ದೆಹಲಿಯ ಕೆಂಪು ಕೋಟೆ ಬಳಿಯ ಕಾರು ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ವರದಿಯಾಗಿದೆ. ಸ್ಪೋಟ ಸಂಭವಿಸಿದ್ದ ಸ್ಥಳದಲ್ಲಿ ಮೂರು ಕಾರ್ಟ್ರಿಡ್ಜ್ಗಳು (ಎರಡು ಜೀವಂತ ಮತ್ತು ಒಂದು ಖಾಲಿ) ಪತ್ತೆಯಾಗಿದ್ದು, ಅವುಗಳು 9 ಎಂಎಂ ಕ್ಯಾಲಿಬರ್ನದ್ದಾಗಿವೆ. ಈ 9ಎಂಎಂ ಕ್ಯಾಲಿಬರ್ ನಾಗರಿಕರು ಬಳಕೆ ಮಾಡಲು ನಿಷೇಧಿಸಲಾದ ಬಂದೂಕುಗಳಲ್ಲಿ ಒಂದಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ.
ಘಟನಾ ಸ್ಥಳದಲ್ಲಿ ಯಾವುದೇ ಪಿಸ್ತೂಲ್ ಅಥವಾ ಅದರ ಯಾವುದೇ ಭಾಗಗಳು ಕಂಡುಬಂದಿಲ್ಲ. ಈ ಕಾರ್ಟ್ರಿಡ್ಜ್ಗಳನ್ನು ಸಾಮಾನ್ಯವಾಗಿ ಸಶಸ್ತ್ರ ಪಡೆಗಳು ಅಥವಾ ವಿಶೇಷ ಅನುಮತಿ ಹೊಂದಿರುವವರು ಮಾತ್ರ ಹೊಂದಿರುತ್ತಾರೆ. ಈ ಮದ್ದುಗುಂಡುಗಳು ಸ್ಥಳದಲ್ಲಿ ಹೇಗೆ ಸಿಕ್ಕವು ಮತ್ತು ಶಂಕಿತ ಇವುಗಳನ್ನು ಬಳಸಿದ್ದನೇ” ಎಂದು ತನಿಖೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಂತರ ಐತಿಹಾಸಿಕ ‘ಕೆಂಪು ಕೋಟೆ’ ಸ್ಮಾರಕದ ಸುತ್ತಲೂ ಭದ್ರತೆ ಬಿಗಿಗೊಳಿಸಲಾಗಿದೆ.
ಪ್ರಕರಣದಲ್ಲಿ, ಜಮ್ಮು ಮತ್ತು ಕಾಶ್ಮೀರ ಮೂಲದ ನಾಲ್ವರು ವೈದ್ಯರಾದ ಡಾ. ಮುಜಾಫರ್ ಅಹ್ಮದ್, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಮುಜಾಮಿಲ್ ಶಕೀಲ್ ಮತ್ತು ಡಾ. ಶಾಹೀನ್ ಸಯೀದ್ ಅವರನ್ನು ಎನ್ಐಎ ಬಂಧಿಸಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಈ ವೈದ್ಯರ ನೋಂದಣಿಯನ್ನು ಭಾರತೀಯ ವೈದ್ಯಕೀಯ ನೋಂದಣಿ/ರಾಷ್ಟ್ರೀಯ ವೈದ್ಯಕೀಯ ನೋಂದಣಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ತನಿಖಾ ಸಂಸ್ಥೆಗಳು ಸುಮಾರು ಎಂಟು ಶಂಕಿತರು ನಾಲ್ಕು ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜಿಸಿದ್ದರು. ತಲಾ ಇಬ್ಬರ ನಾಲ್ಕು ತಂಡಗಳು ಏಕಕಾಲದಲ್ಲಿ ದಾಳಿ ಮಾಡಲು ಬಹು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಹೊತ್ತೊಯ್ಯುತ್ತಿದ್ದರು. ಡಾ. ಉಮರ್ ಉನ್ ನಬಿ ಕೆಂಪು ಕೋಟೆ ಸ್ಫೋಟವನ್ನು ನಡೆಸಿದ್ದಾರೆ ಎಂಬುದನ್ನು ಡಿಎನ್ಎ ಪರೀಕ್ಷೆಯು ದೃಢಪಡಿಸಿದೆ ಎಂದು ತಿಳಿಸಿವೆ.




