ಗೋಹತ್ಯೆ ಆರೋಪದ ಮೇಲೆ ಇಬ್ಬರು ಮುಸ್ಲಿಂ ಯುವಕರನ್ನು ಪೊಲೀಸರು ಥಳಿಸಿದ್ದು, ಹಲ್ಲೆ ಮಾಡುತ್ತಲೇ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಮುಸ್ಲಿಂ ಯುವಕ ಸಲೀಂ ಮೇವಾಟಿ ಮತ್ತು ಆಕಿಬ್ ಮೇವಾಟಿ ಎಂಬ ಯುವಕರನ್ನು ಜನನಿಬಿಡ ಪ್ರದೇಶದಲ್ಲಿ ಪೊಲೀಸರು ಮೆರವಣಿಗೆ ಮಾಡಿದ್ದಾರೆ. ದಾರಿಯುದ್ದಕ್ಕೂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, “ಗೋವು ನಮ್ಮ ತಾಯಿ – ಪೊಲೀಸರು ನಮ್ಮ ತಂದೆ” (ಗೌ ಹಮಾರಿ ಮಾತಾ ಹೈ, ಪೊಲೀಸ್ ಹಮಾರಾ ಬಾಪ್ ಹೈ) ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಸಲೀಂ ಮತ್ತು ಆಕಿಬ್ ಅವರನ್ನು ಯಾಕೆ ಮೆರವಣಿಗೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, ‘ಅವರು ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ಹೇಳಿದ್ದಾರೆ.
"In #MadhyaPradesh's #Ujjain, the #MPPolice paraded two #Muslim youths, Salim Mewati and Aaqib Mewati, while beating them and forcing them to raise slogans like 'cow is our mother, police is our father,' among others.
— Hate Detector 🔍 (@HateDetectors) March 4, 2025
The procession was held in connection with charges of cow… pic.twitter.com/13sqObfpyX
ಇಬ್ಬರು ಮುಸ್ಲಿಂ ಯುವಕರನ್ನು ಸುಮಾರು ಒಂದು ಕಿಲೋಮೀಟರ್ ವೆರೆಗೆ ಹೊಡೆಯುತ್ತಲೇ ಮೆರವಣಿಗೆ ಮಾಡಿರುವ ಪೊಲೀಸರು, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಯುವಕರನ್ನು ಮೆರವಣಿಗೆ ಮಾಡಿರುವುದು ಮತ್ತು ರಸ್ತೆಯುದ್ದಕ್ಕೂ ಥಳಿಸಿರುವುದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಹಿಂದುತ್ವವಾದಿ ಗೋರಕ್ಷರಂತೆ ವರ್ತಿಸುತ್ತಿದ್ದಾರೆ ಎಂದು ಹಲವರು ಕಿಡಿಕಾರಿದ್ದಾರೆ.
“ಉಜ್ಜಯಿನಿಯ ಘಾಟಿಯಾ ಪ್ರದೇಶದಲ್ಲಿ ಗೋಹತ್ಯೆ ನಡೆಸುತ್ತಿರುವ ಬಗ್ಗೆ ಸುಳಿವು ಸಿಕ್ಕಿತು. ಮಾಹಿತಿ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿಗಳ ವಾಹನ, ಮೊಬೈಲ್ ಫೋನ್ಗಳು ಮತ್ತು ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 3ನೇ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದೆ” ಎಂದು ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಭಾರ್ಗವ್ ತಿಳಿಸಿದ್ದಾರೆ.




