ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಬಳಿಕ ದೇಶದಲ್ಲಿ ‘ವೈಟ್ ಕಾಲರ್’ ಉಗ್ರ ಜಾಲ ಎಂಬುದು ಬೆಳಕಿಗೆ ಬಂದಿದ್ದು, ತನಿಖಾ ಸಂಸ್ಥೆಗಳು ಈ ಜಾಲಕ್ಕೆ ಸಂಬಂಧಿಸಿ ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ಎಂಬಾಕೆಯನ್ನು ಜಮ್ಮು ಕಾಶ್ಮೀರದಲ್ಲಿ ಬಂಧಿಸಿದೆ ಎಂದು ವರದಿಯಾಗಿದೆ.
ಇನ್ನು ಕಾರಿನಲ್ಲಿದ್ದ ಆತ್ಮಹತ್ಯಾ ಬಾಂಬರ್ ಡಾ ಉಮರ್ ಉನ್ ನಬಿಯೊಂದಿಗೆ ಸಂಪರ್ಕದಲ್ಲಿದ್ದ ಶಂಕೆಯಲ್ಲಿ ಹರಿಯಾಣದ ನುಹ್ನಲ್ಲಿ ಬಂಧಿತರಾಗಿದ್ದ ಡಾ ರೆಹಾನ್, ಡಾ ಮುಹಮ್ಮದ್, ಡಾ ಮುಸ್ತಕೀಮ್ ಹಾಗೂ ರಸಗೊಬ್ಬರ ವ್ಯಾಪಾರಿ ದಿನೇಶ್ ಸಿಂಗ್ಲಾರನ್ನು ಈ ಪ್ರಕರಣದಲ್ಲಿ ಯಾವುದೇ ನಂಟಿಲ್ಲ ಎಂಬ ಕಾರಣಕ್ಕೆ ನಿನ್ನೆ ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಸ್ಪೋಟ | ಬಂಧಿತ ವೈದ್ಯರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿದ NIA
ಆದರೆ ಪ್ರಿಯಾಂಕಾ ಶರ್ಮಾ ನಿನ್ನೆಯಷ್ಟೇ ಬಂಧನಕ್ಕೆ ಒಳಗಾಗಿದ್ದಾಳೆ. ದಕ್ಷಿಣ ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕೆಗೆ ವೈಟ್ ಕಾಲರ್ ಉಗ್ರ ಜಾಲದ ಸಂಪರ್ಕವಿದೆ ಎಂದು ಹೇಳಲಾಗಿದೆ.
ಪ್ರಿಯಾಂಕಾ ಶರ್ಮಾ ಯಾರು?
ಹರಿಯಾಣದ ವೈದ್ಯೆ ಡಾ. ಪ್ರಿಯಾಂಕಾ ಶರ್ಮಾ ಎಂಬಾಕೆಯನ್ನು ‘ವೈಟ್ ಕಾಲರ್’ ಉಗ್ರ ಜಾಲಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ದಕ್ಷಿಣ ಕಾಶ್ಮೀರದ ಅನಂತ್ನಾಗ್ನಲ್ಲಿ ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ತಂಡವು ಶರ್ಮಾಳ ನಿವಾಸಕ್ಕೆ ದಾಳಿ ಮಾಡಿ ಬಂಧಿಸಿದ್ದು, ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ವಶಪಡಿಸಿಕೊಂಡಿವೆ.
ಅನಂತ್ನಾಗ್ನ ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಮಾಜಿ ಸಿಬ್ಬಂದಿ ಅದೀಲ್ ಬಂಧನದ ನಂತರ ಪ್ರಿಯಾಂಕಾ ಹೆಸರು ಕೇಳಿಬಂದಿದೆ. ಈ ಉಗ್ರ ಜಾಲಕ್ಕೆ ವಸತಿ ವ್ಯವಸ್ಥೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತಿದ್ದ ಆರೋಪವಿದೆ.
ಇದನ್ನು ಓದಿದ್ದೀರಾ? ದೆಹಲಿ ನ್ಯಾಯಮೂರ್ತಿ ಬಂಗಲೆ; ಭರ್ತಿ ಚೀಲಗಳ ನಗದಿಗೆ ಬೆಂಕಿ ಬಿದ್ದ ಕತೆಯೇನು?
ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಉತ್ತರ ಪ್ರದೇಶದ ಸುಮಾರು 200 ಕಾಶ್ಮೀರಿ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರನ್ನು ತನಿಖೆ ನಡೆಸುತ್ತಿದೆ. ‘ವೈಟ್ ಕಾಲರ್’ ಉಗ್ರ ಜಾಲದ ತನಿಖೆಯ ಭಾಗವಾಗಿ ಎಟಿಎಸ್ ಲಕ್ನೋ, ಕಾನ್ಪುರ, ಮೀರತ್, ಸಹರಾನ್ಪುರ ಮತ್ತು ಇತರ ನಗರಗಳ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ತನಿಖಾ ತಂಡ ಸಂಪರ್ಕಿಸಿದೆ. ಹರಿಯಾಣದಲ್ಲಿ ಹಲವು ವೈದ್ಯರನ್ನು ಮತ್ತು ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಇತರರನ್ನು ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದ ಬಂಧಿಸಲಾಗಿದೆ.
ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಸಂಕೀರ್ಣದ ಬಳಿ ಸಂಭವಿಸಿದ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ದೆಹಲಿ ಪೊಲೀಸರು ಕ್ರಿಮಿನಲ್ ಪಿತೂರಿಯ ಅಡಿಯಲ್ಲಿ ಹೊಸ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕೆಂಪು ಕೋಟೆಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.





