ಬಂಗಾಳ ಕೊಲ್ಲಿಯಲ್ಲಿ ತೀವ್ರ ಸ್ವರೂಪ ತಾಳಿರುವ ಮೊಂಥಾ ಚಂಡಮಾರುತವು ಇಂದು ರಾತ್ರಿ ಆಂಧ್ರ ಪ್ರದೇಶ ಹಾಗೂ ಒಡಿಶಾ ಕರಾವಳಿಯಲ್ಲಿ ಅಪ್ಪಳಿಸಲಿದೆ.
ಗಂಟೆಗೆ 110 ಕಿಮೀ ವೇಗದ ಬಿರುಗಾಳಿಯೊಂದಿಗೆ ಈ ಚಂಡಮಾರುತವು ಆಂಧ್ರ ಮತ್ತು ಒಡಿಶಾದ ಕರಾವಳಿಯಲ್ಲಿ ಭಾರೀ ಮಳೆ, ಗಾಳಿಯಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಎರಡೂ ರಾಜ್ಯಗಳಲ್ಲಿ ಸ್ಥಳಾಂತರ, ಆಶ್ರಯ ಕೇಂದ್ರಗಳ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ.
ಚಂಡಮಾರುತದಿಂದಾಗಿ ಚಿತ್ತೂರು, ತಿರುಪತಿ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಚಿತ್ತೂರಿನ ನಗರಿಯಲ್ಲಿ ಕುಶಸ್ಥಲಿ ನದಿಯ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೃಷ್ಣಾಪುರಂ ಜಲಾಶಯದಿಂದ 1,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಕಾಕಿನಾಡದ ಉಪ್ಪಾಡದಲ್ಲಿ ಕಡಲ ತೀರಕ್ಕೆ ಅಲೆಗಳು ಒಡ್ಡಿವೆ. ಮೀನುಗಾರ ಕುಟುಂಬಗಳನ್ನು ಉಪ್ಪಾಡ, ಸುಬ್ಬಂಪೇಟ ಮತ್ತು ಇತರ ಗ್ರಾಮಗಳಿಂದ ಸ್ಥಳಾಂತರಿಸಲಾಗಿದೆ. ತಿರುಪತಿಯ 75 ಕಿಮೀ ಕರಾವಳಿಯ ಐದು ಮಂಡಲಗಳಲ್ಲಿ ತೀವ್ರ ಮಳೆ, ಬಿರುಗಾಳಿಯ ಎಚ್ಚರಿಕೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಭಾರತಕ್ಕೆ ಅಪ್ಪಳಿಸಲಿರುವ ‘ಮೋಂತಾ’ ಚಂಡಮಾರುತ: ಕರ್ನಾಟಕದಲ್ಲಿ ಭಾರೀ ಮಳೆ
ಒಡಿಶಾದಲ್ಲಿ ಸನ್ನದ್ಧತೆ
ಒಡಿಶಾದ ಎಂಟು ಜಿಲ್ಲೆಗಳಾದ ಮಲ್ಕಾಂಗಿರಿ, ಕೋರಾಪುಟ್, ಗಜಪತಿ, ಗಂಜಾಮ್ ಮುಂತಾದವುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 32,000 ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಾಗಿದ್ದು,1,445 ಆಶ್ರಯ ಕೇಂದ್ರಗಳು, 140 ರಕ್ಷಣಾ ತಂಡಗಳು ಸಿದ್ಧವಾಗಿವೆ. ಗಜಪತಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗುವ ಆತಂಕವಿದೆ.
ಪಶ್ಚಿಮ ಬಂಗಾಳ,ತಮಿಳುನಾಡಿನಲ್ಲಿ ಮಳೆ
ಪಶ್ಚಿಮ ಬಂಗಾಳದ ಕೋಲ್ಕತ್ತಾ, ಹೌರಾ, ದಕ್ಷಿಣ 24 ಪರಗಣದಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದ್ದು, ಗಂಟೆಗೆ 80-90 ಕಿಮೀ ವೇಗದ ಗಾಳಿಯ ಎಚ್ಚರಿಕೆ ನೀಡಲಾಗಿದೆ. ಮೀನುಗಾರರಿಗೆ ಕಡಲಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ತಮಿಳುನಾಡಿನ ಚೆನ್ನೈ, ತಿರುವಳ್ಳೂರು ಸೇರಿ ಉತ್ತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.
ವಿಮಾನ, ರೈಲು ಸೇವೆಗೆ ಅಡಚಣೆ
ವಿಶಾಖಪಟ್ಟಣಂ-ಚೆನ್ನೈ ನಡುವಿನ ಆರು ವಿಮಾನಗಳು ರದ್ದಾಗಿವೆ. ರೈಲ್ವೆ ಇಲಾಖೆಯು ಸಮಲೇಶ್ವರಿ ಎಕ್ಸ್ಪ್ರೆಸ್, ಹಿರಾಖಂಡ್ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ರದ್ದುಗೊಳಿಸಿದೆ ಅಥವಾ ಭಾಗಶಃ ನಿಲ್ಲಿಸಿದೆ.
ಈ ಚಂಡಮಾರುತದಿಂದ ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ತೀವ್ರ ಪರಿಣಾಮ ಉಂಟಾಗಲಿದ್ದು, ಸರ್ಕಾರಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ.





