2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರಿಗೆ ತಮ್ಮ ಸಹೋದರನ ಮದುವೆಯಲ್ಲಿ ಭಾಗಿಯಾಗಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ದೆಹಲಿ ನ್ಯಾಯಾಲಯವು ಸೋಮವಾರ 10 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ಪೈ ಅವರು ಮಾರ್ಚ್ 20ರಿಂದ ಮಾರ್ಚ್ 30ರವರೆಗೆ ಇಮಾಮ್ಗೆ ಮಧ್ಯಂತರ ಜಾಮೀನು ನೀಡಿದ್ದಾರೆ. ಜಾಮೀನಿನಲ್ಲಿರುವಾಗ, ಇಮಾಮ್ ಮಾಧ್ಯಮಗಳನ್ನು ಸಂಪರ್ಕಿಸಬಾರದು ಅಥವಾ ಸಾಮಾಜಿಕ ಮಾಧ್ಯಮವನ್ನು ಬಳಸಬಾರದು ಎಂದೂ ಕೋರ್ಟ್ ಸೂಚನೆ ನೀಡಿದೆ. ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾತ್ರ ಸಂವಹನ ನಡೆಸುವಂತೆ ನಿರ್ದೇಶಿಸಿದೆ.
ಇದನ್ನು ಓದಿದ್ದೀರಾ? ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ಗೆ ಜಾಮೀನು ನಕಾರ: ಸುಪ್ರೀಂ ಕೋರ್ಟ್ ವಕೀಲರ ತಕರಾರು
“ಲೆಫ್ಟಿನೆಂಟ್ ಕೌನ್ಸೆಲ್ ಉಲ್ಲೇಖಿಸಿರುವ ಮತ್ತು ಪ್ರಾಸಿಕ್ಯೂಷನ್ ಪರಿಶೀಲಿಸಿದ ಸಂಗತಿಗಳನ್ನು ಪರಿಗಣಿಸಿ, ಅರ್ಜಿದಾರರಿಗೆ ಮಾರ್ಚ್ 20ರಿಂದ 30ವರೆಗೆ ₹50,000/- ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಇಬ್ಬರು ಶ್ಯೂರಿಟಿಗಳ ಆಧಾರದಲ್ಲಿ ಮಧ್ಯಂತರ ಜಾಮೀನು ನೀಡುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
2020ರ ಜನವರಿಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಮಾಡಿದ ಭಾಷಣದ ಕಾರಣಕ್ಕಾಗಿ ಇಮಾಮ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಬಂಧಿತರಾಗಿರುವ ಇಮಾಮ್ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ. 2025ರ ಸೆಪ್ಟೆಂಬರ್ 2ರಂದು ದೆಹಲಿ ಹೈಕೋರ್ಟ್ ಈ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದು, ಸುಪ್ರೀಂ ಕೋರ್ಟ್ 2026ರ ಜನವರಿ 5ರಂದು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ಇದನ್ನು ಓದಿದ್ದೀರಾ? ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಣೆ
ಉಮರ್ ಖಾಲಿದ್, ಇಮಾಮ್ಗೆ ಜಾಮೀನು ನಿರಾಕರಿಸಿರುವ ಕ್ರಮವನ್ನು ವಿವಿಧ ರಾಜಕೀಯ ಪಕ್ಷಗಳು, ಕಾನೂನು ತಜ್ಞರು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ತೀವ್ರವಾಗಿ ವಿರೋಧಿಸಿದ್ದಾರೆ. ಈ ನಾಯಕರುಗಳನ್ನು ಐದು ವರ್ಷಗಳಿಂದ ವಿಚಾರಣೆಯಿಲ್ಲದೆಯೇ ಜೈಲಿನಲ್ಲಿ ಇರಿಸಿರುವುದನ್ನು ನಾಯಕರುಗಳು ವಿರೋಧಿಸಿದ್ದಾರೆ. ಇದು ಸಂವಿಧಾನದ 21ನೇ ವಿಧಿಯ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘನೆ ಎಂದು ವಾದಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ ಅತ್ಯಾಚಾರದಂತಹ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಗುರ್ಮೀತ್ ರಾಮ್ ರಹೀಂ ಅಂತಹವರಿಗೆ ಪದೇ ಪದೇ ಪೆರೋಲ್ ನೀಡಲಾಗುತ್ತಿದೆ. ಆದರೆ ಆದರೆ ವಿಚಾರಣೆಯನ್ನೇ ಎದುರಿಸದ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸಲಾಗುತ್ತಿರುವುದನ್ನು ವಿಪಕ್ಷ ನಾಯಕರುಗಳು ಪ್ರಶ್ನಿಸಿದ್ದಾರೆ.





