ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹತ್ತು ಮಂದಿ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಅಥವಾ ಅಪಹರಿಸಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಈ ಸಂಬಂಧ ದೆಹಲಿ ಹೈಕೋರ್ಟ್ನಲ್ಲಿ ‘ಹೇಬಿಯಸ್ ಕಾರ್ಪಸ್’ ಅರ್ಜಿ ಸಲ್ಲಿಕೆಯಾಗಿದ್ದು, ನಾಪತ್ತೆಯಾದವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಲಾಗಿದೆ.
ಕ್ಯಾಂಪೇನ್ ಅಗೈನೆಸ್ಟ್ ಸ್ಟೇಟ್ ರಿಪ್ರೆಷನ್ (CASR) ಸಂಘಟನೆಯ ಪ್ರಕಾರ, ಮಾರ್ಚ್ 12 ಮತ್ತು 13ರಂದು ದೆಹಲಿಯ ವಿವಿಧೆಡೆಗಳಿಂದ ಹತ್ತು ಮಂದಿ ಹೋರಾಟಗಾರರನ್ನು ಪೊಲೀಸರು ಅಪಹರಿಸಿದ್ದಾರೆ. ಇವರಲ್ಲಿ ಇಬ್ಬರು ಕಾರ್ಮಿಕ ಹಕ್ಕುಗಳ ಹೋರಾಟಗಾರರು, ಇಬ್ಬರು ಸ್ಥಳಾಂತರ ವಿರೋಧಿ ಕಾರ್ಯಕರ್ತರು ಹಾಗೂ ಆರು ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ.
“ಮಾರ್ಚ್ 12ರಂದು ದೆಹಲಿ ವಿವಿಯ ವಿದ್ಯಾರ್ಥಿನಿ ಇಲಾಕಿಯಾ ಮತ್ತು ಕಾರ್ಮಿಕ ಹೋರಾಟಗಾರ ಶಿವಕುಮಾರ್ ಅವರನ್ನು ನಾಗರಿಕ ಉಡುಪಿನಲ್ಲಿದ್ದ ವ್ಯಕ್ತಿಗಳು ಬಲವಂತವಾಗಿ ವಾಹನಕ್ಕೆ ಎಳೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಅಂತೆಯೇ, ಮಾರ್ಚ್ 13ರಂದು ಮಜ್ದೂರ್ ಅಧಿಕಾರ್ ಸಂಘಟನೆಯ ಮಂಜೀತ್ ನಾಪತ್ತೆಯಾಗಿದ್ದಾರೆ. ಅದೇ ದಿನ ಸಂಜೆ ವಿಜಯನಗರದ ವಿದ್ಯಾರ್ಥಿ ಸಂಘಟನೆಯ ಕಚೇರಿಯಿಂದ ಅಕ್ಷಯ್, ದೃಷ್ಟಿ, ರುದ್ರ, ಕಿರಣ್, ಗೌರವ್, ಬಾದಲ್ ಮತ್ತು ಎಹ್ತೆಮಾಮ್ ಎಂಬುವವರನ್ನು ಪೊಲೀಸರು ಕರೆದೊಯ್ದಿದ್ದಾರೆ” ಎಂದು ಸಂಘಟನೆ ಆರೋಪಿಸಿದೆ.
ಈ ಹಿಂದೆ ರೈತ ಹೋರಾಟದ ವೇಳೆ ಶಿವಕುಮಾರ್ ಅವರ ಮೇಲೆ ನಡೆದಿದ್ದ ಪೊಲೀಸ್ ಚಿತ್ರಹಿಂಸೆಯನ್ನು CASR ನೆನಪಿಸಿದೆ. ಅಲ್ಲದೆ, ಈಗ ನಾಪತ್ತೆಯಾಗಿರುವವರ ಪೈಕಿ ಕೆಲವರನ್ನು ಎಂಟು ತಿಂಗಳ ಹಿಂದೆ ದೆಹಲಿ ಪೊಲೀಸರ ವಿಶೇಷ ಘಟಕವು ವಶಕ್ಕೆ ಪಡೆದು, ಒಂದು ವಾರಕ್ಕೂ ಹೆಚ್ಚು ಕಾಲ ಅಕ್ರಮ ಬಂಧನದಲ್ಲಿಟ್ಟು ದೈಹಿಕ ಹಿಂಸೆ ನೀಡಿತ್ತು ಎಂದೂ ಸಿಎಎಸ್ಆರ್ ಆರೋಪಿಸಿದೆ.
ನಾಪತ್ತೆ ಪ್ರಕರಣಗಳ ವಿರುದ್ಧ ಲಕ್ಷಿತಾ ರಾಜೋರಾ ಮತ್ತು ಇತರರು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಾಜೋರಾ ಅವರು, “ತನ್ನ ಸಹೋದರಿ ಸಗ್ರಿಕಾ ರಾಜೋರಾ ಅವರನ್ನು ಮಾರ್ಚ್ 13ರಿಂದ ಅಕ್ರಮವಾಗಿ ಬಂಧಿಸಿಡಲಾಗಿದೆ” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
“ನಾಪತ್ತೆಯಾದ ಹತ್ತು ಮಂದಿ ಪ್ರಸ್ತುತ ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ತಕ್ಷಣ ಬಹಿರಂಗಪಡಿಸಬೇಕು. ಬಂಧಿತರಿಗೆ ತಕ್ಷಣ ಕಾನೂನು ನೆರವು ಮತ್ತು ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡಬೇಕು. ಪ್ರಜಾಸತ್ತಾತ್ಮಕ ಧ್ವನಿಗಳನ್ನು ಹತ್ತಿಕ್ಕುವ ಇಂತಹ ಅಕ್ರಮ ಬಂಧನಗಳನ್ನು ನಿಲ್ಲಿಸಬೇಕು” ಎಂದು ಅರ್ಜಿದಾರರು ಕೋರಿದ್ದಾರೆ.
ಈ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ವಿಚಾರಣೆ ನಡೆಸಲಿದೆ. ನಾಪತ್ತೆಯಾದವರನ್ನು ತಕ್ಷಣ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸುವ ಸಾಧ್ಯತೆಯಿದೆ.




