ಸಂಯುಕ್ತ ಕಿಸಾನ್ ಮೋರ್ಚಾ (SKM) ರಾಷ್ಟ್ರೀಯ ನಾಯಕ ಮತ್ತು ನಮ್ಮ ಸಂಘಟನೆಯ ಅಧ್ಯಕ್ಷ ಸತ್ಯವಾನ್ ಮತ್ತು ಎಐಕೆಕೆಎಂಎಸ್ ನ ಒಡಿಶಾ ರಾಜ್ಯ ಅಧ್ಯಕ್ಷ ಸದಾಶಿವ್ ದಾಸ್ ಮತ್ತು ಇತರ ಮುಖಂಡರುಗಳನ್ನು ಜಿಂದಾಲ್-ಪೋಸ್ಕೊ ಕಂಪನಿಯ ಗೂಂಡಾಗಳು ಅಪಹರಿಸಿ ಹಿಂಸಿಸಿದ್ದು, ತರುವಾಯ ಒಡಿಶಾದ ಕಿಯೋಂಝಾರ್ ಜಿಲ್ಲೆಯ ತುರುಮುಂಗಾ ಪೊಲೀಸ್ ಠಾಣೆಯಲ್ಲಿ ಬಂಧಿಸಿರುವ ಕ್ರಮವನ್ನು ಖಂಡಿಸಿ ಎಐಕೆಕೆಎಂಎಸ್ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಮಾಯಕೊಂಡ ಗ್ರಾಮದಲ್ಲಿ ಅಖಿಲ ಭಾರತ ಪ್ರತಿರೋಧ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಕೆಕೆಎಂಎಸ್ (AIKKMS) ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಟಿ ಎ ಸುನಿಲ್ ಕುಮಾರ್ ಮಾತನಾಡಿ, “ಒಡಿಶಾದ ಕಿಯೋಂಝಾರ್ ಜಿಲ್ಲೆಯ ಜಮುನಾಪೋಸಿ ಗ್ರಾಮದಲ್ಲಿ ಜಿಂದಾಲ್ ಪೋಸ್ಕೊ ವಿರೋಧಿ ಮಂಚ್ ಆಯೋಜಿಸಿದ್ದ ಸಭೆಯಿಂದ ಹಿಂತಿರುಗುತ್ತಿದ್ದಾಗ ಕಂಪನಿಯ ಗೂಂಡಾಗಳು ಅಪಹರಿಸಿದ ಘಟನೆ ಸಂಭವಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜಿಂದಾಲ್ ಮತ್ತು ಪೋಸ್ಕೊದಂತಹ ಬಹುರಾಷ್ಟ್ರೀಯ ಕಂಪನಿಗಳು ಬಡ ರೈತರಿಂದ ಕೃಷಿ ಭೂಮಿಯನ್ನು ಕಸಿದುಕೊಳ್ಳಲು ಸಹಾಯ ಮಾಡಲು ಸ್ಥಳೀಯ ಪೊಲೀಸ್ ಆಡಳಿತವು ಈ ಹೇಯ ಕೃತ್ಯವನ್ನು ನಡೆಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಆಡಳಿತ ಗುಂಪಿನ ಈ ಜನವಿರೋಧಿ, ರೈತವಿರೋಧಿ ನಡೆಯನ್ನು ಎಐಕೆಕೆಎಂಎಸ್ ಬಲವಾಗಿ ಖಂಡಿಸುತ್ತದೆ. ಮತ್ತು ಸತ್ಯವಾನ್ ಮತ್ತು ಸಂಘಟನೆಯ ಇತರ ನಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು” ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಎಸ್ಐಆರ್ ಎಂದರೆ ಎನ್ಆರ್ಸಿ, ಮತದಾನ ಹಕ್ಕುಗಳ ಪೌರತ್ವ ನಿರಾಕರಣೆ: ಚಿಂತಕ ಶಿವಸುಂದರ್
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷರಾದ ಮಧು ತೊಗಲೇರಿ, ಜಿಲ್ಲಾ ಉಪಾಧ್ಯಕ್ಷರಾದ ಭೀಮಣ್ಣ, ಮಾಯಕೊಂಡ ರಾಜು, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಮುಖಂಡರಾದ ಅಶೋಕ್ ಗೌಡ, ಪ್ರತಾಪ್ ಜೋಗಿ, ಭೀಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.





