ದೆಹಲಿ ಸ್ಫೋಟದಲ್ಲಿ ಸಂಭವಿಸಿದ ಸಾವುಗಳಿಗೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಆಂತರಿಕ ಭದ್ರತೆಯಲ್ಲಿನ ‘ಗಂಭೀರ ಲೋಪ’ಗಳ ಪ್ರಶ್ನೆಗಳನ್ನು ಎತ್ತಿದ್ದಾರೆ. ಗೃಹ ಸಚಿವಾಲಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಸಂಜೆ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಸಮೀಪ ಟ್ರಾಫಿಕ್ ಸಿಗ್ನಲ್ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರು ಭೀಕರವಾಗಿ ಸ್ಪೋಟಗೊಂಡಿತ್ತು. ಆತ್ಮಹತ್ಯಾ ಬಾಂಬರ್ ಚಲಾಯಿಸುತ್ತಿದ್ದ ಕಾರು ಅದು ಎಂದು ಹೇಳಲಾಗಿದೆ. ಘಟನೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ.
ಬಿಹಾರದಲ್ಲಿ 2ನೇ ಹಂತದ ಮತದಾನ ನಡೆಯುವುದಕ್ಕೂ ಒಂದು ದಿನ ಮುಂಚಿತವಾಗಿ ಸಂಭವಿಸಿರುವ ಈ ಸ್ಪೋಟದ ಸುತ್ತ ರಾಜಕೀಯ ಆಯಾಮದ ಚರ್ಚೆಗಳು ನಡೆಯುತ್ತಿವೆ. 2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪುಲ್ವಾಮ ದಾಳಿ ನಡೆದಿತ್ತು. ಆ ದಾಳಿಯ ಹಿಂದಿದ್ದವರು, ಉದ್ದೇಶವೇನು ಎಂಬುದು ಈವರೆಗೆ ಪತ್ತೆಯಾಗಿಲ್ಲ. ಇದೀಗ, ಬಿಹಾರ ಚುನಾವಣೆಯ ಸಮಯದಲ್ಲಿ ಸ್ಪೋಟ ಸಂಭವಿಸಿದೆ. ಹೀಗಾಗಿ, ರಾಜಕೀಯ ಆಯಾಮದಲ್ಲಿ ನೋಡಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಇದೇ ವೇಳೆ, ಭದ್ರತಾ ಲೋಪಗಳ ಬಗ್ಗೆಯೂ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ದೆಹಲಿ ದುರಂತ ಕುರಿತು ಪೋಸ್ಟ್ ಮಾಡಿರುವ ಅಭಿಷೇಕ್ ಬ್ಯಾನರ್ಜಿ, “ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ನೋವಿನಿಂದ ಹೊರಬರಲು ಅವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ನಮ್ಮ ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ದುಃಖಕರವಾಗಿದೆ” ಎಂದು ಹೇಳಿದ್ದಾರೆ.
“ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ದೆಹಲಿ ಪೊಲೀಸರು ‘ಕಾನೂನು ಮತ್ತು ಸುವ್ಯವಸ್ಥೆ’ಯನ್ನು ಕಾಪಾಡುವ ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿದ್ದಾರೆ. ಹಾಗಾದರೆ, ಭದ್ರತೆಯಲ್ಲಿ ಇಂತಹ ಗಂಭೀರ ಲೋಪಗಳು ಸಂಭವಿಸಲು ಹೇಗೆ ಸಾಧ್ಯವಾಯಿತು” ಎಂದು ಪ್ರಶ್ನಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ
“ಭಾನುವಾರ ಹರಿಯಾಣದ ಫರಿದಾಬಾದ್ನಲ್ಲಿ ಸುಮಾರು 350 ಕೆಜಿ ಸ್ಫೋಟಕಗಳು ಮತ್ತು ಒಂದು ಅಸಾಲ್ಟ್ ರೈಫಲ್ ವಶಪಡಿಸಿಕೊಳ್ಳಲಾಗಿದೆ. ಸೋಮವಾರ ದೆಹಲಿಯಲ್ಲಿ ಸ್ಪೋಟ ಸಂಭವಿಸಿದೆ. ಈ ಎರಡೂ ಘಟನೆಗಳನ್ನು ಒಟ್ಟಿಗೆ ನೋಡಿದಾಗ, “ಆಂತರಿಕ ಭದ್ರತೆ ಮತ್ತು ಜಾಗರೂಕತೆಯಲ್ಲಿನ ಸ್ಪಷ್ಟ ವೈಫಲ್ಯಗಳ ಬಗ್ಗೆ ಆತಂಕಕಾರಿ ಪ್ರಶ್ನೆಗಳು ಹುಟ್ಟುತ್ತವೆ” ಎಂದು ಹೇಳಿದ್ದಾರೆ.
“ದುರಂತ ಘಟನೆ ಕುರಿತು ನಿಷ್ಪಕ್ಷಪಾತ, ತ್ವರಿತ ತನಿಖೆ ನಡೆಸಬೇಕು. ಸತ್ಯವನ್ನು ಬಹಿರಂಗಪಡಿಸಲು ಮತ್ತು ಜವಾಬ್ದಾರಿಯುತರನ್ನು ಸಂಪೂರ್ಣವಾಗಿ ಹೊಣೆಗಾರರನ್ನಾಗಿ ಮಾಡಲು ಅಗತ್ಯವಿದ್ದರೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಬೇಕು” ಎಂದು ಒತ್ತಾಯಿಸಿದ್ದಾರೆ.




