ತೆಲಂಗಾಣದಲ್ಲಿ ಹಿಂದುಳಿದ ವರ್ಗ (ಬಿಸಿ) ಸಮುದಾಯಗಳಿಗೆ 42% ಮೀಸಲಾತಿ ನೀಡುವ ಸರ್ಕಾರದ ಕಾನೂನಿಗೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ. ಬಿಸಿ ಸಮುದಾಯಕ್ಕೆ ನೀಡಲಾಗಿರುವ ಮೀಸಲಾತಿಯನ್ನು 42%ಗೆ ಏರಿಕೆ ಮಾಡುವುದರಿಂದ ಒಟ್ಟು ಮೀಸಲಾತಿಯು 67%ಗೆ ತಲುಪುತ್ತದೆ. ಇದು, ಸುಪ್ರೀಂ ಕೋರ್ಟ್ನ 1992ರ ಐತಿಹಾಸಿಕ ‘ಇಂದ್ರಾ ಸಾಹ್ನಿ’ (ಮಂಡಲ್) ತೀರ್ಪಿನಲ್ಲಿ ನಿಗದಿ ಮಾಡಲಾಗಿರುವ 50% ಗರಿಷ್ಠ ಮಿತಿಯನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಹೇಳಿವೆ. ಈ ತೀರ್ಪು, ಕರ್ನಾಟಕವೂ ಸೇರಿದಂತೆ ಇತರ ಹಲವು ರಾಜ್ಯಗಳಿಗೂ ತೊಡಕಾಗುವ ಸಂಭವ ಇದೆಯೆಂದು ಹೇಳಲಾಗುತ್ತಿದೆ.
2023ರಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಕಾಂಗ್ರೆಸ್ ‘ಕ ರೆಡ್ಡಿ ಭರವಸೆ’ಯಡಿ ಒ.ಬಿ.ಸಿ. ಮೀಸಲಾತಿಯನ್ನು 25%ನಿಂದ 42%ಗೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, 2025ರ ಮಾರ್ಚ್ನಲ್ಲಿ ‘ತೆಲಂಗಾಣ ಸ್ಥಳೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ’ ಮತ್ತು ‘ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ’ಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತು. ರಾಜ್ಯದ ಜಾತಿ ಸಮೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆಯು 56% ಇದೆ ಎಂಬುದು ಕಂಡುಬಂದಿದೆ. ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಮೀಸಲಾತಿಯಲ್ಲಿ ಒ.ಬಿ.ಸಿ. ಕೋಟಾವನ್ನು 42%ಗೆ ಹೆಚ್ಚಿಸಲಾಗಿದೆ ಎಂದು ಸಮರ್ಥಿಸಿಕೊಂಡಿತು. 2025ರ ಸೆಪ್ಟೆಂಬರ್ 26ರಿಂದ ಜಾರಿಗೊಳಿಸಿತು. ಇದರಿಂದಾಗಿ ಒಟ್ಟು ಮೀಸಲಾತಿಯು (ಎಸ್.ಸಿ. 15% + ಎಸ್.ಟಿ. 10% + ಬಿಸಿ 42%) 67%ಗೆ ಏರಿಕೆಯಾಯಿತು. ಅಕ್ಟೋಬರ್ 23 ಮತ್ತು 27ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹೊಸ ಮೀಸಲಾತಿಯನ್ನು ಅನ್ವಯಿಸಿತು ಕೂಡ.
ಆದರೆ, ತೆಲಂಗಾಣ ಸರ್ಕಾರ ಜಾರಿಗೊಳಿಸಿದ ಮೀಸಲಾತಿ ಹೆಚ್ಚಳವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅಕ್ಟೋಬರ್ 9ರಂದು, ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಅಪಾರೇಶ್ ಕುಮಾರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಿ.ಎಂ. ಮೊಹಿಯುದ್ದೀನ್ ಅವರಿದ್ದ ಪೀಠವು, “ಹೊಸ ಮೀಸಲಾತಿ ವ್ಯವಸ್ಥೆಯು ‘ಇಂದ್ರಾ ಸಾಹ್ನಿ’ (ಮಂಡಲ್) ತೀರ್ಪಿನಲ್ಲಿ ನಿಗದಿ ಮಾಡಲಾಗಿರುವ 50% ಮಿತಿಯನ್ನು ಉಲ್ಲಂಘಿಸುತ್ತದೆ” ಎಂದು ಹೇಳಿತು. ಜಾತಿ ಸಮೀಕ್ಷೆಯು ಜನಸಂಖ್ಯೆಯನ್ನು ಆಧರಿಸಿದ್ದರೂ, ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿಲ್ಲ ಎಂದು ಹೇಳಿ, ಮೀಸಲಾತಿ ಹೆಚ್ಚಳಕ್ಕೆ ತಡೆಯಾಜ್ಞೆ ನೀಡಿತು.
ಅಲ್ಲದೆ, ನಡೆಯುತ್ತಿರುವ ಚುನಾವಣೆಯನ್ನು ಸ್ಥಗಿತಗೊಳಿಸದೆ, ಹೆಚ್ಚಿನ 17% ಸೀಟುಗಳನ್ನು ಓಪನ್ ಕೆಟಗರಿ (ಸಾಮಾನ್ಯ) ಎಂದು ಘೋಷಿಸಿ, ಮುಂದುವರೆಯಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತು. ಅಕ್ಟೋಬರ್ 16ರಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಪೀಠವು, ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಮೀಸಲಾತಿಯು 50% ಮಿತಿಯನ್ನು ಮೀರಬಾರದು ಎಂದು ವಿಧಿಸಿತು.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ತೆಲಂಗಾಣದ ಹಿಂದುಳಿದ ವರ್ಗಗಳಿಗೆ ನಿರಾಶೆ ಮೂಡಿಸಿದೆ. ಹತಾಶೆಗೊಂಡಿರುವ ಸಮುದಾಯಗಳ ಜನರು ಶನಿವಾರ ತೆಲಂಗಾಣ ಬಂದ್ ನಡೆಸಿದ್ದಾರೆ. ಬಂದ್ಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಆಡಳಿತಾರೂಢ ಕಾಂಗ್ರೆಸ್, ವಿರೋಧ ಪಕ್ಷ ಬಿಆರ್ಎಸ್ ಮತ್ತು ಬಿಜೆಪಿ ಸೇರಿದಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಒಮ್ಮತದೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ.
ಏನಿದು 50% ಮಿತಿ ವಿಧಿಸಿರುವ ‘ಇಂದ್ರಾ ಸಾಹ್ನಿ’ (ಮಂಡಲ್) ತೀರ್ಪು?
ಭಾರತದ ಮೀಸಲಾತಿ ವ್ಯವಸ್ಥೆಯ ಮೂಲ ಸಂವಿಧಾನದ 15 ಮತ್ತು 16ನೇ ವಿಧಿಗಳು. ಇದು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಮೀಸಲಾತಿ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ. ಈ ವಿಧಿಗಳ ಅಡಿಯಲ್ಲಿ ರಾಜ್ಯಗಳು ತಮ್ಮ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನಿಗದಿ ಮಾಡುತ್ತಿದ್ದವು. ಮೀಸಲಾತಿ ಹಂಚಿಕೆಯಲ್ಲಿ ನಿರ್ದಿಷ್ಟ ಗರಿಷ್ಠ ಮಿತಿ ಇರಲಿಲ್ಲ.
ಆದರೆ, ಮೀಸಲಾತಿಗೆ ಮಿತಿ ನಿಗದಿ ಮಾಡಿದ್ದು, 1992ರ ‘ಇಂದ್ರಾ ಸಾಹ್ನಿ vs ಯೂನಿಯನ್ ಆಫ್ ಇಂಡಿಯಾ’ ತೀರ್ಪು. ಒಬಿಸಿಗಳಿಗೆ 27% ಮೀಸಲಾತಿ ನೀಡುವ ಮಂಡಲ್ ಆಯೋಗದ ಶಿಫಾರಸುಗಳನ್ನು ಪ್ರಶ್ನಿಸಿ ಇಂದ್ರಾ ಸಾಹ್ನಿ ಎಂಬವರು ಸುಪ್ರೀಮ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. 1992ರಲ್ಲಿ ಆ ಅರ್ಜಿಯ ವಿಚಾರಣೆ ನಡೆಸಿದ್ದ 9 ನ್ಯಾಯಾಧೀಶರ ಸಂವಿಧಾನ ನ್ಯಾಯಪೀಠವು, ಮೀಸಲಾತಿಯು 50% ಗರಿಷ್ಠ ಮಿತಿಯನ್ನು ಮೀರಬಾರದು ಎಂದು ಘೋಷಿಸಿತು. ಮೀಸಲಾತಿ ಮಿತಿಯನ್ನು ಹೆಚ್ಚಿಸುವುದು ಸಮಾನತೆಯ ತತ್ವವನ್ನು ಪ್ರತಿಪಾದಿಸುವ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಬಣ್ಣಿಸಿತು.
‘ಅಸಾಧಾರಣ ಸಂದರ್ಭಗಳು’ (ಎಕ್ಸ್ಟ್ರಾಆರ್ಡಿನರಿ ಸಿಟ್ಯುಯೇಷನ್ಸ್) ಇದ್ದಾಗ ಮಾತ್ರ ಈ 50% ಮಿತಿಯನ್ನು ಮೀರಬಹುದು. ಉದಾಹರಣೆಗೆ; ಆದಿವಾಸಿ ಸಮುದಾಯಗಳ ಒಳಗೊಳ್ಳುವಿಕೆಯ ಸಮಯದಲ್ಲಿ ಎಂದು ಕೋರ್ಟ್ ಹೇಳಿತ್ತು.
ಇದೇ ಮಿತಿಯ ಆಧಾರದ ಮೇಲೆಯೇ 2021ರ ಮರಾಠಾ ಕೋಟಾ, 2024ರ ಇ.ಡಬ್ಲ್ಯು.ಎಸ್. ಕೋಟಾವನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಿಗದಿ ಮಾಡಲಾಯಿತು. 2021ರ ‘ಜೈಶ್ರಿ ಲಕ್ಷ್ಮಣರಾವ್ ಪಟೇಲ್’ ತೀರ್ಪಿನಲ್ಲಿ ‘50% ಮಿತಿಯನ್ನು ಮರುಪರಿಶೀಲಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿತು.
ಈ ಮಿತಿಯು ಹಲವು ರಾಜ್ಯಗಳಿಗೆ ಸವಾಲಾಗಿದೆ. ಅನೇಕ ರಾಜ್ಯಗಳು ಜನಸಂಖ್ಯೆ ಮತ್ತು ಸಾಮಾಜಿಕ ಅಸಮಾನತೆಯ ಆಧಾರದಲ್ಲಿ ಹೆಚ್ಚಿನ ಮೀಸಲಾತಿಯನ್ನು ನಿಗದಿ ಮಾಡಿವೆ.
ಈ ಲೇಖನ ಓದಿದ್ದೀರಾ?: ಎಸ್ಟಿ ಒಳಮೀಸಲಾತಿ ಮುನ್ನಲೆಗೆ; ‘ನಾಯಕ- ಕುರುಬ’ರ ನಡುವೆ ಬಿಕ್ಕಟ್ಟು ಮೂಡುವುದೇ?
ಛತ್ತೀಸ್ಗಢದಲ್ಲಿ 82%, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ 80%, ಮಧ್ಯಪ್ರದೇಶದಲ್ಲಿ 73%, ಮಹಾರಾಷ್ಟ್ರದಲ್ಲಿ 72%, ಹರಿಯಾಣದಲ್ಲಿ 65%, ಕರ್ನಾಟಕದಲ್ಲಿ 66%, ತಮಿಳುನಾಡಿನಲ್ಲಿ 69%, ಬಿಹಾರದಲ್ಲಿ 65%, ರಾಜಸ್ಥಾನದಲ್ಲಿ 64% ಹಾಗೂ ಆಂಧ್ರಪ್ರದೇಶದಲ್ಲಿ 55% ಮೀಸಲಾತಿಯನ್ನು ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ, ಬಿಹಾರ, ಛತ್ತೀಸ್ಗಢ, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿನ 50% ಮೀರಿದ ಮೀಸಲಾತಿಯನ್ನು ಅಲ್ಲಿನ ಹೈಕೋರ್ಟ್ಗಳು ರದ್ದುಗೊಳಿಸಿವೆ. ಆಂಧ್ರಪ್ರದೇಶದ ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿದೆ. ಕರ್ನಾಟಕದ ಮೀಸಲಾತಿ ವಿಚಾರವೂ ವಿವಾದದಲ್ಲಿದೆ.
ಆದರೆ, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ 80% ಹಾಗೂ ತಮಿಳುನಾಡಿನಲ್ಲಿ 69% ಮೀಸಲಾತಿ ಇದ್ದರೂ, ಇವು ವಿವಾದದಿಂದ ಹೊರಗುಳಿದಿವೆ. ಯಾಕೆಂದರೆ, ಈ ರಾಜ್ಯಗಳ ಮೀಸಲಾತಿ ಹಂಚಿಕೆಯು ಸಂವಿಧಾನದ 9ನೇ ವಿಧಿಯಡಿ ಶಾಸನಬದ್ದ/ಸಂವಿಧಾನಬದ್ದವಾಗಿವೆ.
ಕರ್ನಾಟಕದ ಮೇಲಿನ ಸಂಭಾವ್ಯ ಪರಿಣಾಮ
ಕರ್ನಾಟಕದಲ್ಲಿ ಮೀಸಲಾತಿ ವ್ಯವಸ್ಥೆಯು 50% ಮಿತಿಯನ್ನು ಮೀರಿದೆ. 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವು ಮೀಸಲಾತಿಯನ್ನು ಎಸ್ಸಿಗೆ 15%ನಿಂದ 17%, ಎಸ್ಟಿಗೆ 3%ನಿಂದ 7%ಗೆ ಹೆಚ್ಚಿಸಿತು. ಜೊತೆಗೆ, ಆರ್ಥಿಕವಾಗಿ ದುರ್ಬಲ ವರ್ಗ (ಡಿ.ಡಬ್ಲ್ಯೂ.ಸಿ) ಅಡಿಯಲ್ಲಿ ಕೇವಲ 3% ಇರುವ ಪ್ರಬಲ ಸಮುದಾಯಗಳಿಗೆ 10% ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಹೀಗಾಗಿ, ರಾಜ್ಯದಲ್ಲಿ ಒಟ್ಟು (ಎಸ್ಸಿ-17%, ಎಸ್ಟಿ-7%, ಒಬಿಸಿ 32%, ಇ.ಡಬ್ಲ್ಯೂ.ಸಿ-10%) 66% ಮೀಸಲಾತಿ ಜಾರಿಯಲ್ಲಿದೆ. ಇದು, ಸುಪ್ರೀಂ ಕೋರ್ಟ್ನ 50% ಮಿತಿಗಿಂತಲೂ ಹೆಚ್ಚಿದೆ. ಈ ಮೀಸಲಾತಿಯು ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಅನ್ವಯವಾಗುತ್ತದೆ.
ಆದರೆ, ಈಗ ತೆಲಂಗಾಣ ವಿಚಾರದಲ್ಲಿ ಹೊರಬಂದಿರುವ ತೀರ್ಪು ಕರ್ನಾಟಕಕ್ಕೂ ಬೆದರಿಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಈಗಾಗಲೇ, ಕರ್ನಾಟಕದ ಮೀಸಲಾತಿ ವಿಚಾರವು ವಿವಾದದಲ್ಲಿದೆ. ರಾಜ್ಯದಲ್ಲಿ 50% ಮಿತಿಯನ್ನು ಮೀರಿ ಮೀಸಲಾತಿ ಹಂಚಿಕೆಯೂ ಅಸಾಧಾರಣ ಸಂದರ್ಭವನ್ನು ಒಳಗೊಂಡಿಲ್ಲವೆಂದು 2022ರಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು. ಆದಾಗ್ಯೂ, ಮೀಸಲಾತಿ ರದ್ದಾಗಿಲ್ಲ. ಪ್ರಸ್ತುತ, ಕರ್ನಾಟಕ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಅಂಗಳದಲ್ಲಿದೆ.
ಈಗಾಗಲೇ, ಬಿಹಾರ, ಛತ್ತೀಸ್ಗಢ, ರಾಜಸ್ಥಾನದಲ್ಲಿ 50% ಮೀರಿದ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಇದೀಗ, ತೆಲಂಗಾಣದಲ್ಲಿ 50% ಮಿತಿಯನ್ನು ದಾಟಿದ ಮೀಸಲಾತಿಗೆ ತಡೆ ನೀಡಲಾಗಿದೆ. ಕರ್ನಾಟಕದ ಮೀಸಲಾತಿ ವ್ಯವಸ್ಥೆಯ ವಿಚಾರವೂ ಇಂತಹ ತೀರ್ಪಿಗೆ ಗುರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷಾ ವರದಿಯ ಆಧಾರದಲ್ಲಿ ಮೀಸಲಾತಿ ಹಂಚಿಕೆಯನ್ನು ಸಮರ್ಥಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಅವಕಾಶ ದೊರೆಯಬಹುದು ಎಂಬ ಆಶಾಭಾವನೆಯೂ ಇದೆ.
ಜೊತೆಗೆ, ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಮತ್ತೊಂದು ಅವಕಾಶವೂ ಇದೆ. ಆ ಅವಕಾಶ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರ ಸರ್ಕಾರದ ಕೈಯಲ್ಲಿದೆ. ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಕರ್ನಾಟಕ, ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳ 50% ಮಿತಿಯನ್ನು ಮೀರಿದ ಮೀಸಲಾತಿಯನ್ನು ಮಸೂದೆಯಾಗಿ ಮಂಡಿಸಿ, ಅಂಗೀಕರಿಸಿ ಸಂವಿಧಾನದ 9ನೇ ವಿಧಿಯಡಿ ಶಾಸನಬದ್ದಗೊಳಿಸಿದರೆ, ಅದು ಸಾಧ್ಯವಾಗುತ್ತದೆ.




