ನವದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾರಿನ ಮಾಲೀಕರೊಬ್ಬರನ್ನು ಬಂಧಿಸಿದ್ದಾರೆ.
ಕಾರಿನಲ್ಲಿ ಮೂವರು ಪ್ರಯಾಣಿಕರು ಇದ್ದರು ಎಂದು ವರದಿಯಾಗಿದ್ದು, ಇದು ಆತ್ಮಹತ್ಯಾ ದಾಳಿಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
9 ಮಂದಿ ಸಾವು, 20 ಜನರಿಗೆ ಗಾಯ
ಸ್ಫೋಟದಲ್ಲಿ ಒಂಬತ್ತು ಜನರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಎಂಟು ಜನರು ಮೃತಪಟ್ಟಿದ್ದರು, ರಾತ್ರಿಯಲ್ಲಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಇಬ್ಬರು ಮಹಿಳೆಯರು ಸೇರಿ 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟೆಚ್ಚರ ಘೋಷಣೆ
ದೆಹಲಿಯಲ್ಲಿ ಹಾಗೂ ದೇಶದ ಪ್ರಮುಖ ಭಾಗಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ದೆಹಲಿಯ ಸ್ಫೋಟದ ನಂತರ ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪಂಜಾಬ್ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. “ನವದೆಹಲಿಯ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ” ಎಂದು ಪಂಜಾಬ್ ಪೊಲೀಸ್ ಇಲಾಖೆಯ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
“ಸ್ಫೋಟವು ಚಲಿಸುತ್ತಿದ್ದ Hyundai i20 ಕಾರಿನಲ್ಲಿ ಸಂಭವಿಸಿದ್ದು, ಅದರಲ್ಲಿ ಮೂವರು ಕುಳಿತಿದ್ದರು. ನಾವು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸ್ಫೋಟವು ಕೆಂಪುಕೋಟೆ ಟ್ರಾಫಿಕ್ ಸಿಗ್ನಲ್ ಬಳಿ ಸಂಜೆ 6.52ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ವಾಹನದಲ್ಲಿ ಸಂಭವಿಸಿದ್ದು, ಅದರಲ್ಲಿ ಪ್ರಯಾಣಿಕರು ಇದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ” ಎಂದು ನವದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ತಿಳಿಸಿದ್ದಾರೆ
ಸರ್ಕಾರಿ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಅಮಿತ್ ಶಾ ಅವರೊಂದಿಗೆ ಮಾತನಾಡುತ್ತಿದ್ದಾರೆ.
ಅಮಿತ್ ಶಾ ಅವರು ದೆಹಲಿ ಪೊಲೀಸ್ ಮುಖ್ಯಸ್ಥ, ಐಬಿ ನಿರ್ದೇಶಕರೊಂದಿಗೆ ಮಾತನಾಡಿ ಪರಿಸ್ಥಿತಿ ಪರಿಶೀಲಿಸಿದ್ದು, ತನಿಖೆಗೆ ಸಹಾಯಕವಾಗಿ ಸಾಕ್ಷ್ಯ ಸಂಗ್ರಹಿಸಲು ಎನ್ಐಎ, ಎನ್ಎಸ್ಜಿ, ವಿಧಿ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಿಗೆ ತಂಡಗಳನ್ನು ಕಳುಹಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್ಎಸ್ಎಸ್ನ ಇತಿಹಾಸವನ್ನೇ ತಿರುಚುತ್ತಿರುವ ಭಾಗವತ್!
ಘಟನೆಯಲ್ಲಿ ಭಾಗಿಯಾದ ಕಾರು Hyundai i20 ಆಗಿದ್ದು, ನೋಂದಣಿ ಸಂಖ್ಯೆ HR 26 CE 7674 ಎಂದು ಹೇಳಲಾಗಿದೆ.
ಅಧಿಕಾರಿಯೊಬ್ಬರ ಪ್ರಕಾರ, 6 ಕಾರು ಗಳು, ಎರಡು ಇ–ರಿಕ್ಷಾಗಳು ಮತ್ತು ಒಂದು ಆಟೊ ರಿಕ್ಷಾ ಬೆಂಕಿಗೆ ಆಹುತಿಯಾಗಿವೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿವೆ. ಕೆಲ ಕಿಲೋ ಮೀಟರ್ ದೂರದ ಐಟಿಓವರೆಗೆ ಸ್ಫೋಟದ ಶಬ್ದ ಕೇಳಿಸಿದೆ ಎನ್ನಲಾಗಿದೆ.
ನಾನು ಅಲ್ಲಿ ನಿಂತು ಯಾರೊಂದಿಗೋ ಮಾತನಾಡುತ್ತಿದ್ದೆ. ಆಗ ವ್ಯಕ್ತಿಯ ಕೈ (ಶರ್ಟ್ ಇದ್ದಂತೆ) ನನ್ನ ಪಕ್ಕದಲ್ಲಿ ಬಂದು ಬಿದ್ದಿತು. 20 ನಿಮಿಷಗಳಲ್ಲಿ ನಂಬಲಾಗದ ಹಾಗೆ ಸನ್ನಿವೇಶ ಬದಲಾಯಿತು. ಬೃಹತ್ ಸ್ಫೋಟದ ಕೆಲವೇ ಕ್ಷಣಗಳಲ್ಲಿ ಆಗಸದಲ್ಲಿ ಕೆಂಪು ಹೊಗೆ ತುಂಬಿತ್ತು. ಎಲ್ಲರೂ ಭೀತಿಯಿಂದ ರಕ್ಷಣೆಗಾಗಿ ಓಡುತ್ತಿದ್ದರು. ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಮನುಷ್ಯರ ದೇಹದ ಭಾಗಗಳು ಎಲ್ಲೆಂದರಲ್ಲಿ ಹಾರಿ ಬೀಳುತ್ತಿದ್ದವು’ ಎಂದು ಪ್ರತ್ಯಕ್ಷದರ್ಶಿ ಮುದ್ಗಲ್ ಹೇಳಿದ್ದಾರೆ.
ಜಾಮಾ ಮಸೀದಿಯ ಸಮೀಪದ ಪಾನಿಪೂರಿ ಅಂಗಡಿ ಮಾಲೀಕ ಮನೋಜ್, ‘ಸ್ಫೋಟ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ನಾವು ಸ್ಥಳಕ್ಕೆ ಧಾವಿಸಿದೆವು. ಜನರು ಕಿರುಚಾಡುತ್ತಿದ್ದರು. ಕೆಲವರು ಶವವಾಗಿದ್ದರು. ಒಬ್ಬ ಆಟೊ ಚಾಲಕನಿಗೆ ತೀವ್ರ ಗಾಯವಾಗಿತ್ತು. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು’ ಎಂದರು.
‘ಸ್ಫೋಟ ಸಂಭವಿಸಿದಾಗ ನಾವು ನಿಧಾನವಾಗಿ ಚಲಿಸುತ್ತಿದ್ದೆವು. ಕಿಟಕಿ ಗಾಜು ಒಡೆದುಹೋಯಿತು ಮತ್ತು ನಾವು ಮಾರುಕಟ್ಟೆಯ ಕಡೆಗೆ ಓಡಿದೆವು. ಅಲ್ಲಿ ತುಂಬಾ ಜನದಟ್ಟಣೆಯಿತ್ತು. ಏನಾಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ’ ಎಂದು ವಾಹನ ಚಾಲಕ ಭೂಪಿಂದರ್ ಸಿಂಗ್ ತಿಳಿಸಿದರು.
‘ನನ್ನ ಆಟೊದ ಮುಂದೆ ಸ್ವಿಫ್ಟ್ ಕಾರಿತ್ತು. ಕಾರು ಇದ್ದಕ್ಕಿದ್ದ ಹಾಗೆ ಸ್ಫೋಟಗೊಂಡಿತು’ ಎಂದು ಘಟನೆಯಿಂದ ಗಾಯಗೊಂಡಿರುವ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
‘ನಾನು ಗುರುದ್ವಾರದಲ್ಲಿದ್ದೆ. ಇದ್ದಕ್ಕಿದ್ದಂತೆ ಭಾರಿ ಶಬ್ದ ಕೇಳಿತು. ಅದೇನು ಎಂದು ನಮಗೆ ತಿಳಿಯಲಿಲ್ಲ. ಆದರೆ, ಅದು ತುಂಬಾ ಜೋರಾದ ಶಬ್ದವಾಗಿತ್ತು’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು.
ತ್ವರಿತ ತನಿಖೆಗೆ ‘ಕೈ’ ಆಗ್ರಹ
‘ಕಾರು ಸ್ಫೋಟವು ದುಃಖಕರ ಸಂಗತಿ. ಪ್ರಕರಣದ ಸಮಗ್ರ ಹಾಗೂ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
‘ದೆಹಲಿ ಸರ್ಕಾರದ ಭದ್ರತಾ ವೈಫಲ್ಯವನ್ನು ಈ ಘಟನೆಯು ಎತ್ತಿ ತೋರಿಸುತ್ತದೆ. ಗೃಹ ಸಚಿವಾಲಯ ಹೇಳಿಕೊಳ್ಳುವಂತೆ ದೆಹಲಿಯು ಸುರಕ್ಷಿತ ರಾಜಧಾನಿ ಆಗಿದೆಯೇ’ ಎಂದು ಪ್ರಶ್ನಿಸಿದೆ.
‘ಇಂತಹ ಸಂಕಷ್ಟದ ಸಮಯದಲ್ಲಿ ಇಡೀ ದೇಶ ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ಹೇಳಿದೆ.
‘ನಾವು ದುಃಖಿತ ಕುಟುಂಬಗಳೊಂದಿಗೆ ನಿಲ್ಲುತ್ತೇವೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳ ಲೆಂದು ಪ್ರಾರ್ಥಿಸುತ್ತೇವೆ’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಹೈಅಲರ್ಟ್ ಸಿ.ಎಂ ಸಿದ್ದರಾಮಯ್ಯ
ನವದೆಹಲಿಯಲ್ಲಿ ಸ್ಫೋಟ ಸಂಭವಿಸಿರುವುದರಿಂದಾಗಿ ರಾಜ್ಯದಾದ್ಯಂತ ಹೈಅಲರ್ಟ್ ಘೋಷಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಲ್ಲಿ ಸೋಮವಾರ ರಾತ್ರಿ ಪತ್ರಕರ್ತರೊಂದಿಗೆ ಮಾತನಾಡಿ, ‘ಮೈಸೂರು, ಬೆಂಗಳೂರಿನ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇಡೀ ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸುವ ಕೆಲಸ ಮಾಡುತ್ತೇವೆ. ಜಿಲ್ಲಾ ಕೇಂದ್ರ, ವಿಮಾನನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನಸಂದಣಿ ಹೆಚ್ಚಿರುವ ಕಡೆ ಭದ್ರತೆ ಬಿಗಿಗೊಳಿಸುವಂತೆ ಸೂಚಿಸಿದ್ದೇನೆ. ಸ್ಫೋಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇನೆ’ ಎಂದು ಹೇಳಿದರು.
‘ದೆಹಲಿಯಲ್ಲಿ ಭದ್ರತಾ ಲೋಪ ಉಂಟಾಗಿದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ತಿಳಿಸಿದರು.





