ಅಕಾಲಿಕ ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರವಾಗಿ ಸರ್ಕಾರವು ಕೇವಲ 2.30 ರೂ.ಗಳನ್ನು ತಮ್ಮ ಖಾತೆಗೆ ಜಮಾ ಮಾಡಿದೆ ಎಂದು ಮಹಾರಾಷ್ಟ್ರದ ರೈತರೊಬ್ಬರು ಆರೋಪಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ತಾಲೂಕಿನ ಶಿಲೋತ್ತರ್ ಗ್ರಾಮದ ನಿವಾಸಿ ಮಧುಕರ್ ಬಾಬುರಾವ್ ಪಾಟೀಲ್ ಅವರು ತಮಗೆ 1.5 ಲಕ್ಷ ರೂ. ಪರಿಹಾರ ಬರಬೇಕಿತ್ತು. ಆದರೆ, 2 ರೂ.ಗಳು ಮಾತ್ರವೇ ತಮ್ಮ ಖಾತೆಗೆ ಜಮಾ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ರೈತ ಮಧುಕರ್ ಅವರು ತಮ್ಮ 2.51 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮಾಡಿದ್ದರು. ಆದರೆ, ಮಳೆಯಿಂದಾಗಿ ಎಲ್ಲವೂ ನಾಶವಾಗಿತ್ತು. ಬೆಳೆ ನಷ್ಟಕ್ಕೆ ಪರಿಹಾರವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 1,53,110 ರೂ. ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇತ್ತೀಚೆಗೆ ಹಣಪಾವತಿ ಕುರಿತು ಮಧುಕರ್ ಪಾಟೀಲ್ ಅವರಿಗೆ ಸಂದೇಶ ಬಂದಿದ್ದು, ಅದರಲ್ಲಿ, ರೈತನ ಖಾತೆಗೆ ಕೇವಲ 2.30 ರೂ. ಮಾತ್ರ ಜಮಾ ಆಗಿದೆ ಎಂದು ತೋರಿಸಿದೆ ಎಂಬುದಾಗಿ ವರದಿಯಾಗಿದೆ.
“ನಿರಂತರ ಮಳೆಯಿಂದಾಗಿ ಭತ್ತದ ಕೊಯ್ಲು ಸಂಪೂರ್ಣ ನಾಶವಾಗಿತ್ತು. ಗದ್ದೆಯಲ್ಲಿ ನೀರು ನಿಂತು ಬೆಳೆ ಕೊಳೆತು ಹೋಗಿತ್ತು. ಹುಲ್ಲು ಕೂಡ ಕಪ್ಪು ಬಣ್ಣಕ್ಕೆ ತಿರುಗಿತು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿ ಬಿಕ್ಕಟ್ಟು ಇನ್ನಷ್ಟು ಹದಗೆಟ್ಟಿತು. ಆದರೆ, ನಮ್ಮ ಖಾತೆಗೆ ಪರಿಹಾರದ ಮೊತ್ತವೆಂದು ಜಮಾ ಆಗಿರುವ 2.30 ರೂ. ನೋಡಿ ಆಘಾತಕ್ಕೊಳಗಾಗಿದ್ದೇವೆ” ಎಂದು ರೈತ ಮಧುಕರ್ ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಬಿಜೆಪಿ 1 ಕೋಟಿ ಉದ್ಯೋಗದ ಭರವಸೆ; 20 ವರ್ಷದಲ್ಲಿ ಆಗದ್ದು ಈಗ ಸಾಧ್ಯವೇ?
ಪಾಲ್ಘರ್ ಜಿಲ್ಲಾ ಕೃಷಿ ಅಧಿಕಾರಿ ನೀಲೇಶ್ ಭಾಗೇಶ್ವರ್ ಅವರು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿದ್ದಾರೆ. “ಸಮಸ್ಯೆ ಕುರಿತು ತನಿಖೆ ಮಾಡಿದ್ದೇವೆ. ಆ ರೈತನಿಗೆ ಜಮಾ ಮಾಡಿದ ಮೊತ್ತವು 2023ರ ಖಾರಿಫ್ ಋತುವಿನಲ್ಲಿ ಉಂಟಾಗಿದ್ದ ನಷ್ಟಕ್ಕೆ ಪರಿಹಾರವಾಗಿ ನೀಡಲಾಗಿತ್ತು. ಅವರಿಗೆ, ಆ ವರ್ಷ ಒಟ್ಟು 72,466 ರೂ. ಪರಿಹಾರ ಘೋಷಿಸಲಾಗಿತ್ತು. 2024ರ ಮೇನಲ್ಲಿ ಅವರಿಗೆ 72,464 ರೂ. ಪಾವತಿಯಾಗಿತ್ತು. ಉಳಿಕೆ 2.30 ರೂ.ಗಳನ್ನು ಈ ವರ್ಷದ ಅಕ್ಟೋಬರ್ 31ರಂದು ಪಾವತಿಸಲಾಗಿದೆ. ಈ ಬಗ್ಗೆ ನಾವು ರೈತನಿಗೆ ಮಾಹಿತಿ ನೀಡಿದ್ದೇವೆ. ಅಲ್ಲದೆ, ಪರಿಹಾರ ಗೊಂದಲದ ಸಂಬಂಧ ಯಾವುದೇ ದೂರುಗಳು ಇಲ್ಲವೆಂದು ಅವರಿಂದ ಲಿಖಿತವಾಗಿ ಬೆರೆಯಿಸಿಕೊಳ್ಳಲಿದ್ದೇವೆ” ಎಂದು ಅವರು ಹೇಳಿದ್ದಾರೆ.
ಮಧುಕರ್ ಪಾಟೀಲ್ ಅವರು ದುಃಸ್ಥಿತಿಯ ಬಗ್ಗೆ ಮಾತನಾಡಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, “ಪಾಲ್ಘರ್ನ ರೈತ ಬೆಳೆ ವಿಮಾ ಪರಿಹಾರವಾಗಿ ಕೇವಲ 2 ರೂ. ಮತ್ತು 30 ಪೈಸೆಗಳನ್ನು ಪಡೆದಿದ್ದಾರೆ ಎಂಬುದು ತಮಾಷೆಯಾಗಿದೆ” ಎಂದು ಹೇಳಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




