‘ಉತ್ತರಾಖಂಡ ರಾಜ್ಯ ರಚನೆಯ ಬೆಳ್ಳಿ ಮಹೋತ್ಸವದ (25 ವರ್ಷ) ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗಿಯಾಗಲಿದ್ದಾರೆ. ‘ಆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಭಾಗಿಯಾಗುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಲಾಗುವುದು’ ಎಂದು ಉತ್ತರಾಖಂಡ ವಿಶ್ವವಿದ್ಯಾಲಯವೊಂದು ಹೊರಡಿಸಿದೆ ಎನ್ನಲಾದ ಸುತ್ತೋಲೆಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಸುತ್ತೋಲೆ ಸತ್ಯವೇ ಎಂದು ‘ಪಿಐಬಿ ಫ್ಯಾಕ್ಟ್ಚೆಕ್’ ಪರಿಶೀಲಿಸಿದೆ. ಆ ಸುತ್ತೋಲೆ ನಕಲಿ ಎಂದು ಸ್ಪಷ್ಟಪಡಿಸಿದೆ.
ಉತ್ತರಾಖಂಡದ ‘ದೇವ ಭೂಮಿ ಉತ್ತರಾಖಂಡ್ ವಿಶ್ವವಿದ್ಯಾನಿಲಯ’ವು ಹೊರಡಿಸಿದೆ ಎನ್ನಲಾದ ಸುತ್ತೋಲೆಯಲ್ಲಿ, ‘ಎಲ್ಲ ಬಿ.ಟೆಕ್ ಸಿಎಸ್ಇ ಮತ್ತು ಸ್ಪೆಷಿಯಲೈಶೇಷನ್ (2ನೇ ವರ್ಷ) ಮತ್ತು ಬಿಸಿಎ (2 ನೇ ವರ್ಷ) ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು’ ಎಂದು ಬರೆಯಲಾಗಿದೆ.
“ಭಾರತದ ಪ್ರಧಾನ ಮಂತ್ರಿಯೊಂದಿಗೆ 2025ರ ನವೆಂಬರ್ 9ರಂದು ನಡೆಯುವ ಸಂವಾದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಜರಾಗಬೇಕು. ಈ ಕಾರ್ಯಕ್ರಮದಲ್ಲಿನ ಹಾಜರಾತಿಯನ್ನು ‘ಭಾರತೀಯ ಜ್ಞಾನ ಪರಂಪರೆ’ (ಭಾರತೀಯ ಜ್ಞಾನ ವ್ಯವಸ್ಥೆ) ಕೋರ್ಸ್ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೆ 50 ಆಂತರಿಕ ಅಂಕಗಳನ್ನು ನೀಡಲಾಗುತ್ತದೆ. ಆದ್ದರಿಂದ, ಭಾರತೀಯ ಜ್ಞಾನ ವ್ಯವಸ್ಥೆ ಕೋರ್ಸ್ ಹೊಂದಿರುವ ಎಲ್ಲರೂ ಕಾರ್ಯಕ್ರಮಕ್ಕೆ ಭಾಗವಹಿಸುವುದು ಕಡ್ಡಾಯವಾಗಿದೆ” ಎಂದು ವೈರಲ್ ಆಗಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಈ ಸುತ್ತೋಲೆಯನ್ನು ವಿಶ್ವವಿದ್ಯಾಲಯದ BCA ವಿಭಾಗದ ಮುಖ್ಯಸ್ಥರು ಮತ್ತು B.Tech CSE 2ನೇ ವರ್ಷದ ‘ಕಾರ್ಯಕ್ರಮ ಸಂಯೋಜಕರು’ ಹೊರಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಆ ಸುತ್ತೋಲೆಯಲ್ಲಿ ಯಾವುದೇ ಸಹಿ ಕಂಡುಬಂದಿಲ್ಲ.ಆದಾಗ್ಯೂ, ಸುತ್ತೋಲೆಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ. ವಿಶ್ವವಿದ್ಯಾಲಯದ ನಡೆಯನ್ನು ಖಂಡಿಸಿವೆ.
ವೈರಲ್ ಆಗಿರುವ ಸುತ್ತೋಲೆಯನ್ನು ವಿಶ್ವವಿದ್ಯಾಲಯ ಹೊರಡಿಸಿದೆಯೇ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (PIB) ‘ಫ್ಯಾಕ್ಟ್ ಚೆಕ್’ ವಿಭಾಗ ಪರಿಶೀಲಿಸಿದೆ. ‘ವೈರಲ್ ಆಗಿರುವ ಸುತ್ತೋಲೆ ನಕಲಿ’ ಎಂದು ಪತ್ತೆಹಚ್ಚಿದೆ.
A letter allegedly issued by Devbhoomi Uttarakhand University is being circulated on social media, claiming that students’ attendance at Prime Minister @narendramodi's programme has been made mandatory and that internal examination marks will be given for it.#PIBFactCheck
— PIB Fact Check (@PIBFactCheck) November 8, 2025
❌… pic.twitter.com/dxP1XajxU4
“ದೇವಭೂಮಿ ಉತ್ತರಾಖಂಡ ವಿಶ್ವವಿದ್ಯಾಲಯವು ಹೊರಡಿಸಿದೆ ಎನ್ನಲಾದ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಈ ಪತ್ರ ನಕಲಿ. ಅಂತಹ ಯಾವುದೇ ಸುತ್ತೋಲೆಯನ್ನು ವಿಶ್ವವಿದ್ಯಾನಿಲಯ ನೀಡಿಲ್ಲ” ಎಂದು ಪಿಐಬಿ ಹೇಳಿದೆ.
ಇನ್ನು ಸುತ್ತೋಲೆ ಕುರಿತು ಸ್ಪಷ್ಟಪಡಿಸಿರುವ ಡಿಬಿಯು ವಿಶ್ವವಿದ್ಯಾಲಯ ಕೂಡ, “ನ.9ರಂದು ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಹಾಜರಾತಿ ಕುರಿತು DBUU ಹೆಸರಿನಲ್ಲಿ ನಕಲಿ ಸುತ್ತೋಲೆಯನ್ನು ಸೃಷ್ಟಿಸಿ, ಹಂಚಿಕೊಳ್ಳಲಾಗಿದೆ. ಆ ಇದು ಸಂಪೂರ್ಣವಾಗಿ ಸುಳ್ಳು. ವಿಶ್ವವಿದ್ಯಾಲಯದಿಂದ ಅಂತಹ ಸುತ್ತೋಲೆ ನೀಡಲಾಗಿಲ್ಲ ಅಥವಾ ಅನುಮೋದಿಸಲ್ಪಟ್ಟಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಇದು ಯಾವುದೇ ಅಧಿಕೃತ ಸಹಿ, ಉಲ್ಲೇಖ ಸಂಖ್ಯೆಯನ್ನು ಹೊಂದಿಲ್ಲ. ದಯವಿಟ್ಟು ನಿಖರವಾದ ಮಾಹಿತಿಗಾಗಿ ಅಧಿಕೃತ DBUU ಸಂವಹನ ವೇದಿಕೆಗಳನ್ನು ಮಾತ್ರ ಗಮಿನಿಸಿ” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದೆ.
ವೈರಲ್ ಆದ ನಕಲಿ ಸುತ್ತೋಲೆ ಕುರಿತು ವಿಶ್ವವಿದ್ಯಾನಿಲಯವು ದೂರು ದಾಖಲಿಸಿದೆ. ಡಿಬಿಯುಯು ನೀಡಿದ ದೂರಿನ ಆಧಾರದ ಮೇಲೆ ಡೆಹ್ರಾಡೂನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಕಲಿ ಸುತ್ತೋಲೆಯನ್ನು ಸೃಷ್ಟಿಸಿ, ವೈರಲ್ ಮಾಡಿದವರು ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.




