ಶೀತಮಾರುತ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಮಧ್ಯ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಮೈಕೊರೆಯುವ ಚಳಿಯಿದೆ. ದಟ್ಟವಾದ ಮಂಜು ಆವರಿಸಿದ್ದು ರೈಲು, ವಿಮಾನ ಸಂಚಾರಕ್ಕೆ ಮಂಜು ಅಡ್ಡಿಯಾಗಿದೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ (IMD) ಇನ್ನಷ್ಟು ಕೆಲವು ದಿನಗಳವರೆಗೆ ಇದೇ ರೀತಿ ಮಂಜು ಇರಲಿದೆ, ಜತೆಗೆ ಕೆಲವೆಡೆ ಭಾರೀ ಮಳೆಯಾಗು ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಉತ್ತರ, ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ಚಳಿ ತೀವ್ರವಾಗಿದೆ. ಆದರೆ ದಕ್ಷಿಣ ರಾಜ್ಯಗಳು ಮಳೆ ಮತ್ತು ಮಿಶ್ರಿತ ಹವಾಮಾನವನ್ನು ಕಾಣಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನು ಓದಿದ್ದೀರಾ? ಶೀತಮಾರುತಕ್ಕೆ ಸಿಕ್ಕಿ ತತ್ತರಿಸುತ್ತಿರುವ ಉತ್ತರ ಭಾರತ: ಹಿಮಪಾತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ದಕ್ಷಿಣ ಕರಾವಳಿ ತಮಿಳುನಾಡು ಮತ್ತು ಪಕ್ಕದ ಮನ್ನಾರ್ ಕೊಲ್ಲಿಯಲ್ಲಿ ವಾಯು ಚಂಡಮಾರುತದ ಪ್ರಸರಣ ಮುಂದುವರಿದಿದೆ. ಇದರಿಂದಾಗಿ ಜನವರಿ 12ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಮತ್ತು ಲಕ್ಷದ್ವೀಪ ಸೇರಿದಂತೆ ದಕ್ಷಿಣ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಜನವರಿ 14ರವರೆಗೆ ತೀವ್ರ ಚಳಿ ಇರಲಿದೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಹಲವಾರು ಪ್ರದೇಶಗಳಲ್ಲಿ ಶೀತಮಾರುತ ಇರಲಿದೆ. ನೆರೆಯ ರಾಜ್ಯಗಳಿಗೂ ಶೀತಮಾರುತದ ಪ್ರಭಾವ ಉಂಟಾಗಬಹುದು. 16ರವರೆಗೆ ಬಿಹಾರ, ಜಾರ್ಖಂಡ್ನ ಪ್ರತ್ಯೇಕ ಭಾಗಗಳಲ್ಲಿ ಹಗಲಿನಲ್ಲಿ ತಾಪಮಾನ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.
ರೈಲು, ವಿಮಾನ ಸಂಚಾರಕ್ಕೆ ಮಂಜು ಅಡ್ಡಿ
ಉತ್ತರ ಭಾರತದಲ್ಲಿ ಹಗಲಲ್ಲೂ ಅತಿ ದಟ್ಟವಾದ ಮಂಜು ಇದ್ದು ಈ ಹವಾಮಾನ ಸ್ಥಿತಿ ಮುಂದುವರೆಯಲಿದೆ. ಪಂಜಾಬ್ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಈಗಾಗಲೇ ದಟ್ಟವಾಗಿ ಮಂಜು ಆವರಿಸಿದೆ. ಬಿಹಾರ, ಉತ್ತರ ಪ್ರದೇಶದ ಪೂರ್ವ ಭಾಗಗಳು, ಹರಿಯಾಣ, ದೆಹಲಿ ಮತ್ತು ಈಶಾನ್ಯ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ರಾಜಸ್ಥಾನದ ಶ್ರೀಗಂಗಾನಗರ ಮತ್ತು ಪಂಜಾಬ್ನ ಅಮೃತಸರದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ದಟ್ಟ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿದ್ದು, ಹಜರತ್ ನಿಜಾಮುದ್ದೀನ್, ನವದೆಹಲಿ ಮತ್ತು ಆನಂದ್ ವಿಹಾರ್ ನಿಲ್ದಾಣಗಳಿಗೆ ಬರುವ ಹಲವು ರೈಲುಗಳು ಒಂದರಿಂದ ನಾಲ್ಕು ಗಂಟೆಗಳವರೆಗೆ ತಡೆವಾಗಿ ಚಲಿಸುತ್ತಿವೆ. ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (12649) ಸುಮಾರು 1 ಗಂಟೆ ಮತ್ತು ಕರ್ನಾಟಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12627) 1 ಗಂಟೆ 18 ನಿಮಿಷ ವಿಳಂಬವಾಗಿವೆ. ಶ್ರೀಧಾಮ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12192) ಗರಿಷ್ಠ 3 ಗಂಟೆ 34 ನಿಮಿಷಗಳಷ್ಟು ತಡವಾಗಿ ಸಂಚರಿಸುತ್ತಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಕಡಿಮೆ ಗೋಚರತೆಯಿಂದಾಗಿ ಹಲವು ವಿಮಾನಗಳು ವಿಳಂಬವಾಗಿವೆ ಅಥವಾ ರದ್ದಾಗಿವೆ. ಇಂಡಿಗೋ ಮತ್ತು ಏರ್ ಇಂಡಿಯಾ ಕಂಪನಿಗಳು ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ನೀಡಿವೆ.





