13 ಜೀವನಗಳನ್ನು ಬಲಿ ಪಡೆದ ದೆಹಲಿಯ ಕೆಂಪು ಕೋಟೆ ಬಳಿಕ ಸ್ಪೋಟ ಪ್ರಕರಣದಲ್ಲಿ ಭದ್ರತಾ ಲೋಪಗಳ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಅಮಿತ್ ಶಾ ಅವರಿಗೆ ‘ಜವಾಬ್ದಾರಿಯ ಪ್ರಜ್ಞೆ’ ಇದ್ದರೆ ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.
“ಯುಪಿಎ ಅಧಿಕಾರದಲ್ಲಿದ್ದಾಗ ಮುಂಬೈ ಸ್ಫೋಟ ಸಂಭವಿಸಿದಾಗ, ಅಂದಿನ ಗೃಹ ಸಚಿವರು ಭದ್ರತಾ ಲೋಪದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ, ಭದ್ರತಾ ವೈಫಲ್ಯದ ನೈತಿಕ ಹೊಣೆಗಾರಿಕೆ ಕಾರಣಕ್ಕಾಗಿ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು” ಎಂದು ಅವರು ನೆನಪಿಸಿದ್ದಾರೆ.
“ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾವಾಗಲೂ ಸಂಸತ್ತಿನಲ್ಲಿ ‘ಸುಳ್ಳು’ ಹೇಳುತ್ತಿದ್ದರು. ತಮ್ಮ ಆಡಳಿತದಲ್ಲಿ ದೇಶದಲ್ಲಿ ಯಾವುದೇ ಗಲಭೆಗಳು ಅಥವಾ ಸ್ಫೋಟಗಳು ನಡೆದಿಲ್ಲ ಎನ್ನುತ್ತಿದ್ದರು. ಈಗ, ಅವರ ಕಣ್ಣುಗಳ ಮುಂದೆ, ಅವರ ಕಚೇರಿಗೆ ಬಹಳ ಸಮೀಪದಲ್ಲಿಯೇ ಈ ಸ್ಫೋಟ ಸಂಭವಿಸಿದೆ. ಸರ್ಕಾರವು ಸ್ಪಷ್ಟವಾದ ತನಿಖೆ ನಡೆಸಬೇಕು. ನಿಜವಾದ ಕಾರಣವನ್ನು ದೇಶದ ಎದುರು ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮುಂದುವರೆದ ಮೋದಿ ಮುಸ್ಲಿಂ ದ್ವೇಷ ಭಾಷಣ; ವಿಪಕ್ಷಗಳ ಟೀಕೆಗೆ ರಾಮನ ಎಳೆದುತಂದ ಮೋದಿ
ಈ ದಾಳಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯ ಎಂದು ಬಣ್ಣಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಭಯೋತ್ಪಾದಕ ಕೃತ್ಯದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇದರಿಂದ, ಮುಂದಿನ ದಿನಗಳಲ್ಲಿ ದಾಳಿಗಳನ್ನು ತಡೆಯಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ.
“ಗುಪ್ತಚರ ಇಲಾಖೆ ಸೇರಿದಂತೆ ಭದ್ರತೆ ಕುರಿತು ಕಾರ್ಯನಿರ್ವಹಿಸುವ ಎಲ್ಲ ಉನ್ನತ ಸಂಸ್ಥೆಗಳು ಕಾರ್ಯಾಚರಣೆ ನಡೆಸುವ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ” ಎಂದು ಖರ್ಗೆ ಹೇಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸ್ಪೋಟ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಚರ್ಚೆಗೆ ತರಲಿದೆ ಎಂದಿದ್ದಾರೆ.




