ಕೇಂದ್ರೀಯ ಟ್ರೇಡ್ ಯೂನಿಯನ್ ಗಳು, ಸ್ವತಂತ್ರ ಕೈಗಾರಿಕಾ ಫೆಡರೇಶನ್ ಗಳು ಮತ್ತು ದೇಶದ ಲಕ್ಷಾಂತರ ಕಾರ್ಮಿಕರ ವ್ಯಾಪಕ ವಿರೋಧ ಇದ್ದರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ದಾವಣಗೆರೆ ಜಿಲ್ಲೆ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಪ್ರತಿನಿಧಿಗಳು ಬುಧವಾರ ದಾವಣಗೆರೆ ನಗರದಲ್ಲಿ ಪ್ರತಿಭಟನೆ ನಡೆಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಮುಂಬಾಗ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿ ನಂತರ ಕೇಂದ್ರ ಕಾರ್ಮಿಕ ಸಚಿವರಿಗೆ ಉಪವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ಈ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ಆನಂದ್ ರಾಜು “ಕೇಂದ್ರದಲ್ಲಿರುವ ಮೋದಿ ಸರ್ಕಾರವು 21 ನವೆಂಬರ್ 2025 ರಿಂದ ಏಕಪಕ್ಷೀಯವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನ ಜಾರಿಗೆ ತಂದಿದೆ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಸುಟ್ಟುಹಾಕುವ ಮೂಲಕ ದೇಶವ್ಯಾಪಿ ಪ್ರತಿಭಟನೆ ಮಾಡಿದ್ದರೂ, ಚುನಾವಣಾ ಬಾಂಡ್ ಹೆಸರಲ್ಲಿ ಸಾವಿರಾರು ಕೋಟಿ ಹಣ ಪಡೆದ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಋಣ ತೀರಿಸುವ ಸಲುವಾಗಿ ಇದುವರೆಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯದೇ ಇರುವುದರಿಂದ ಎಫ್.ಎಂ.ಆರ್.ಎ.ಐ. ತನ್ನ ಹೋರಾಟವನ್ನು ದೇಶವ್ಯಾಪಿ ತೀವ್ರಗೊಳಿಸಿದೆ” ಎಂದರು..
“ಕಾರ್ಮಿಕ ಕಾನೂನುಗಳನ್ನು ಬಲಪಡಿಸುವ ಬದಲು ದುರ್ಬಲಗೊಳಿಸಲು, ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕುಗ್ಗಿಸಲು ಮತ್ತು ಮಾಲೀಕರ ಪಾಲಿಗೆ ಭಾರೀ ಅನುಕೂಲವಾಗುವಂತೆ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಉದ್ದೇಶಪೂರ್ವಕ ಜಾರಿಗೆ ತರುವ ಪ್ರಯತ್ನವನ್ನು ಕೇಂದ್ರ ಸರಕಾರವು ಮಾಡಿದೆ. ರಾಜ್ಯದಲ್ಲಿ ಇಂತಹ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೆ ತರುವುದಿಲ್ಲ ಎನ್ನುವ ಅಭಯವನ್ನು ಕಾರ್ಮಿಕರಿಗೆ ನೀಡದಿರುವುದನ್ನು ನೋಡಿದರೆ ರಾಜ್ಯ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಎನ್ನುವುದು ಸಾಬೀತಾದಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಈ ನಾಲ್ಕೂ ಸಂಹಿತೆಗಳನ್ನ ಕೇಂದ್ರ ಸರ್ಕಾರವು ತಕ್ಷಣ ವಾಪಾಸು ಪಡೆಯಬೇಕು ಮತ್ತು ರಾಜ್ಯ ಸರ್ಕಾರವು ತಕ್ಷಣ ಎಚ್ಚೆತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ” ಎಂದು ಕಾರ್ಮಿಕರಿಗೆ ಅಭಯ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾದಲ್ಲಿ ಗಾಂಧಿ ಹೆಸರು ಕೈಬಿಡಲು ನಿಮಗೆ ಯೋಗ್ಯತೆ ಇದೆಯೇ? ಸಾತಿ ಸುಂದರೇಶ್
ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ರಾಜ್ಯ ಅಧ್ಯಕ್ಷರಾದ ಆನಂದರಾಜು ಕೆ.ಹೆಚ್., ರಾಜ್ಯ ಕಾರ್ಯದರ್ಶಿ ವೆಂಕಟೇಶ್ ಎಂ., ಘಟಕದ ಕಾರ್ಯದರ್ಶಿ ಶ್ರೀಧರ ಟಿ, ರಹಮತ್, ಪ್ರವೀಣ್, ಪ್ರಶಾಂತ್, ಶಶಿಧರ, ಅರುಣ್, ಗುರುರಾಜ್, ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.





