್ಧಾಂತಗಳ ರೀತಿಯಲ್ಲಿ ಬದಲಾವಣೆಯಾಗಬೇಕಿದೆ. ಇದಕ್ಕಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಹಿಂದೆ ನಿಂತು ಕೆಲಸ ಮಾಡದೆ ಮುಂಚೂಣಿಯಲ್ಲಿ ಕಾಣುವ, ಸಕ್ರಿಯ ಮತ್ತು ದೃಢ ನಾಯಕತ್ವ ವಹಿಸಬೇಕು. ಯುವಜನರನ್ನು ಪಕ್ಷದ ಕಡೆಗೆ ಸೆಳೆಯಬೇಕು, ಅವರಲ್ಲಿಉತ್ಸಾಹ ತುಂಬುವ ರೀತಿ ಕೆಲಸ ಮಾಡಬೇಕು ಎಂದು ಮೊಹಮ್ಮದ್ ಮೊಕ್ವಿಮ್ ಒತ್ತಾಯಿಸಿದ್ದಾರೆ. ಜೊತೆಗೆ ಸಚಿನ್ ಪೈಲಟ್, ಡಿ ಕೆ ಶಿವಕುಮಾರ್, ರೇವಂತ್ ರೆಡ್ಡಿ ಮತ್ತು ಶಶಿ ತರೂರ್ ಅವರಂಥ ಯುವ- ನಾಯಕರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಮತ್ತು ನಾಯಕತ್ವದ ಪಾತ್ರಗಳನ್ನು ತಕ್ಷಣ ನೀಡಬೇಕು. ಏಕೆಂದರೆ ಅವರಿಗೆ ಯುವಜನರನ್ನು ಪ್ರೇರೇಪಿಸಲು ಅಗತ್ಯವಾದ ವಿಶ್ವಾಸಾರ್ಹತೆ, ಶಕ್ತಿ ಮತ್ತು ಸಂಪರ್ಕವಿದೆ ಎಂದು ಮೊಕ್ವಿಮ್ ಪ್ರತಿಪಾದಿಸಿದ್ದಾರೆ.
ಯುವಜನತೆ, ಹಿರಿಯ ನಾಯಕರಲ್ಲಿ ಅಂತರ
ಹಿರಿಯ ನಾಯಕರು ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿರುವುದು ಕೇವಲ ವ್ಯಕ್ತಿಗತ ನಷ್ಟವಲ್ಲ. ಇದರಿಂದ ಕಾಂಗ್ರೆಸ್ನ ಶಕ್ತಿ, ದಶಕಗಳ ಅನುಭವ ಮತ್ತು ರಾಜಕೀಯ ಗೌರವವೇ ಸಾಮೂಹಿಕವಾಗಿ ಕೈತಪ್ಪುತ್ತಿದೆ. ದೇಶದ ಯುವಜನತೆಯನ್ನು ತಲುಪಲು ಪಕ್ಷವು ವಿಫಲವಾಗಿದೆ. ಪಕ್ಷ ಮತ್ತು ಯುವಕರ ನಡುವೆ ದೊಡ್ಡ ಅಂತರ ಸೃಷ್ಟಿಯಾಗಿದೆ. ದೇಶಾದ್ಯಂತ ಹಿರಿಯ ನಾಯಕರು ಒಳಸಂಚು, ಲಾಬಿ ಮತ್ತು ಮಾನ್ಯತೆಯ ಕೊರತೆಯಿಂದಾಗಿ ನಿರಾಶೆಗೊಂಡಿದ್ದಾರೆ ಎಂದು ಮೊಕ್ವಿಮ್ ಅಭಿಪ್ರಾಯಪಟ್ಟಿದ್ದಾರೆ.
ಒಡಿಶಾ ಘಟಕದ ವೈಫಲ್ಯ
ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ ದಾಸ್ ಅವರ ನಾಯಕತ್ವವನ್ನು ಅವರು ಮೊಕ್ವಿಮ್ ಕಟುವಾಗಿ ಟೀಕಿಸಿದ್ದಾರೆ. ದಾಸ್ ಅವರು ಸತತ ಮೂರು ಚುನಾವಣೆಗಳಲ್ಲಿ ಸೋತಿದ್ದರೂ, ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇತ್ತೀಚಿನ ಉಪಚುನಾವಣೆಯಲ್ಲಿ ದಾಸ್ ಅವರ ಸಂಸದೀಯ ಕ್ಷೇತ್ರದಲ್ಲೇ ಕಾಂಗ್ರೆಸ್ 83,000 ಮತಗಳ ದೊಡ್ಡ ಅಂತರದಿಂದ ಸೋತಿದ್ದನ್ನು ಮೊಕ್ವಿಮ್ ಉಲ್ಲೇಖಿಸಿದ್ದಾರೆ.
ಕಾರ್ಯಕರ್ತರಲ್ಲಿನ ನೈತಿಕ ಉತ್ಸಾಹ ಕುಸಿತ
ಲಕ್ಷಾಂತರ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಈಗ ಗೊಂದಲಕ್ಕೊಳಗಾಗಿದ್ದಾರೆ, ನೈತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ ಮತ್ತು ದಿಕ್ಕಿಲ್ಲದವರಾಗಿದ್ದಾರೆ. ತನಗೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಮೂರು ವರ್ಷಗಳಿಂದ ಸಾಧ್ಯವಾಗದಿರುವುದನ್ನು ಉಲ್ಲೇಖಿಸಿ, ಹಿಂದಿನ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸ್ವತಃ ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಕಾರ್ಯಕರ್ತರಿಗೆ ಪ್ರೋತ್ಸಾಹ, ಮಾನ್ಯತೆ ಮತ್ತು ಮೌಲ್ಯವಿತ್ತು. ಆ ಭಾವನಾತ್ಮಕ ಸಂಪರ್ಕವು ನಿಷ್ಠೆ ಮತ್ತು ಬದ್ಧತೆಯನ್ನು ನಿರ್ಮಿಸಿತ್ತು. ಆದರೆ ಈಗ ಆ ಸಂಪರ್ಕ ಕಡಿತಗೊಂಡಿದೆ ಎಂದು ಮೊಕ್ವಿಮ್ ನೋವು ತೋಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತಿರುಪತಿ ದೇವಾದಿದೇವ ತಿಮ್ಮಪ್ಪನಿಗೇ ನಾಮ ಹಾಕುವ ಧೂರ್ತರು!
ಪಕ್ಷದ ಉಳಿವಿಗೆ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯ
ಕಾಂಗ್ರೆಸ್ ಒಂದು ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ, ದೇಶ ರಕ್ಷಣೆಗಾಗಿ, ದೇಶದ ಘನತೆಗಾಗಿ ಹೋರಾಡಿದ ಮಹಾನ್ ಪಕ್ಷ. ಆದರೆ ಈಗ ಅದೇ ಪಕ್ಷ ಮತ್ತೆ ಜನರ ಕಣ್ಣಲ್ಲಿ ಆ ದೂರದೃಷ್ಟಿ, ಆ ಗಾಂಭೀರ್ಯ, ಆ ಗೌರವ ಕಾಣಬೇಕಾದರೆ ಸಣ್ಣಪುಟ್ಟ ಗಾಯಕ್ಕೆ ಚಿಕಿತ್ಸೆ ನೀಡಿದಂತೆ ಆಗುವುದಿಲ್ಲ. ಹೃದಯದ ಒಳಗಿನ ರೋಗವನ್ನು ನಿವಾರಿಸುವ ರೀತಿಯ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಪಕ್ಷವನ್ನು ರಚನಾತ್ಮಕ, ಸಾಂಸ್ಥಿಕ, ಸೈದ್ಧಾಂತಿಕ ಹಾಗೂ ಸಾಂಸ್ಕೃತಿಕ ಮಟ್ಟದಲ್ಲಿ ಸಂಪೂರ್ಣವಾಗಿ ಬದಲಾಯಿಸಲಿಲ್ಲದಿದ್ದರೆ, ಈ ಐತಿಹಾಸಿಕ ಪಕ್ಷ ಶೀಘ್ರದಲ್ಲೇ ಇತಿಹಾಸ ಪುಸ್ತಕದ ಪುಟಗಳೊಳಗೆ ಕಣ್ಮರೆಯಾಗುವ ಅಪಾಯವಿದೆ ಎಂದು ಮೊಕ್ವಿಮ್ ಆತಂಕ ವ್ಯಕ್ತಪಡಿಸಿದ್ದಾರೆ.





