ದೆಹಲಿಯ ಕೆಂಪು ಕೋಟೆ ಬಳಿ ನಡೆದಿದ್ದ ಸ್ಫೋಟಕ್ಕೆ ಬಲಿಯಾದ ಮತ್ತು ತೀವ್ರ ಹಾನಿ ಅನುಭವಿಸಿದ್ದ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ದೆಹಲಿ ಸರ್ಕಾರ ಘೋಷಿಸಿದ್ದ ಪರಿಹಾರ ಇನ್ನೂ ದೊರೆತಿಲ್ಲವೆಂದು ವರದಿಯಾಗಿದೆ. ಘಟನೆ ನಡೆದು ತಿಂಗಳಿಗೂ ಹೆಚ್ಚು ಸಮಯವಾಗಿದ್ದರೂ, ತನ್ನ ಭರವಸೆಯಂತೆ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರೊಂದು ಸ್ಫೋಟಗೊಂಡು ಕನಿಷ್ಟ 13 ಮಂದಿ ಸಾವನ್ನಪ್ಪಿದ್ದಾರು. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಹಲವಾರು ವಾಹನಗಳೂ ಬೆಂಕಿಗೆ ಆಹುತಿಯಾಗಿದ್ದವು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿದೆ.
ಘಟನೆ ಸಂಭವಿಸಿದಾಗ, ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರವು ಸ್ಫೋಟದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 10 ಲಕ್ಷ ರೂ., ಶಾಶ್ವತ ಅಂಗವಿಕಲತೆಗೆ ಗುರಿಯಾದ ಸಂತ್ರಸ್ತರಿಗೆ 5 ಲಕ್ಷ ರೂ., ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 20,000 ರೂ. ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ, ಒಂದೂವರೆ ತಿಂಗಳುಗಳ ಕಳೆದರೂ ಇನ್ನೂ ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ.
ಸ್ಫೋಟದಿಂದ ಮೃತಪಟ್ಟವರಲ್ಲಿ ಹಲವರು ತಮ್ಮ ಕುಟುಂಬಗಳ ಏಕೈಕ ಜೀವನಾಧಾರವಾಗಿದ್ದರು. ಅವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಪರಿಹಾರ ದೊರೆಯದೇ ಇರುವುದು, ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಲೇಖನ ಓದಿದ್ದೀರಾ?: ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!
ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ ನೌಮನ್ ಅನ್ಸಾರಿ ಕೂಡ ಒಬ್ಬರು. ಅವರ ಮರಣದಿಂದ ಇಡೀ ಕುಟುಂಬ ಖಿನ್ನತೆಗೆ ಒಳಗಾಗಿದೆ ಎಂದು ಅನ್ಸಾರಿ ಅವರ ಚಿಕ್ಕಪ್ಪ ಮೆಹಬೂಬ್ ಅನ್ಸಾರಿ ಹೇಳಿದ್ದಾರೆ. “ಪರಿಹಾರಕ್ಕಾಗಿ ದೆಹಲಿಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ಗೆ (SDM) ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ಆದರೂ, ಈವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ದುಡಿಮೆಯಿಲ್ಲದೆ, ಅವರ ಕುಟುಂಬವು ಸಂಕಷ್ಟದಲ್ಲಿದೆ. ನಾವು ಸಾಧ್ಯವಾದಷ್ಟು ನೆರವು ನೀಡುತ್ತಿದ್ದೇವೆ” ಎಂದು ಮೆಹಬೂಬ್ ಹೇಳಿದ್ದಾರೆ.
ಅದೇ ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಪುರೋಹಿತ ವಿನಯ್ ಪಾಠಕ್ (50) ಕೂಡ ಒಬ್ಬರು. ಅವರ ಮಗ ಅನೀದ್ ಪಾಠಕ್ ಹೇಳುವಂತೆ, “ತನ್ನ ತಂದೆಯ ಮರಣದಿಂದ ನನ್ನ ತಾಯಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಕುಟುಂಬವು ದುಃಖವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅಗತ್ಯವಿರುವ ಎಲ್ಲ ದಾಖಲೆಗಳನ್ನು ಒದಗಿಸಿದಾಗ ಶೀಘ್ರವೇ ಪರಿಹಾರ ಬಿಡುಗಡೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಏನೂ ದೊರೆತಿಲ್ಲ” ಎಂದಿದ್ದಾರೆ.
ಪ್ರತಿಕ್ರಿಯೆ ಕೇಳಿ ‘ದಿ ಹಿಂದು’ ಪತ್ರಿಕೆಯು ಮುಖ್ಯಮಂತ್ರಿ ಕಚೇರಿಯನ್ನು (CMO) ಸಂಪರ್ಕಿಸಿದೆ. ಆದರೆ, ಕಚೇರಿಯು ಯಾಔಉದೇ ಪ್ರತಿಕ್ರಿಯೆ ನೀಡಲಾಗಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ. ಆದಾಗ್ಯೂ, ಈವರೆಗೆ 11 ಸಂತ್ರಸ್ತರಿಗೆ ಪರಿಹಾಋದ ಹಣ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲವೊಂದು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.




