ಸ್ಮಶಾನಕ್ಕೆ ದಾರಿ ಬಿಡದೆ ಅಡಚಣೆ ಮಾಡಿದ ಕಾರಣದಿಂದಾಗಿ 91 ವರ್ಷದ ವೃದ್ಧ ದಲಿತ ಮಹಿಳೆಯ ಶವಸಂಸ್ಕಾರವನ್ನು ನಡುರಸ್ತೆಯಲ್ಲೇ ನಡೆಸಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಸ್ಥಳೀಯ ಪ್ರಭಾವಿಗಳು, ವ್ಯಾಪಾರಿಗಳು ಈ ದಾರಿಯನ್ನು ಅತಿಕ್ರಮಿಸಿಕೊಂಡಿದ್ದು ಸ್ಮಶಾನಗೆ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ಹೇಳಲಾಗಿದೆ. ಸದ್ಯ ಈ ಘಟನೆಯ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ತನಿಖಾ ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಸ್ಥರು ಮತ್ತು ಪೊಲೀಸರ ಪ್ರಕಾರ, ಗುರುವಾರ ಗೊರೌಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಧೋ-ವಾಶುಡೆಯೊ ಗ್ರಾಮದ ನಿವಾಸಿ ಝಪ್ಸಿ ದೇವಿಯ ಅಂತ್ಯಕ್ರಿಯೆ ಮಾಡಲು ಗ್ರಾಮಸ್ಥರು ಸ್ಮಶಾನಕ್ಕೆ ತೆರಳುತ್ತಿದ್ದಾಗ ಕೆಲವು ಪ್ರಭಾವಿ ಗ್ರಾಮಸ್ಥರು ಅವರನ್ನು ತಡೆದಿದ್ದಾರೆ. ಎಷ್ಟು ಮನವಿ ಮಾಡಿದರೂ ಮುಂದೆ ಸಾಗಲು ಅವಕಾಶ ನೀಡಿಲ್ಲ. ಇದರಿಂದಾಗಿ ಕೋಪಗೊಂಡ ಗ್ರಾಮಸ್ಥರು ಶವವನ್ನು ರಸ್ತೆಯ ಮಧ್ಯಕ್ಕೆ ಹೊತ್ತುಕೊಂಡು ಹೋಗಿ ಅಲ್ಲಿಯೇ ಶವಸಂಸ್ಕಾರವನ್ನು ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ರಸ್ತೆ ನಡುವೆಯೇ ‘ಕೈ ಪಂಪ್’; ಮತ್ತೆ ರಸ್ತೆ ವಿವಾದಕ್ಕೆ ಗುರಿಯಾದ ಮಧ್ಯಪ್ರದೇಶ
ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ರಸ್ತೆ ತೆರವುಗೊಳಿಸಿದ್ದಾರೆ. ಆದರೆ ಗ್ರಾಮದಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಸದ್ಯ ಈ ಪ್ರಭಾವಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಷಯದ ಗಂಭೀರತೆಯನ್ನು ಗಮನಿಸಿದ ವೈಶಾಲಿ ಜಿಲ್ಲಾಡಳಿತ ಶುಕ್ರವಾರ ಮಧ್ಯಪ್ರವೇಶಿಸಿದ್ದಾರೆ. ಕರ್ತವ್ಯಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಸ್ಥಳೀಯ ಬಿಡಿಒ (BDO) ಮತ್ತು ಇತರ ಅಧಿಕಾರಿಗಳ ವೇತನವನ್ನು ತಡೆಹಿಡಿಯಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ವರ್ಷಾ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಕ್ರಮ್ ಸಿಹಾಗ್ ನೇತೃತ್ವದ ತಂಡವು ಗ್ರಾಮಕ್ಕೆ ಭೇಟಿ ನೀಡಿದೆ.
“ನಾವು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಬಗ್ಗೆ ವಿಚಾರಿಸಿದೆವು. ಸ್ಮಶಾನಕ್ಕೆ ಹೋಗುವ ಮಾರ್ಗದಲ್ಲಿ ಅಂಗಡಿಗಳು ಮತ್ತು ದೇವಾಲಯವನ್ನು ನಿರ್ಮಿಸಲಾಗಿರುವುದು ಕಂಡುಬಂದಿದೆ. ಸ್ಮಶಾನ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲೇ ಕಟ್ಟಡಗಳು ಇರುವುದರಿಂದ ಇದೀಗ ಕಟ್ಟಡವನ್ನೇ ಕೆಡವಬೇಕಾಗಿದೆ. ಎಂಟರಿಂದ 10 ವರ್ಷಗಳ ಹಿಂದೆ ಅತಿಕ್ರಮಣ ನಡೆದಿತ್ತು. ಈ ಬಗ್ಗೆ ತನಿಖೆಗೆ ಉಪ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಅಕ್ರಮದ ರೂವಾರಿ ಮೋದಿ ಅವರನ್ನು ಬಂಧಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ
ಇನ್ನು ಮಹಿಳೆಯ ಮಗ ಸಂಜೀತ್ ಮಾಂಝಿ, “ನಡುರಸ್ತೆಯಲ್ಲಿ ಅಂತ್ಯಕ್ರಿಯೆ ಮಾಡುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬ ಗ್ರಾಮಸ್ಥರಾದ 67 ವರ್ಷದ ಮೇವಾಲಾಲ್ ಮಾಂಝಿ “ನಾವು ಬಡವರು, ಮನೆ ಇಲ್ಲ, ಭೂಮಿ ಇಲ್ಲ. ಈಗ ಶವಗಳನ್ನು ದಹನ ಮಾಡಲು ಸಹ ನಮಗೆ ಅವಕಾಶವಿಲ್ಲ. ನಾವೇನು ಮಾಡುವುದು? ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇನ್ನು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಈ ಘಟನೆಯನ್ನು ದುರಂತ ಎಂದು ಕರೆದಿದೆ. ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. “ಅತ್ಯಂತ ದುರಂತ ಘಟನೆಯಿದು. ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಪಕ್ಷದ ಮುಖ್ಯ ವಕ್ತಾರ ರಾಜೇಶ್ ಭಟ್ ಹೇಳಿದ್ದಾರೆ.
ಕರ್ನಾಟಕದಲ್ಲಿ ನಡೆದಿತ್ತು ಈ ರೀತಿಯ ಘಟನೆ
2024ರ ಮೇ ತಿಂಗಳಲ್ಲಿ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯನ್ನು ಬೇರೆಯವರು ಅತಿಕ್ರಮಿಸಿಕೊಂಡಿದ್ದರಿಂದ 60 ವರ್ಷದ ದಲಿತ ಮಹಿಳೆಯೊಬ್ಬರ ಶವವನ್ನು ರಸ್ತೆಯಲ್ಲೇ ಸಂಸ್ಕಾರ ಮಾಡಲಾಗಿತ್ತು. 2023ರ ಡಿಸೆಂಬರ್ನಲ್ಲಿ ತುಮಕೂರು ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ಸ್ಮಶಾನದ ಕೊರತೆಯಿಂದಾಗಿ, ದಾರಿಯ ಸಮಸ್ಯೆಯಿಂದಾಗಿ ದಲಿತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ರಸ್ತೆ ಪಕ್ಕದಲ್ಲೇ ನಡೆಸಲಾಗಿತ್ತು. ಈ ಎಲ್ಲಾ ಘಟನೆಗಳಲ್ಲಿ ಪ್ರಮುಖವಾಗಿ ದಲಿತರೇ ಸಂತ್ರಸ್ತರಾಗಿರುವುದು ನಾವು ಕಾಣಬಹುದು. ಹೆಚ್ಚಾಗಿ ಇಂತಹ ಘಟನೆಗಳು ಸ್ಮಶಾನಕ್ಕೆ ಹೋಗುವ ದಾರಿಯ ಅತಿಕ್ರಮಣ ಅಥವಾ ಸಾರ್ವಜನಿಕ ಸ್ಮಶಾನಗಳಲ್ಲಿ ಜಾತಿ ತಾರತಮ್ಯದ ಕಾರಣದಿಂದ ನಡೆಯುತ್ತಿದೆ.





