ಪ್ರತಿ ವರ್ಷ ನವಂಬರ್ ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರ್ಕಾರದಿಂದ ಘೋಷಿಸುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ವಿಜ್ಞಾನ ತಂತ್ರಜ್ಞಾನ ವಿಭಾಗದಲ್ಲಿ ದಾವಣಗೆರೆ ಮೂಲದ “ಏರ್ ಮಾರ್ಷಲ್ ಫಿಲಿಪ್ಸ್ ರಾಜಕುಮಾರ್” ಅವರ ಸುದೀರ್ಘ ಸಮಯದ ದೇಶಸೇವೆ ಮತ್ತು ವಾಯು ಸೇವೆಯ ಕರ್ತವ್ಯವನ್ನು ಗೌರವಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಮೂಲತಃ ದಾವಣಗೆರೆಯಲ್ಲಿ ಹುಟ್ಟಿದ ಪಿ ರಾಜಕುಮಾರ ಎಂದು ಹೆಸರಾದ ಫಿಲಿಪ್ಸ್ ರಾಜಕುಮಾರ್ ತಮ್ಮ ವ್ಯಾಸಂಗವನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಪೂರೈಸಿದ್ದರು.

ನವೆಂಬರ್ 10, 1962ರಲ್ಲಿ ಭಾರತೀಯ ವಾಯುಸೇನೆಗೆ ಕರ್ತವ್ಯಕ್ಕೆ ಸೇರಿದ, ಪಿ ರಾಜಕುಮಾರ್ ಫ್ಲೈಯಿಂಗ್ ಆಫೀಸರ್ ಆಗಿ 1963 ರಲ್ಲಿ ನಿಯುಕ್ತಿಗೊಂಡರು. 1967ರಲ್ಲಿ ಫ್ಲೈಟ್ ಲೆಫ್ಟಿನೆಂಟ್, 1985ರಲ್ಲಿ ಗ್ರೂಪ್ ಕ್ಯಾಪ್ಟನ್, 1989ರಲ್ಲಿ ಏರ್ ಕಮಾಂಡರ್, 1994ರಲ್ಲಿ ಏರ್ ವೈಸ್ ಮಾರ್ಷಲ್ ಆಗಿ ಪದೋನ್ನತಿ ಪಡೆದು, 1996ರಲ್ಲಿ ವಾಯುಸೇನೆಯ ಅತ್ಯುನ್ನತ ಸ್ಥಾನವಾದ ಏರ್ ಮಾರ್ಷಲ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
1965 ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ ಇವರು ಪಾಕಿಸ್ತಾನದ ಸೇನಾ ವಾಯುನೆಲೆ ಸರ್ಗೋದಾ ಮೇಲೆ ಯಶಸ್ವಿ ದಾಳಿ ನಡೆಸಿದ್ದರು. ಪಾಕಿಸ್ತಾನದ ಸರ್ಗೋಧ ವಾಯುನೆಲೆಯ ಮೇಲೆ ವಿಶ್ವದ ಮೊದಲ ಹಗಲು ಹೊತ್ತಿನ ವಾಯುದಾಳಿಯಲ್ಲಿ ಭಾಗವಹಿಸಿದ ಭಾರತೀಯ ವಾಯುಪಡೆಯ (IAF) ಯುವ ಪೈಲಟ್ ಆಗಿ ಫಿಲಿಪ್ ರಾಜಕುಮಾರ ಕರ್ತವ್ಯ ನಿರ್ವಹಿಸಿದ್ದರು.
ಭಾರತೀಯ ಯುದ್ಧ ವಿಮಾನ ತೇಜಸ್ ಸೇರಿದಂತೆ 55 ವಿವಿಧ ಏರ್ ಕ್ರಾಫ್ಟ್ ಗಳನ್ನು ಚಾಲನೆ ಮಾಡಿದ ಅನುಭವವಿರುವ ಏ.ಮಾ. ಪಿ ರಾಜಕುಮಾರ್ ಒಟ್ಟಾರೆ 5200 ಗಂಟೆ ಹಾರಾಟದ ಅನುಭವವನ್ನು ಪಡೆದಿದ್ದಾರೆ.
ಫ್ರಾನ್ಸ್ ನಲ್ಲಿ ಪ್ರಾಯೋಗಿಕ ಪರೀಕ್ಷಾ ಪೈಲೆಟ್ ಆಗಿ ತರಬೇತಿ ಪಡೆದಿದ್ದ ಇವರು ವೆಲ್ಲಿಂಗ್ಟನ್ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ ಮತ್ತು ಲಂಡನ್ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್ನಲ್ಲಿ ಪದವಿ ಪಡೆದಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರರಾಗಿದ್ದ ವೇಳೆ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ADA) ಅಭಿವೃದ್ದಿ ಪಡಿಸುತ್ತಿದ್ದ ತೇಜಸ್ ಯುದ್ಧವಿಮಾನಕ್ಕೆ ಹಾರಾಟದ ಪರೀಕ್ಷೆ ನಡೆಸಲು ಆಹ್ವಾನಿಸಿದ್ದ ವೇಳೆ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು. ವೈಮಾನಿಕ ಅಭಿವೃದ್ಧಿ ಸಂಸ್ಥೆ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಇವರ ವಿಶಿಷ್ಟ ಸೇವೆಗಳಿಗಾಗಿ
ಭಾರತದ ರಾಷ್ಟ್ರಪತಿಗಳಿಂದ “ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ವಾಯು ಸೇವಾ ಪದಕ”ಗಳನ್ನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪುನೀತ್ ಸ್ಮರಣಾರ್ಥ ಆರ್ಯ ಈಡಿಗ ಸಂಘದಿಂದ ಪುಷ್ಪನಮನ ಹಾಗೂ ಉಪಹಾರ ವಿತರಣೆ
ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಇತ್ತೀಚೆಗೆ ಭಾರತ ಆಪರೇಷನ್ ಸಿಂಧೂರ ಹೆಸರಿನ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿದ ಅವರು 1965ರ ಪಾಕಿಸ್ತಾನ ಸರ್ದಾರ್ ವಾಯುನೆಲೆಯ ಮೇಲೆ ನಡೆಸಿದ ವಾಯು ದಾಳಿಯನ್ನು ನೆನಪಿಸಿಕೊಂಡು “ಸರ್ಗೋಧಾ ದಾಳಿಯು ಧೈರ್ಯ, ನಿಖರತೆ ಮತ್ತು ಸ್ಕ್ವಾಡ್ರನ್ನಲ್ಲಿ ನಂಬಿಕೆಯನ್ನು ಹೆಚ್ಚಿಸಿತ್ತು. ಆರು ದಶಕಗಳ ನಂತರವೂ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನೆನಪು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ,” ಎಂದು ಪ್ರತಿಕ್ರಿಯಿಸಿದ್ದರು.
ಇವರ ಸುಧೀರ್ಘ ಅವಧಿಯ ದೇಶಸೇವೆ ಮತ್ತು ವಾಯು ಸೇವೆಯ ಕರ್ತವ್ಯವನ್ನು ಗೌರವಿಸಿ ಕರ್ನಾಟಕ ಸರ್ಕಾರವು 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.





