ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾದ ಎಲ್ಪಿಜಿ ಪೂರೈಕೆಯಲ್ಲಿನ ಕೊರತೆ ಈಗ ದೇಶದ ಬಿಸಿಯೂಟ ಯೋಜನೆಯ ಮೇಲೆ ಪರಿಣಾಮ ಬೀರಿದೆ.ಅಡುಗೆ ಮಾಡಲು ಎಲ್ಪಿಜಿ ಅವಲಂಭಿಸಿದ ಅಡುಗೆ ಕಾರ್ಯಕರ್ತೆಯರು ಸಿಲಿಂಡರ್ ಅಭಾವ ಸೃಷ್ಟಿಯಾದ ಕಾರಣ ಪರ್ಯಾಯ ಇಂಧನ ವ್ಯವಸ್ಥೆ ಹುಡುಕಿಕೊಳ್ಳಬೇಕಿದೆ.
ಬೇರೆ ಯಾವ ಪರ್ಯಾಯಗಳು ಸಿಗದೆ ಕೆಲವು ಶಾಲೆಗಳಲ್ಲಿ ಸೌದೆ ಒಲೆ ಮೊರೆ ಹೋಗಿರುವ ಅಡುಗೆ ಕಾರ್ಯಕರ್ತೆಯರು ಬೇಸಿಗೆಯ ಸುಡು ದಿನಗಳನ್ನು ಬೆಂಕಿಯ ಮುಂದೆ ಕಳೆಯುವಂತಾಗಿದೆ.ಕೆಲವು ವರ್ಷಗಳ ಹಿಂದಷ್ಟೇ ಕಟ್ಟಿಗೆ ಒಲೆಯ ಹೊಗೆಯಿಂದ ಮುಕ್ತಿ ಪಡೆದಿದ್ದ ಬಿಸಿಯೂಟ ಸಹಾಯಕಿಯರು ಹಾಗೂ ಅಡುಗೆಯವರು ಈಗ ಮತ್ತೆ ಹಿಮ್ಮುಖವಾಗಿ ಚಲಿಸಿದಂತಾಗಿದೆ.
ದೂರದ ಕಾಡುಗಳಿಂದ ಸೌದೆ ಹೆಕ್ಕಿ ತರುವ ಕೆಲಸವು ಸಹಾಯಕಿಯರ ಹೆಗಲೇರಿದೆ. ಶಿಕ್ಷಣ ಸಚಿವಾಲಯದ ದತ್ತಾಂಶದ ಪ್ರಕಾರ, ಪಿಎಂ ಪೋಷಣ್ (PM POSHAN) ಯೋಜನೆಯಡಿ ಕೆಲಸ ಮಾಡುತ್ತಿರುವ 24 ಲಕ್ಷ ಅಡುಗೆಯವರು ಮತ್ತು ಸಹಾಯಕರಲ್ಲಿ (CCHs) ಶೇಕಡಾ 90 ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಉರುವಲು ಬಳಸಿ ಅಡುಗೆ ಮಾಡುವುದರಿಂದ ಉಂಟಾಗುವ ದೈಹಿಕ ಶ್ರಮದ ಜೊತೆಗೆ, ಇದು ಉಸಿರಾಟದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು ಮತ್ತು ಬ್ರಾಂಕೈಟಿಸ್, ಅಸ್ತಮಾ ಹಾಗೂ ಕಾಲಾನಂತರದಲ್ಲಿ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳಂತಹ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಸುಮಾರು 10.35 ಲಕ್ಷ ಶಾಲೆಗಳ 11 ಕೋಟಿ ಮಕ್ಕಳನ್ನು ತಲುಪುವ PM POSHAN ಯೋಜನೆಯನ್ನು (ಮಧ್ಯಾಹ್ನದ ಬಿಸಿಯೂಟ ಯೋಜನೆ) ಇದೀಗ ಮತ್ತೆ ಪರ್ಯಾಯ ಇಂಧನಗಳ ಬಳಕೆಗೆ ಬದಲಾಯಿಸಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯುವವರಲ್ಲಿ ಹೆಚ್ಚಿನವರು ಸಾಮಾಜಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ಕುಟುಂಬದ ಮಕ್ಕಳಿದ್ದಾರೆ.

ದೆಹಲಿ-ಎನ್ಸಿಆರ್ನ (Delhi-NCR) ಕೆಲವು ಶಾಲೆಗಳಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಊಟದ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಸಮುದ್ರ ಮಾರ್ಗಗಳಲ್ಲಿ ಉಂಟಾಗಿರುವ ಅಡೆತಡೆಗಳು ಅಡುಗೆ ಅನಿಲ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿವೆ.
- ಖಾಸಗಿ ಶಾಲೆಗಳ ಎಚ್ಚರಿಕೆ: ದೆಹಲಿ ಮತ್ತು ಗುರುಗ್ರಾಮದ ಪ್ರತಿಷ್ಠಿತ ಶ್ರೀ ರಾಮ್ ಸ್ಕೂಲ್ (Shri Ram School)ತನ್ನ ಶಾಲೆಯ ಕ್ಯಾಟರರ್ ಬಳಿ ಗ್ಯಾಸ್ ಸಂಗ್ರಹ ಕಡಿಮೆಯಾಗುತ್ತಿದೆ ಎಂದು ಪೋಷಕರಿಗೆ ಇಮೇಲ್ ಕಳುಹಿಸಿದೆ. ಮಾರ್ಚ್ 16ರ ನಂತರ ಮಧ್ಯಾಹ್ನದ ಊಟ ಮತ್ತು ತಿಂಡಿ ಒದಗಿಸಲು ಸಾಧ್ಯವಾಗದಿರಬಹುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
- ಪರ್ಯಾಯ ವ್ಯವಸ್ಥೆಗೆ ಸೂಚನೆ: ಕೆಲವು ಶಾಲೆಗಳು ಪೋಷಕರಿಗೆ ತಮ್ಮ ಮಕ್ಕಳಿಗೆ ಮನೆಯಿಂದಲೇ ಊಟವನ್ನು ಕಳುಹಿಸುವಂತೆ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿವೆ.
ಬಿಕ್ಕಟ್ಟಿನ ಹಿನ್ನೆಲೆ:
ಯು.ಎಸ್., ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲ ಸಂಧಿಯ(Strait of Hormuz) ಮೂಲಕ ನಡೆಯುವ ಇಂಧನ ಸಾಗಾಟಕ್ಕೆ ಅಡ್ಡಿಯಾಗಿದೆ. ಭಾರತವು ತನ್ನ ಎಲ್ಪಿಜಿ ಅಗತ್ಯದ ಸುಮಾರು 60% ರಷ್ಟು ಆಮದು ಮಾಡಿಕೊಳ್ಳುತ್ತಿದ್ದು, ಈ ಮಾರ್ಗವು ಅತೀ ಪ್ರಮುಖವಾಗಿದೆ.
ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರವು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಯನ್ನು ಹೆಚ್ಚಿಸಲು ಮತ್ತು ಕಾಳಸಂತೆಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿದೆ.





