15 ವರ್ಷದ ದಲಿತ ವಿದ್ಯಾರ್ಥಿಯ ವಿರುದ್ಧ ಶಾಲೆಯ ಮಾಲೀಕರೊಬ್ಬರು ‘ಶಿಕ್ಷಣಕ್ಕೆ ಅರ್ಹನಲ್ಲ’ ಎಂದು ಜಾತಿ ನಿಂದನೆ ಮಾಡಿದ ಘಟನೆ ಗುಜರಾತ್ನ ಮೋರ್ಬಿ ಜಿಲ್ಲೆಯಲ್ಲಿ ನಡೆದಿದೆ. ವಂಕನೇರ್ನ ಗ್ಯಾನ್ ಗಂಗಾ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಮೇಲೆ ಶಾಲಾ ಮಾಲೀಕ ಯೋಗೇಂದ್ರಸಿಂಹ ಝಲಾ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕಿಯರ ಶಾಲೆಯ ಬಳಿ ಬಾಲಕ ತಿಂಡಿ ಸೇವಿಸುತ್ತಿದ್ದಾಗ ಶಾಲೆಯ ಮಾಲೀಕ ಝಲಾ ಬಾಲಕನ ಬಳಿ ಬಂದು ಜಾತಿ ಆಧಾರಿತ ನಿಂದನೆಗಳನ್ನು ಮಾಡಿದ್ದು ಮಾತ್ರವಲ್ಲದೆ “ನೀನು ಶಿಕ್ಷಣಕ್ಕೆ ಅರ್ಹನಲ್ಲ” ಎಂದು ಹೇಳಿ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವಿದ್ಯಾರ್ಥಿಯ ಎರಡೂ ಕೈ ಕತ್ತರಿಸಿ ವಿಕೃತಿ ಮೆರೆದ ಸವರ್ಣೀಯರು
40 ವರ್ಷದ ನೈರ್ಮಲ್ಯ ಕಾರ್ಮಿಕನಾಗಿರುವ ಬಾಲಕನ ತಂದೆಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿ ಸಿದ್ಧಾರ್ಥ್ ವಘೇಲಾ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ನಂತರ ಬಾಲಕನನ್ನು ವಂಕನೇರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲ್ಲೆಯಿಂದಾಗಿ ಪ್ರಜ್ಞೆ ಕಳೆದುಕೊಂಡ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ವಂಕನೇರ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 115(2), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯನ್ನು ಮೊರ್ಬಿ ಎಸ್ಸಿ-ಎಸ್ಟಿ ಸೆಲ್ನ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಲಾಗಿದೆ. ಅಧಿಕಾರಿಗಳು ಪ್ರಸ್ತುತ ಝಲಾ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.





