ಶಾಲೆಯಲ್ಲಿ ಬಿಸಿಯೂಟ ಕಾರ್ಮಿಕಳಾಗಿ ನೇಮಕಗೊಂಡಿದ್ದ ದಲಿತ ಮಹಿಳೆಗೆ ಅಡುಗೆ ತಯಾರಿಸದಂತೆ ಅಡ್ಡಿಪಡಿಸಿದ್ದ ಪ್ರಕರಣದಲ್ಲಿ ಆರು ಮಂದಿ ಅಪರಾಧಿಗಳಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ತಮಿಳುನಾಡಿನ ತಿರುಪ್ಪೂರ್ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.
2018ರಲ್ಲಿ ತಮಿಳುನಾಡಿನ ತಿರುಪ್ಪೂರ್ ಪ್ರದೇಶದ ತಿರುಮಲೈಗೌಂಡಂಪಾಳ್ಯಂ ಸರ್ಕಾರಿ ಶಾಲೆಯಲ್ಲಿ ಪ್ರಕರಣ ನಡೆದಿತ್ತು. ಆ ಸಮಯದಲ್ಲಿ, ಗ್ರಾಮದ ಪ್ರಬಲ ಸಮುದಾಯಕ್ಕೆ ಸೇರಿದ ಪಿ.ಪಳನಿಸ್ವಾಮಿ ಗೌಂಡರ್, ಎನ್.ಶಕ್ತಿವೇಲ್, ಆರ್.ಷಣ್ಮುಗಂ, ಸಿ.ವೆಲ್ಲಿಂಗಿರಿ, ಎ.ದುರೈಸ್ವಾಮಿ ಹಾಗೂ ವಿ.ಸೀತಾಲಕ್ಷ್ಮಿ ಮತ್ತು ಇತರರು ದಲಿತ ಮಹಿಳೆ ಶಾಲೆಯಲ್ಲಿ ಅಡುಗೆ ಮಾಡದಂತೆ ದಾಂಧಲೆ ನಡೆಸಿ, ಅಡ್ಡಿ ಮಾಡಿದ್ದರು.
ಈ ಆರು ಮಂದಿ ಸೇರಿದಂತೆ 35 ಮಂದಿ ವಿರುದ್ಧ ಜಾತಿ ತಾರತಮ್ಯ ಆರೋಪದ ಮೇಲೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಸರ್ಕಾರಿ ಶಾಲೆಯಲ್ಲಿ ಸೇವೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ಗಳನ್ನೂ ಸೇರಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಸುರೇಶ್, ಈ ಆರು ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದಾರೆ. ಆರು ಮಂದಿಗೂ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಿದ್ದಾರೆ.
ಅಲ್ಲದೆ, ಸಾಕ್ಷ್ಯಾಧಾರದ ಕೊರತೆಯಿಂದ 25 ಮಂದಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳು ವಿಚಾರಣಾ ಅವಧಿಯ ನಡುವೆಯೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ.




