ಮಹಾರಾಷ್ಟ್ರ ರಾಜಕಾರಣದಲ್ಲಿ ʼಅಜಿತ್ ದಾದಾʼ ಎಂದೇ ಖ್ಯಾತರಾಗಿದ್ದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್ಸಿಪಿ ನಾಯಕ ಅಜಿತ್ ಪವಾರ್ (66) ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಬುಧವಾರ ಬೆಳಗ್ಗೆ 8:45ರ ವೇಳೆಗೆ ಅಜಿತ್ ಪವಾರ್ ಜೊತೆ ಪ್ರಯಾಣಿಸುತ್ತಿದ್ದ ಇತರ ಐವರೂ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ವಿಮಾನ ಪತನದಲ್ಲಿ ಸಾವನ್ನಪ್ಪಿದ್ದಾರೆ.
ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ʼಲಿಯರ್ಜೆಟ್-45’ ವಿಮಾನ ತನ್ನ ಕೊನೆಯ ಹಾರಾಟದ ವೇಳೆ ಪತನಗೊಂಡಿದೆ. ಅದರಲ್ಲಿ ಅಜಿತ್ ಪವಾರ್ ಸೇರಿ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ವಿದೀಪ್ ಜಾಧವ್, ವಿಮಾನ ಸಹಾಯಕಿ ಪಿಂಕಿ ಮಾಲಿ, ಮುಖ್ಯ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್, ಸಹ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಇದ್ದರು.
ಸುಮಾರು 15 ವರ್ಷಗಳ ಹಳೆಯ ವಿಮಾನವಾಗಿದ್ದ ಲಿಯರ್ಜೆಟ್-45, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದಿಂದ ಅನುಮತಿ ಪಡೆದಿತ್ತು. ಕ್ಯಾಪ್ಟನ್ ಸುಮಿತ್ ಕಪೂರ್ ಅವರು 15,000 ಗಂಟೆಗಳು ಯಶಸ್ವಿಯಾಗಿ ವಿಮಾನಯಾನ ನಡೆಸಿದ್ದ ಅನುಭವಿ ಪೈಲಟ್. ಅವರ ಜೊತೆಗಿದ್ದ ಸಹ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ 1,500 ಗಂಟೆಗಳ ಹಾರಾಟದ ಅನುಭವವಿದ್ದವರು. ಈ ಯಾವ ಅನುಭವವೂ ಕಡೆ ಕ್ಷಣದಲ್ಲಿ ಕೆಲಸಕ್ಕೆ ಬಂದಿಲ್ಲ.
ಇದನ್ನು ಓದಿ : ವಿಮಾನ ದುರಂತ | ಪೈಲಟ್ ಶಾಂಭವಿ ಅಜ್ಜಿಗೆ ಕಳುಹಿಸಿದ ಕೊನೆಯ ಸಂದೇಶದಲ್ಲೇನಿದೆ?
ಮುಂಬೈನ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ʼಲಿಯರ್ಜೆಟ್-45’ ಟೆಕ್ಆಫ್ ಆಗಿತ್ತು. ಟೆಕ್ಆಫ್ ಆದ ವೇಳೆ ಹವಮಾನ ಸಂಪೂರ್ಣ ತೆರೆದುಕೊಂಡಿತ್ತು. ಆದರೆ 20 ನಿಮಿಷದ ನಂತರ ಅಂದರೆ, 8:32ರ ವೇಳೆಗೆ ವಿಮಾನ ಬಾರಾಮತಿಯಲ್ಲಿ ಲ್ಯಾಂಡ್ ಆಗಲು ಯತ್ನಿಸಿದೆ. ಆದರೆ ರನ್ ವೇ ಕಾಣಿಸದ ಕಾರಣ ವಿಮಾನ ಮೊದಲ ಪ್ರಯತ್ನದಲ್ಲಿ ವಿಫಲವಾಗಿದೆ. ಮತ್ತೆ ಹಾರಾಟ ನಡೆಸಿ ಎರಡನೇ ಬಾರಿ ಲ್ಯಾಂಡ್ ಮಾಡಲು ಪ್ರಯತ್ನಿಸಲಾಗಿದೆ. ಆದರೆ, ಆ ಪ್ರಯತ್ನ ವಿಫಲಗೊಂಡು ವಿಮಾನ ಛಿದ್ರ ಛಿದ್ರವಾಗಿದೆ.
ಕೊನೆಯ ನಿಮಿಷದಲ್ಲಿ ಆಗಿದ್ದೇನು?
ಬೆಳಗ್ಗೆ 8:10ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ಆಫ್ ಆಗುತ್ತದೆ. ಹಾರಾಟ ಆರಂಭವಾದ ಎಂಟು ನಿಮಿಷಗಳಲ್ಲೇ, 8:18ಕ್ಕೆ ಪೈಲಟ್ ಬಾರಾಮತಿ ಏರ್ ಟ್ರಾಫಿಕ್ ಕಂಟ್ರೋಲರ್ ಅನ್ನು ಸಂಪರ್ಕಿಸುತ್ತಾರೆ. ಗಾಳಿಯ ವೇಗ ಮತ್ತು ಹವಮಾನ ಗೋಚರತೆಯ ಬಗ್ಗೆ ಮಾಹಿತಿ ಕೇಳಿದಾಗ, ಎಟಿಸಿ ಶಾಂತ ಗಾಳಿ ಇದೆ, ಗೋಚರತೆ ಸುಮಾರು 3 ಸಾವಿರ ಮೀಟರ್ವರೆಗೆ ಇದೆ ಎಂದು ತಿಳಿಸುತ್ತದೆ. ಕೇವಲ 20 ನಿಮಿಷಗಳ ಹಾರಾಟದ ಬಳಿಕ ವಿಮಾನ ಬಾರಾಮತಿ ತಲುಪುತ್ತದೆ. ಬೆಳಗ್ಗೆ 8:30ರ ವೇಳೆಗೆ ರನ್ ವೇ 11ರಲ್ಲಿ ಲ್ಯಾಂಡಿಂಗ್ಗೆ ವಿಮಾನ ಸಜ್ಜಾಗುತ್ತದೆ. ಆದರೆ ಕೆಳಗೆ ರನ್ ವೇ ಸ್ಪಷ್ಟವಾಗಿ ಕಾಣಿಸದ ಕಾರಣ, ಮೊದಲ ಪ್ರಯತ್ನದಲ್ಲೇ ವಿಮಾನವನ್ನು ಮತ್ತೆ ಮೇಲಕ್ಕೆತ್ತುವ ನಿರ್ಧಾರವನ್ನು ಪೈಲಟ್ ತೆಗೆದುಕೊಳ್ಳುತ್ತಾರೆ.
ಇದಾದ ತಕ್ಷಣ ಎಟಿಸಿ ವಿಮಾನದ ಸ್ಥಿತಿಯ ಬಗ್ಗೆ ಪ್ರಶ್ನಿಸಿದಾಗ, ಪೈಲಟ್ ರನ್ ವೇ 11ರ ಹತ್ತಿರ ಇದ್ದೇವೆ ಎಂದು ಉತ್ತರಿಸುತ್ತಾರೆ. ರನ್ ವೇ ಗೋಚರಿಸುತ್ತಿದೆಯೇ ಎಂದು ಎಟಿಸಿ ಮತ್ತೆ ಕೇಳಿದಾಗ, ಸದ್ಯಕ್ಕೆ ರನ್ ವೇ ಕಾಣಿಸುತ್ತಿಲ್ಲ, ಕಾಣಿಸಿದಾಗ ಮತ್ತೆ ಸಂಪರ್ಕಿಸುತ್ತೇವೆ ಎಂದು ಪೈಲಟ್ ತಿಳಿಸುತ್ತಾರೆ. ಕೆಲವೇ ಸೆಕೆಂಡುಗಳ ಬಳಿಕ ಪೈಲಟ್ ಮತ್ತೆ ಪ್ರತಿಕ್ರಿಯಿಸಿ ರನ್ ವೇ ಕಾಣಿಸುತ್ತಿದೆ ಎಂದು ಹೇಳುತ್ತಾರೆ. ಹೀಗಾಗಿ ಬೆಳಗ್ಗೆ 8:43ಕ್ಕೆ ಎಟಿಸಿ ರನ್ ವೇ 11ರಲ್ಲಿ ಲ್ಯಾಂಡಿಂಗ್ಗೆ ಅನುಮತಿ ನೀಡುತ್ತದೆ.
ಆದರೆ ಈ ಲ್ಯಾಂಡಿಂಗ್ ಕ್ಲಿಯರೆನ್ ಬಗ್ಗೆ ವಿಮಾನದಲ್ಲಿರುವ ಪೈಲಟ್ನಿಂದ ಯಾವುದೇ ಉತ್ತರ ಬಂದಿಲ್ಲ. ಆದರೂ ಪೈಲಟ್ ಲ್ಯಾಂಡಿಂಗ್ಗೆ ಮುಂದಾಗುತ್ತಾರೆ. ವಿಮಾನ ಕೆಳಗಿಳಿಯುತ್ತದೆ. ಆದರೆ ಅದು ಸಾಮಾನ್ಯ ನಿಧಾನಗತಿಯಲ್ಲ, ಅಪಾಯಕಾರಿ ವೇಗದಲ್ಲಿರುತ್ತದೆ. ವಿಮಾನದ ಚಕ್ರಗಳು ರನ್ವೇಗೆ ಬಡಿದ ಕ್ಷಣದಲ್ಲೇ ಭಾರೀ ರಭಸ ಉಂಟಾಗಿ, ನಿಯಂತ್ರಣ ತಪ್ಪಿದ ವಿಮಾನ ರನ್ವೇ ಪಕ್ಕಕ್ಕೆ ಜಾರಿ ಬೀಳುತ್ತದೆ. ಮುಂದಿನ ಕ್ಷಣದಲ್ಲಿ ಮಣ್ಣಿನ ರಸ್ತೆಗೆ ನುಗ್ಗಿದ ವಿಮಾನ ಕ್ಷಣಾರ್ಧದಲ್ಲೇ ತುಂಡು ತುಂಡಾಗಿ ಬಿರುಕು ಬೀಳುತ್ತಾ ಬೆಂಕಿ ಕಾಣಿಸಿಕೊಳ್ಳುತ್ತದೆ.
ತಕ್ಷಣವೇ ಬೆಂಕಿ ಕಾಣಿಸಿಕೊಳ್ಳಲು ಕಾರಣ
ವಿಮಾನ ಪತನಗೊಂಡ ತಕ್ಷಣವೇ ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ, ಅದರ ರಚನೆಯಲ್ಲೇ ಇರುವ ಇಂಧನ ವ್ಯವಸ್ಥೆ. ಸಾಮಾನ್ಯವಾಗಿ ಕಮರ್ಷಿಯಲ್ ವಿಮಾನಗಳಲ್ಲಿ ಇಂಧನ ಟ್ಯಾಂಕ್ಗಳನ್ನು ರೆಕ್ಕೆಗಳ ಒಳಭಾಗದಲ್ಲೇ ಅಳವಡಿಸಲಾಗಿರುತ್ತದೆ. ಇದಕ್ಕೆ ಕಾರಣ ವಿಮಾನದ ತೂಕ ಸಮತೋಲನ ಮತ್ತು ಹಾರಾಟದ ಸ್ಥಿರತೆ. ಪತನಗೊಂಡ ಈ ವಿಮಾನದಲ್ಲಿಯೂ ಅದೇ ರೀತಿಯಾಗಿ ರೆಕ್ಕೆಗಳಲ್ಲೇ ಇಂಧನ ಟ್ಯಾಂಕ್ಗಳು ಇದ್ದವು.
ಇದನ್ನೂ ಓದಿ ಇರಾನ್ ಮೇಲೆ ಮರುದಾಳಿಗೆ ಸಜ್ಜಾಗುತ್ತಿವೆ ಅಮೆರಿಕ- ಇಸ್ರೇಲ್ ಯುದ್ಧಕೋರ ಜೋಡಿ
ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿದಾಗ ಉಂಟಾದ ಭಾರೀ ರಭಸಕ್ಕೆ, ಬಲಭಾಗದ ರೆಕ್ಕೆ ನೇರವಾಗಿ ನೆಲಕ್ಕೆ ಬಡಿದಿದೆ. ಆಘಾತದ ತೀವ್ರತೆಯಿಂದ ರೆಕ್ಕೆಯೊಳಗಿನ ಇಂಧನ ಟ್ಯಾಂಕ್ಗೆ ಹಾನಿಯಾಗಿದ್ದು, ತೈಲ ಸೋರಿಕೆ ಆರಂಭವಾಗಿದೆ. ಇಂಧನ ಅತ್ಯಂತ ದಹನಶೀಲವಾಗಿರುವುದರಿಂದ, ರಭಸದಿಂದ ಉಂಟಾದ ಸ್ಪಾರ್ಕ್ ಅಥವಾ ಉಷ್ಣತೆಯೇ ಬೆಂಕಿ ಹೊತ್ತಿಕೊಳ್ಳಲು ಸಾಕಾಗಿದೆ.
ತೈಲ ಸೋರಿಕೆಯಾದ ಕ್ಷಣದಲ್ಲಿಯೇ ಬೆಂಕಿ ರೆಕ್ಕೆಯಿಂದ ವಿಮಾನದ ದೇಹದತ್ತ ಹರಡಿದ್ದು, ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ವಿಮಾನವೇ ಬೆಂಕಿಯ ಉಂಡೆಯಾಗಿ ಉರಿಯ ತೊಡಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ, ವಿಮಾನದ ಒಳಗಿದ್ದವರಿಗೆ ಪಾರಾಗಲು ಯಾವುದೇ ಅವಕಾಶವಿಲ್ಲದ ಪರಿಣಾಮ ವಿಮಾನದಲ್ಲಿದ್ದ ಎಲ್ಲರೂ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ.





