ದೆಹಲಿ ವಿಧಾನಸಭೆ ಮತ್ತು ಚುನಾಯಿತ ಸರ್ಕಾರದ ಶಾಸಕಾಂಗ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಗುರುವಾರ ತೀರ್ಪು ನೀಡಿದೆ. ಇತರ ರಾಜ್ಯಗಳಂತೆ ಎಲ್ಜಿ ಕೂಡ ದೆಹಲಿ ಸರ್ಕಾರಕ್ಕೆ ಸಲಹೆ ನೀಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಎಪಿ ನೇತೃತ್ವದ ದೆಹಲಿ ಸರ್ಕಾರವು ಅಧಿಕಾರ ಸೇವೆಗಳ ನಿಯಂತ್ರಣದ ಮೇಲೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿರಬೇಕು ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿತ್ತು.
ಕೇಂದ್ರದೊಂದಿಗಿನ ತನ್ನ ಅಧಿಕಾರದ ಸ್ಪಷ್ಟವಾದ ಗಡಿರೇಖೆಯನ್ನು ಸುಪ್ರೀಂ ಕೋರ್ಟ್ನಿಂದ ಕೋರಿತ್ತು. ಈ ವರ್ಷದ ಜನವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಪಿ ಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ನಾಲ್ಕು ದಿನಗಳ ಕಾಲ ವಾದಗಳನ್ನು ಆಲಿಸಿದ ನಂತರ ಆದೇಶವನ್ನು ಕಾಯ್ದಿರಿಸಿತ್ತು.
ಸುಪ್ರೀಂ ತೀರ್ಪು ಸ್ವಾಗತಿಸಿದ ಎಎಪಿ
ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಅಧಿಕಾರ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ತೀರ್ಪನ್ನು ಆಡಳಿತರೂಢ ಎಎಪಿ ಸ್ವಾಗತಿಸಿದ್ದು, ‘ಇದು ದೊಡ್ಡ ಗೆಲುವು’ ಎಂದು ತಿಳಿಸಿದೆ.
ತೀರ್ಪನ್ನು ಸ್ವಾಗತಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಎಎಪಿ, “ಚುನಾಯಿತ ಸರ್ಕಾರಕ್ಕೆ ಅಧಿಕಾರಿಗಳ ವರ್ಗಾವಣೆ ಹಂಚಿಕೆ ಮಾಡುವ ಅಧಿಕಾರವಿರುತ್ತದೆ. ಅಧಿಕಾರಿಗಳು ಚುನಾಯಿತ ಸರ್ಕಾರದ ಮೂಲಕ ಮಾತ್ರ ಕೆಲಸ ಮಾಡುತ್ತಾರೆ” ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನು “ಐತಿಹಾಸಿಕ ನಿರ್ಧಾರ” ಎಂದು ಕರೆದಿರುವ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು, ಇದು ಕೇಂದ್ರಕ್ಕೆ ಕಠಿಣ ಸಂದೇಶವನ್ನು ರವಾನಿಸಿದೆ ಎಂದು ಹೇಳಿದ್ದಾರೆ.





