ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರ ಅಂಗಡಿಯ ಹೆಸರು ಬದಲಾಯಿಸುವಂತೆ ಬಜರಂಗದಳ ಸದಸ್ಯರು ಒತ್ತಡ ಹೇರಿದಾಗ ತನ್ನನ್ನು ತಾನು ‘ಮೊಹಮ್ಮದ್ ದೀಪಕ್ ಕುಮಾರ್’ ಎಂದು ಪರಿಚಯಿಸಿಕೊಂಡ ಹಿಂದೂ ಯುವಕನೊಬ್ಬ ಬಜರಂಗದಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಕಳೆದೆರಡು ತಿಂಗಳ ಹಿಂದೆ ವೈರಲ್ ಆಗಿತ್ತು. ಕೋಮು ಸೌಹಾರ್ದತೆ ಮೆರೆದ ಈ ಯುವಕನ ನಡೆಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ದೀಪಕ್ ಕುಮಾರ್ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಈ ಎಫ್ಐಆರ್, ಪೊಲೀಸ್ ರಕ್ಷಣೆ ಕೋರಿದ್ದಕ್ಕೆ “ಆರೋಪಿಯೊಬ್ಬರು ಪೊಲೀಸ್ ರಕ್ಷಣೆಯನ್ನು ಹೇಗೆ ಪಡೆಯಬಹುದು” ಎಂದು ಉತ್ತರಾಖಂಡ ಹೈಕೋರ್ಟ್ ಪ್ರಶ್ನಿಸಿದೆ.
ಬಜರಂಗದಳದಂತಹ ಬಲಪಂಥೀಯ ಸಂಘಟನೆಗಳು ಕೋಮು ದ್ವೇಷ ಹರಡುತ್ತಾ, ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವಾಗ ಇದನ್ನು ಧೈರ್ಯದಿಂದ ಪ್ರಶ್ನಿಸಿ ಮುಸ್ಲಿಂ ವ್ಯಾಪಾರಿಯೊಬ್ಬರ ಬೆಂಬಲಕ್ಕೆ ನಿಂತವರು ದೀಪಕ್ ಕುಮಾರ್. ಆದರೆ ಅವರ ಈ ಕೋಮು ಸೌಹಾರ್ದತೆಯ ನಡೆ ಬಲು ದುಬಾರಿಯಾಗಿದೆ.
ಇದನ್ನು ಓದಿದ್ದೀರಾ? ‘ಮೊಹಮ್ಮದ್ ದೀಪಕ್’ ಜಿಮ್ ಸದಸ್ಯತ್ವ 15ಕ್ಕೆ ಇಳಿಕೆ: ಕೋಮು ಸೌಹಾರ್ದತೆಯ ಬೆಲೆ ಬಲು ದುಬಾರಿ!
ಕೋಮು ಹಿಂಸೆಯನ್ನು ತಡೆದ ‘ಮೊಹಮ್ಮದ್ ದೀಪಕ್’ ಅವರ ಮೇಲೆಯೇ ಗಲಭೆ, ಶಾಂತಿ ಕದಡಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ದೀಪಕ್ ಕುಮಾರ್ ಬಜರಂಗದಳವನ್ನು ಪ್ರಶ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಭಾರೀ ವೈರಲ್ ಆಗಿದೆ. ಆದರೆ ಬಜರಂಗದಳ ಸದಸ್ಯರೊಂದಿಗೆ ದೀಪಕ್ ಕುಮಾರ್ ಘರ್ಷಣೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಅಷ್ಟು ಮಾತ್ರವಲ್ಲದೆ ದೀಪಕ್ ಕುಮಾರ್ ಅವರನ್ನು ಹತ್ಯೆ ಮಾಡಿದ ವ್ಯಕ್ತಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಬಲಪಂಥೀಯರು ಘೋಷಿಸಿದ್ದಾರೆ.
ಈ ಎಫ್ಐಆರ್ ರದ್ದುಗೊಳಿಸುವಂತೆ ಮತ್ತು ಜೀವ ಬೆದರಿಕೆ ಇರುವ ಕಾರಣ ರಕ್ಷಣೆ ನೀಡುವಂತೆ ಕೋರಿ ಮೊಹಮ್ಮದ್ ದೀಪಕ್ ಉತ್ತರಾಖಂಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ ಪಕ್ಷಪಾತವಾಗಿ ನಡೆದುಕೊಳ್ಳುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವಿನಂತಿಸಿದ್ದಾರೆ. ದ್ವೇಷ ಭಾಷಣ ಮಾಡಿದವರ ವಿರುದ್ಧ ಬಿಎನ್ಎಸ್ನ ಸೆಕ್ಷನ್ 196ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆಯೂ ಅರ್ಜಿಯಲ್ಲಿ ಕೋರಿದ್ದಾರೆ. ಈ ಅರ್ಜಿ ಆಲಿಸಿದ ನ್ಯಾಯಮೂರ್ತಿ ರಾಕೇಶ್ ಥಪ್ಲಿಯಾಲ್ ಅವರ ಏಕಸದಸ್ಯ ಪೀಠವು ಇದು ಅನಗತ್ಯ ಮನವಿ ಎಂದು ಆಕ್ಷೇಪಿಸಿದೆ.
ಇದನ್ನು ಓದಿದ್ದೀರಾ? ‘ಮೊಹಮ್ಮದ್ ದೀಪಕ್’ ಜಿಮ್ ಸದಸ್ಯತ್ವ 15ಕ್ಕೆ ಇಳಿಕೆ: ಕೋಮು ಸೌಹಾರ್ದತೆಯ ಬೆಲೆ ಬಲು ದುಬಾರಿ!
ವಿಚಾರಣೆಯ ಸಮಯದಲ್ಲಿ, ಹೈಕೋರ್ಟ್ ಈ ಅರ್ಜಿಯ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ತನಿಖೆಯ ಮೇಲೆ ಪ್ರಭಾವ ಬೀರುವ ಮತ್ತು ಇಡೀ ವಿಷಯವನ್ನು ಸಂವೇದನಾಶೀಲಗೊಳಿಸುವ ಗುರಿಯನ್ನು ದೀಪಕ್ ಹೊಂದಿದ್ದಾರೆ. ಅದರ ಭಾಗವಾಗಿ ಒತ್ತಡ ಹೇರಲು ಈ ಅರ್ಜಿ ಸಲ್ಲಿಸಲಾಗಿದೆ ಎಂದು ಪೀಠ ಹೇಳಿದೆ. ಹಾಗೆಯೇ, ಅರ್ಜಿದಾರರು ಸ್ವತಃ ಶಂಕಿತ ಆರೋಪಿಯಾಗಿರುವಾಗ ಪೊಲೀಸ್ ರಕ್ಷಣೆಯನ್ನು ಕೋರುವುದೇ ಎಂದು ಪ್ರಶ್ನಿಸಿದೆ.
ಹಾಗೆಯೇ ಘಟನೆಗೆ ಸಂಬಂಧಿಸಿದ ಎಲ್ಲಾ ಎಫ್ಐಆರ್ಗಳಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಇನ್ನು ಮುಸ್ಲಿಂ ವ್ಯಾಪಾರಿ ಪರ ನಿಂತು ದೀಪಕ್ ಕುಮಾರ್ ಜಿಮ್ ಸದಸ್ಯತ್ವ 15ಕ್ಕೆ ಇಳಿಕೆಯಾಗಿದೆ. ಹೀಗಾಗುತ್ತಿದ್ದಂತೆ ಹಲವು ಮಂದಿ ದೀಪಕ್ ಕುಮಾರ್ ಅವರ ಖಾತೆಗೆ ಸ್ವಯಂಪ್ರೇರಿತವಾಗಿ ಹಣ ರವಾನಿಸಿದ್ದಾರೆ. ಈವರೆಗೆ 80 ಸಾವಿರ ರೂಪಾಯಿ ಕುಮಾರ್ ಖಾತೆಗೆ ಜಮೆಯಾಗಿದೆ. ಹೀಗೆ ಹಲವು ಮಂದಿ ಹಣ ರವಾನಿಸುತ್ತಿರುವ ಕಾರಣ ದೀಪಕ್ ತಮ್ಮ ಬ್ಯಾಂಕ್ ಖಾತೆಯನ್ನೇ ಸದ್ಯ ಬ್ಲಾಕ್ ಮಾಡಿದ್ದಾರೆ. ಈ ಬಗ್ಗೆಯೂ ಹೈಕೋರ್ಟ್ ವಿಚಾರಣೆ ನಡೆಸಿದ್ದು, ದೀಪಕ್ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ.





