ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮತ್ತು ಆತ್ಮಾಹುತಿ ಬಾಂಬರ್ ಎಂದು ಹೇಳಲಾದ ಡಾ. ಉಮರ್ ನಬಿಯ ದಕ್ಷಿಣ ಕಾಶ್ಮೀರದ ಪುಲ್ವಾಮಾದ ಕ್ವಿಲ್ ಗ್ರಾಮದಲ್ಲಿರುವ ಮನೆಯನ್ನು ಭದ್ರತಾ ಪಡೆಗಳು ನವೆಂಬರ್ 14ರಂದು ಧ್ವಂಸಗೊಳಿಸಿದೆ. ಉಗ್ರರ ವಿರುದ್ಧ ಬಲವಾದ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಮನೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಓರ್ವ ವ್ಯಕ್ತಿ ಮಾಡಿದ ತಪ್ಪಿಗೆ ಆತನ ಇಡೀ ಕುಟುಂಬಕ್ಕೆ ಶಿಕ್ಷೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಇಲ್ಲಿ ಹುಟ್ಟುತ್ತದೆ.
ಈ ಹಿಂದೆಯೇ ಹಲವು ಬಾರಿ ಮಾನವ ಹಕ್ಕುಗಳ ಹೋರಾಟಗಾರರು ಶಂಕಿತ ಉಗ್ರರು ಅಥವಾ ಉಗ್ರರ ಮನೆಯನ್ನು ಧ್ವಂಸಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಗ್ರ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರದ ಕುಟುಂಬ ಸದಸ್ಯರು, ಸಂಬಂಧಿಕರಿಗೆ ಶಿಕ್ಷೆ ನೀಡುವುದು, ಅವರನ್ನು ಬೀದಿಪಾಲು ಮಾಡುವುದು ಸರಿಯಲ್ಲ. ಇದು ಅಂತಾರಾಷ್ಟ್ರೀಯ ಕಾನೂನಿನಡಿ ನಿಷೇಧಿತ ಎಂದು ಮಾನವ ಹಕ್ಕುಗಳ ಹೋರಾಟಗಾರರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಸ್ಫೋಟ: ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ
ಅದಕ್ಕೂ ಮುಖ್ಯವಾಗಿ ಸುಪ್ರೀಂ ಕೋರ್ಟ್ ಕೂಡಾ ಕಾನೂನುಬಾಹಿರವಾಗಿ ಮನೆ ಧ್ವಂಸ ಮಾಡುವುದರ ವಿರುದ್ಧವಾಗಿ ಒಂದು ವರ್ಷಗಳ ಹಿಂದೆಯೇ ಅಂದರೆ 2024ರ ನವೆಂಬರ್ 13ರಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ನೀಡಿ ಒಂದು ವರ್ಷ ಒಂದು ದಿನವಾಗುತ್ತಿದ್ದಂತೆ ಮತ್ತೆ ಕಾನೂನುಬಾಹಿರವಾಗಿ ಮನೆ ಧ್ವಂಸ ಮಾಡಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್ನ ಆದೇಶವನ್ನು ಉಲ್ಲಂಘಿಸಲಾಗಿದೆ.
ಸುಪ್ರೀಂ ಕೋರ್ಟ್ನ ತೀರ್ಪು ಏನು ಹೇಳುತ್ತದೆ?
ಯಾವುದೇ ವಸತಿ ಅಥವಾ ವಾಣಿಜ್ಯ ಕಟ್ಟಡಗಳನ್ನು ಕೆಡವುವ ಮೊದಲು, ಅಧಿಕಾರಿಗಳು ಮೊದಲೇ ನೋಟಿಸ್ ನೀಡಬೇಕು. ಉತ್ತರಕ್ಕಾಗಿ ಕನಿಷ್ಠ 15 ದಿನಗಳ ಕಾಲಾವಕಾಶವನ್ನು ನೀಡಬೇಕು. ಹಾಗೆಯೇ ಮನೆ ಕೆಡವುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲು ವೈಯಕ್ತಿಕ ವಿಚಾರಣೆಯನ್ನು ನಡೆಸಬೇಕು ಎಂದು 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಹೇಳುತ್ತದೆ.
ತೀರ್ಪಿನ ಪ್ರಕಾರ ನೋಟಿಸ್ನಲ್ಲಿ ಸ್ಪಷ್ಟವಾಗಿ ಕಾರಣವನ್ನು ಉಲ್ಲೇಖಿಸಬೇಕು. ಹಾಗೆಯೇ ನಿರ್ದಿಷ್ಟವಾಗಿ ಅನಧಿಕೃತವಾಗಿ ಕಟ್ಟಲಾದ ಕಟ್ಟಡಗಳಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ. ಈ ತೀರ್ಪಿನ ಉಲ್ಲಂಘನೆಯಾದರೆ ನ್ಯಾಯಾಂಗ ನಿಂದನೆ ವಿಚಾರಣೆಗೆ ಒಳಪಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆಯನ್ನೂ ನೀಡಿದೆ.
ನವೆಂಬರ್ 9ರಂದು ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿದೆ. ಅದಾದ ಎರಡು ದಿನಗಳ ಬಳಿಕ ಸ್ಫೋಟದ ಆರೋಪಿ ಡಾ. ಉಮರ್ ಗುರುತನ್ನು ಬಹಿರಂಗಪಡಿಸಲಾಗಿದೆ. ಸ್ಫೋಟ ಸಂಭವಿಸಿ ನಾಲ್ಕು ದಿನವಾಗುತ್ತಿದ್ದಂತೆ ಯಾವುದೇ ನೋಟಿಸ್ ನೀಡದೆಯೇ ಉಮರ್ ಕುಟುಂಬಸ್ಥರು ವಾಸಿಸುತ್ತಿದ್ದ ಮನೆಯನ್ನು ಧ್ವಂಸಗೊಳಿಸಲಾಗಿದೆ. ಅಂದರೆ ಇದು ಸ್ಪಷ್ಟವಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ. ಅಷ್ಟು ಮಾತ್ರವಲ್ಲದೆ ಇದು ಕ್ರಿಮಿನಲ್ ಕಾನೂನಿನ ಉಲ್ಲಂಘನೆಯೂ ಆಗಿದೆ.
ದೇಶದಲ್ಲಿ ಈಗ ಭಾರತೀಯ ನ್ಯಾಯ ಸಂಹಿತೆ ಅಂದರೆ ಬಿಎನ್ಎಸ್ ಕ್ರಿಮಿನಲ್ ಕಾನೂನನ್ನು ಪಾಲಿಸಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿಯೂ ಯಾವುದೇ ಪ್ರಕರಣದಲ್ಲೂ ಆರೋಪಿಯ ಮನೆಯನ್ನು ಧ್ವಂಸಗೊಳಿಸುವ ಅವಕಾಶವಿಲ್ಲ. ಈ ಕಾನೂನಿನ ಅಡಿಯಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಹಾಕಬಹುದು. ಬಿಎನ್ಎಸ್ ಸೆಕ್ಷನ್ 107ರ ಅಡಿಯಲ್ಲಿ ಕೆಲವು ಸಂದರ್ಭಗಳಲ್ಲಿ ಆರ್ಥಿಕ ದಂಡವಾಗಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ ಆ ಆಸ್ತಿಯನ್ನು ಧ್ವಂಸ ಮಾಡುವ ಅವಕಾಶವನ್ನು ನಮ್ಮ ಕಾನೂನು ನೀಡಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕೂಡಾ ಆರೋಪಿಗಳ ಮನೆಗಳನ್ನು ಕೆಡವಲು ಅಥವಾ ಆಸ್ತಿಯನ್ನು ನಾಶಮಾಡುವ ಅವಕಾಶವನ್ನು ನೀಡಲ್ಲ. ಪೊಲೀಸರು ಮನೆಯಲ್ಲಿ ಶೋಧ ನಡೆಸಲು, ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಷ್ಟೇ ಅವಕಾಶ ನೀಡುತ್ತದೆ. ಆದರೆ ಅಧಿಕಾರಿಗಳು ಎಲ್ಲಾ ಕಾನೂನುಗಳನ್ನು ಮೀರಿ ನಡೆದುಕೊಳ್ಳುತ್ತಿರುವುದು ಒಪ್ಪಲಾಗದ ಕ್ರಮ.
ಇದನ್ನು ಓದಿದ್ದೀರಾ? ಅಸ್ಸಾಂ | 1,500 ಮುಸ್ಲಿಂ ಕುಟುಂಬಗಳ ಮನೆ ಉರುಳಿಸಲು ಮುಂದಾದ ಸರ್ಕಾರ
ಸಾಮಾನ್ಯವಾಗಿಯೇ ಈ ರೀತಿ ಆರೋಪಿಗಳ ಮನೆಯನ್ನು ಧ್ವಂಸ ಮಾಡುವುದರಿಂದ ಸಂಕಷ್ಟಕ್ಕೆ ಸಿಲುಕುವುದು ಆರೋಪಿಯ ಕುಟುಂಬಸ್ಥರು. ಆರೋಪದಲ್ಲಿ ಭಾಗಿಯಾಗಿರದ ವೃದ್ಧ ಪೋಷಕರು, ಮಹಿಳೆಯರು, ಮಕ್ಕಳು. ಆದರೆ ಭಯೋತ್ಪಾದಕ ಎಂದ ಕೂಡಲೇ ಈ ಸಮಾಜವೇ ಆತನ ಕುಟುಂಬವನ್ನೇ ಕಠೋರವಾಗಿ ಕಾಣುತ್ತದೆ. ಮನೆಯ ಓರ್ವ ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟು ಸರಿ?
ದೇಶದ ಕಾನೂನು ಹಿಂದಿನಿಂದಲೂ ನ್ಯಾಯಯುತ ಪ್ರಕ್ರಿಯೆಯನ್ನು ಪ್ರತಿಪಾದಿಸುತ್ತದೆ. ಅಪರಾಧವು ಎಷ್ಟೇ ಘೋರವಾಗಿದ್ದರೂ ನ್ಯಾಯಯುತವಾಗಿ ವಿಚಾರಣೆಯನ್ನು ನಡೆಸಬೇಕು ಮತ್ತು ಆರೋಪಿ ನ್ಯಾಯಾಲಯದಲ್ಲಿ ತಪ್ಪಿತಸ್ಥನೆಂದು ಸಾಬೀತಾಗುವವರೆಗೂ ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಸದ್ಯ ದೇಶದಲ್ಲಿ ನಡೆಯುತ್ತಿರುವುದು ತದ್ವಿರುದ್ಧ. ವಿಚಾರಣೆ ನಡೆಸುವುದಕ್ಕೂ ಮುನ್ನವೇ ಆರೋಪಿಯ ಕುಟುಂಬದ ಮೇಲೆ ಪೊಲೀಸರು ಬಲಪ್ರಯೋಗಿಸುತ್ತಿದ್ದಾರೆ.
ಭಯೋತ್ಪಾದನೆಯಲ್ಲಿ ತೊಡಗಿಕೊಂಡಿರುವವರಿಗೆ ಇದು ಎಚ್ಚರಿಕೆ ಎಂದು ಪೊಲೀಸರು, ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಇದು ಭಯೋತ್ಪಾದನಾ ಕೃತ್ಯಗಳಿಂದ ಕೋಪಗೊಂಡ ಜನರಿಗೂ ಸರಿ ಎನಿಸುತ್ತದೆ. ತ್ವರಿತ ನ್ಯಾಯ ಎಂಬ ತರಾತುರಿ ಸದ್ಯ ಜನರಲ್ಲಿದೆ. ಅತ್ಯಾಚಾರ-ಕೊಲೆ ಪ್ರಕರಣಗಳಲ್ಲಿ ಈ ತ್ವರಿತ ನ್ಯಾಯವನ್ನೇ ಜನರು ಮೆಚ್ಚುತ್ತಿದ್ದಾರೆ. ಉದಾಹರಣೆಗೆ 2019ರ ಹೈದರಾಬಾದ್ ಎನ್ಕೌಂಟರ್ಗೆ ಸಾರ್ವಜನಿಕವಾಗಿ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ ಕಾನೂನಿನ ಪ್ರಕಾರ ಇದು ಸರಿಯೇ? ಕೋಪದ ಕೈಗೆ ಬುದ್ಧಿ ಕೊಡುವುದು ಎಷ್ಟು ಸರಿ?
ಹಾಗೆಂದ ಮಾತ್ರಕ್ಕೆ ಭಯೋತ್ಪಾದನೆಯನ್ನು ಎಂದಿಗೂ ಒಪ್ಪಲಾಗದು. ಕಾನೂನುಬಾಹಿರವಾಗಿ ಮನೆ ಧ್ವಂಸ ಮಾಡುವುದನ್ನು ವಿರೋಧಿಸುವುದು ಭಯೋತ್ಪಾದನೆಗೆ ನೀಡುವ ಬೆಂಬಲವಲ್ಲ ಎಂಬುದು ಸ್ಪಷ್ಟ. ಕಾನೂನು ಪಾಲಿಸುವ ದೇಶದ ಯಾವುದೇ ನಾಗರಿಕರಾದರೂ ಭಯೋತ್ಪಾದನೆ ಮತ್ತು ಶಿಕ್ಷೆಯ ನೆಪದಲ್ಲಿ ಆರೋಪಿಯ ಕುಟುಂಬಸ್ಥರ ಮನೆ ಧ್ವಂಸಗೊಳಿಸುವುದು – ಇವರೆಡನ್ನೂ ಖಂಡಿಸಬೇಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




