ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಲಬೆರಕೆ ಹಾಲು ಸೇವನೆ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ರಾಜಮಹೇಂದ್ರವರಂನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾನುವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 22ರಂದು ಲಾಲಾಚೆರುವಿನ ಕೆಲವು ಭಾಗಗಳಲ್ಲಿ ಪೂರೈಸಲಾದ ಕಲಬೆರಕೆ ಹಾಲಿ ಸೇವನೆಯಿಂದಾಗಿ ಹಲವು ಮಂದಿಗೆ ವಾಂತಿ, ಹೊಟ್ಟೆ ನೋವು, ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಅನಾರೋಗ್ಯದಿಂದಾಗಿ ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈವರೆಗೆ 16 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಆಂಧ್ರದಲ್ಲಿ ಕಲುಷಿತ ಹಾಲು ಸೇವನೆ: ಮೃತರ ಸಂಖ್ಯೆ 13ಕ್ಕೆ ಏರಿಕೆ
ಪ್ರಯೋಗಾಲಯದ ಪರೀಕ್ಷೆಯಲ್ಲಿ ವಿಷಕಾರಿಯಾದ ಎಥಿಲೀನ್ ಗ್ಲೈಕೋಲ್ ಹಾಲಿನಲ್ಲಿ ಕಂಡು ಬಂದಿತ್ತು. ಮೂತ್ರಪಿಂಡ ಸಮಸ್ಯೆಯಾಗಿ ಬಹು-ಅಂಗಾಂಗ ವೈಫಲ್ಯವಾಗಿತ್ತು ಎಂದು ಭಾನುವಾರ ಬಿಡುಗಡೆ ಮಾಡಿದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಪ್ರಾಥಮಿಕ ತನಿಖೆಯಲ್ಲಿ ಮೃತರು ತೀವ್ರ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ರಕ್ತದಲ್ಲಿನ ಯೂರಿಯಾ ಮತ್ತು ಸೀರಮ್ ಕ್ರಿಯೇಟಿನೈನ್ ಮಟ್ಟಗಳು ಹೆಚ್ಚಾಗಿ ಕಂಡುಬಂದಿದೆ” ಎಂದೂ ಹೇಳಲಾಗಿದೆ.
ಕೊರುಕೊಂಡ ಮಂಡಲದ ನರಸಪುರಂ ಗ್ರಾಮದ ಡೈರಿ ಘಟಕದಿಂದ 100ಕ್ಕೂ ಹೆಚ್ಚು ಕುಟುಂಬಗಳಿಗೆ ಹಾಲು ಪೂರೈಕೆ ಮಾಡಲಾಗುತ್ತದೆ. ಇಲ್ಲಿಂದಲೇ ಪೂರೈಕೆಯಾದ ಹಾಲಿನಲ್ಲಿ ಕಲಬೆರಕೆಯಾಗಿರುವ ಶಂಕೆಯಿದೆ. ಆದ್ದರಿಂದ ಘಟಕದಲ್ಲಿ ಪೂರೈಕೆಯನ್ನು ಕೂಡಲೇ ನಿಲ್ಲಿಸಲಾಗಿದೆ.





