“ಕೇಂದ್ರ ಸರ್ಕಾರ ಜನವಿರೋಧಿಯಾಗಿದ್ದು ಬಂಡವಾಳಶಾಹಿಗಳ ಪರ ನಿಂತಿದ್ದು ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಿ ಮಾರಾಟ ಮಾಡುತ್ತಿದ್ದಾರೆ. ಇದರ ಅಂಗವಾಗಿ ರೈಲ್ವೆಯನ್ನು ಕೂಡ ದರ ಏರಿಕೆಯ ಮೂಲಕ ಖಾಸಗಿಯವರಿಗೆ ಕೊಡಲು ಹೊರಟಿದ್ದಾರೆ” ಎಂದು ದಾವಣಗೆರೆಯ ಎಸ್ ಯುಸಿಐ, ಕಮ್ಯುನಿಸ್ಟ್ ಪಕ್ಷದ ಮುಖಂಡ ಮಂಜುನಾಥ್ ಕೈದಾಳೆ ಆರೋಪಿಸಿದರು.

ಕೇಂದ್ರ ಸರ್ಕಾರದ ರೈಲ್ವೆ ಪ್ರಯಾಣದ ದರವನ್ನು ಏರಿಸಿರುವ ನಿರ್ಣಯವನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ವತಿಯಿಂದ ದಾವಣಗೆರೆಯ ರೈಲ್ವೆ ನಿಲ್ದಾಣದ ಮುಂಭಾಗದಿಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು
“ನಾವು ಸರ್ಕಾರವನ್ನು ಖಾಸಗೀಕರಣವನ್ನು 1947ರ ಸ್ವಾತಂತ್ರ್ಯದ ಸಮಯದಲ್ಲಿಯೇ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸುತ್ತೇವೆ. ಅಂದೇ ಅಂಬಾನಿ, ಅದಾನಿ, ಬಜಾಜ್, ಟಾಟಾ, ಗೋಯಂಕ ಇತರರಿಗೆ ರೈಲ್ವೆ ಸೇರಿ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ಹೇಳಬಹುದಿತ್ತು. ಇಂಟರ್ನೆಟ್, ಮೊಬೈಲ್, ರಸ್ತೆ, ಸಾರಿಗೆ ರೈಲ್ವೆ ಸೇರಿ ಮೂಲಭೂತ ಸೌಕರ್ಯಗಳನ್ನು ಕೊಡಿ ಎಂದು ನೀವು ಯಾಕೆ ಹೇಳಲಿಲ್ಲ?” ಎಂದು ಪ್ರಶ್ನಿಸಿದರು.
“ಅಂದು ಇವರ ಹತ್ತಿರ ಲಕ್ಷಾಂತರ ಕೋಟಿ ಇರಲಿಲ್ಲ, ಇಂದು ಕಾಂಗ್ರೆಸ್, ಬಿಜೆಪಿ, ಜನತಾದಳ ಸೇರಿದಂತೆ ಎಲ್ಲಾ ಪಕ್ಷದ ಸರ್ಕಾರದ ಯೋಜನೆಗಳ ದುರ್ಬಳಕೆಯಿಂದ ಲಕ್ಷಾಂತರ ಕೋಟಿ ಗಳಿಸಿ ಇಂದು ಸಾರ್ವಜನಿಕ ವಲಯಗಳನ್ನು ಕಬಳಿಸಲು ಹೊರಟಿದ್ದಾರೆ” ಎಂದು ಆರೋಪಿಸಿದರು.
“ಇಂದು ಅದನ್ನು ಮತ್ತಷ್ಟು ದುರ್ಬಳಕೆ ಮಾಡಿಕೊಂಡು ಹಣ ಗಳಿಸುವ ಸಲುವಾಗಿ ರೈಲ್ವೆ, ರಸ್ತೆ, ಸಾರಿಗೆ, ವಿಮಾನ, ಕೈಗಾರಿಕೆಗಳು ಎಲ್ಲಾ ಸೇರಿದಂತೆ ರೈತರನ್ನು, ಕಾರ್ಮಿಕರು, ಜನಸಾಮಾನ್ಯರನ್ನು ಶೋಷಿಸಲು ಹೊರಟಿದ್ದಾರೆ” ಎಂದು ಆರೋಪಿಸಿದರು.
“ಸಾರ್ವಜನಿಕ ಉದ್ದಿಮೆಗಳೆಂದರೆ ಲಾಭವಿಲ್ಲ, ನಷ್ಟವೂ ಇಲ್ಲಾ ಎನ್ನುವಂತಹ ಆಧಾರದ ಮೇಲೆ ಅಂದು ಸಾರ್ವಜನಿಕ ವಲಯದ ಉದ್ಯಮಗಳನ್ನು ಸರ್ಕಾರ ಪ್ರಾರಂಭಿಸಿದೆ. ಇದು ಜನಸಾಮಾನ್ಯರ ಸೇವೆಗಷ್ಟೇ ಮೀಸಲು, ಇದರಲ್ಲಿ ಲಾಭಗಳಿಸುವ ಉದ್ದೇಶವಿರಲಿಲ್ಲ. ಆದರೆ ಇಂದು ಕೇವಲ ಲಾಭ ಗಳಿಸುವ ಉದ್ದೇಶದಿಂದ ವ್ಯವಹಾರಗಳನ್ನಾಗಿ ರೂಪಿಸಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಇದು ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಇದನ್ನು ನಾವು ಜನಸಾಮಾನ್ಯರು ಪ್ರಶ್ನಿಸಿ, ಖಂಡಿಸಬೇಕಿದೆ, ಹೋರಾಟ ನಡೆಸಬೇಕಿದೆ” ಎಂದು ಆಗ್ರಹಿಸಿದರು.
“ಇಂದು ರೈಲ್ವೆ ದರ ಏರಿಕೆ ಮಾಡಿದ್ದೀರಿ. ಸಾರ್ವಜನಿಕರ ಹಣದಿಂದ ಕಟ್ಟಿರುವಂತಹ ರೈಲ್ವೆ ಇಲಾಖೆಯನ್ನು ನೀವು ಖಾಸಗಿಯವರಿಗೆ ಹಂತ ಹಂತವಾಗಿ ಮಾರಾಟ ಮಾಡಲು ಖಾಸಗೀಕರಣಗೊಳಿಸಲು ಹೊರಟಿದ್ದೀರಿ. ಖಾಸಗೀಕರಣಗೊಳಿಸುವ ಮೊದಲು ಜನಸಾಮಾನ್ಯರನ್ನು ನೀವು ಕೇಳಬೇಕಲ್ಲವೇ. ಜನಸಾಮಾನ್ಯರೊಂದಿಗೆ ಚರ್ಚಿಸದೇ ಖಾಸಗೀಕರಣ ಮಾಡಲು ಏಕೆ ಹೊರಟಿದ್ದೀರಿ? ಎಂದು ಪ್ರಶ್ನಿಸಿದರು.

“ಚುನಾವಣೆಗೆ ಮುಂಚೆ ನೀವು ನಿಮ್ಮ ಭರವಸೆಗಳಲ್ಲಿ ಉದ್ದಿಮೆಗಳನ್ನು ನಾನು ಖಾಸಗೀಕರಣ ಮಾಡುತ್ತೇನೆ ಎಂದು ತಿಳಿಸಬೇಕಿತ್ತಲ್ಲವೇ? ಹಾಗೆ ಏಕೆ ಮಾಡಲಿಲ್ಲ. ಖಾಸಗೀಕರಣ ಮಾಡುತ್ತೇವೆ ಎಂದು ಹೊರಟಿದ್ದರೆ ಈ ದೇಶದ ಮತದಾರರು ನಿಮ್ಮನ್ನು ಅಧಿಕಾರದಿಂದ ದೂರ ಇಡುತ್ತಿದ್ದರು” ಎಂದು ವ್ಯಂಗ್ಯವಾಡಿದರು.
ಎಐಕೆಕೆಎಂಎಸ್ ಮುಖಂಡ ಮಂಜುನಾಥ್ ಕುಕ್ಕುವಾಡ ಮಾತನಾಡಿ “ಕೇಂದ್ರ ಸರ್ಕಾರ ರೈಲ್ವೆ ಸೇರಿದಂತೆ ಇಲಾಖೆಗಳನ್ನು ಖಾಸಗೀಕರಣ ಮಾಡಿ ಬೆಲೆ ಏರಿಕೆ ಮಾಡುತ್ತಾ ಖಾಸಗೀಕರಣ ಮಾಡಲು ಹೊರಟಿದೆ. ಇದರ ವಿರುದ್ಧ ನಾಗರಿಕರು ಸಂಘಟನೆಗಳು ಎಚ್ಚೆತ್ತುಕೊಂಡು ಪ್ರತಿಭಟಿಸಬೇಕು. ಇಲ್ಲವಾದಲ್ಲಿ ಬೆಲೆ ಏರಿಕೆ, ಶೋಷಣೆಗಳಿಂದ ಜನಸಾಮಾನ್ಯರು, ಕಾರ್ಮಿಕರು, ರೈತರು ಪರಿತಪಿಸಬೇಕಾಗುತ್ತದೆ. ಕೂಡಲೇ ಎಚ್ಚೆತ್ತುಕೊಂಡು ಬೆಲೆ ಏರಿಕೆ ಮತ್ತು ಖಾಸಗಿಕರಣ, ಬಂಡವಾಳಶಾಹಿ ನಿಲುವುಗಳನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ರಾಷ್ಟ್ರಾದ್ಯಂತ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದಿಂದ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಗರವನ್ನು ವಿದ್ಯಾಕಾಶಿ ಮಾಡಿದ ಜಾತ್ಯತೀತ ನಾಯಕ ಶಾಮನೂರು ಶಿವಶಂಕರಪ್ಪ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ (SUCI) ಪಕ್ಷದ ರಾಜ್ಯ ಸೇಕ್ರೆಟ್ರಿಯೇಟ್ ಸದಸ್ಯರು ಡಾ ಟಿ ಎಸ್ ಸುನಿತ್ ಕುಮಾರ್, ಟಿ ವಿ ಎಸ್ ರಾಜು, ತಿಪ್ಪೇಸ್ವಾಮಿ, ಮಧು ತೊಗಲೇರಿ, ಭಾರತಿ, ಪರಶುರಾಮ್, ಅನಿಲ್, ಶಿವಾಜಿ ರಾವ್, ನಾಗಸ್ಮಿತಾ, ಹಿರೇಮರ್, ರಾಘವೇಂದ್ರ, ರಾಜು ಟಿ, ಕವಿತ, ಬೀರಲಿಂಗಪ್ಪ, ಯತೀಶ್, ಉಪಸ್ಥಿತರಿದ್ದರು





