ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಡಿಎಫ್, ಯುಡಿಎಫ್, ಎನ್ಡಿಎ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಶುರು ಮಾಡಿದೆ. ಇದರ ನಡುವೆ ಬಂಡಾಯ, ಭಿನ್ನಮತವೂ ಕಾಡುತ್ತಿದೆ. ಆದರೆ ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ ಎಂದು ಸಿಪಿಐಎಂ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್, “ಭಿನ್ನಮತೀಯರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಎಡರಂಗದ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಪಕ್ಷಾಂತರಿಗಳ ಸಂಖ್ಯೆ ಅತಿ ಕಡಿಮೆ. ಆಡಳಿತಾರೂಢ ಎಲ್ಡಿಎಫ್ ಮುಂಬರುವ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಸಿಪಿಐಎಂನಲ್ಲಿ ಬಿಕ್ಕಟ್ಟು; ಮಾಜಿ ಶಾಸಕ ಪಿಕೆ ಸಸಿ ಉಚ್ಚಾಟನೆ
ಜಿ ಸುಧಾಕರನ್ ಸೇರಿದಂತೆ ನಾಲ್ವರು ಹಿರಿಯ ನಾಯಕರು ಪಕ್ಷದ ವಿರುದ್ಧ ದಂಗೆ ಎದ್ದಿದ್ದಾರೆ. ಸ್ವತಂತ್ರರಾಗಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಎಲ್ಡಿಎಫ್ ತನ್ನ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಚರ್ಚೆಗಳು ನಡೆಯುತ್ತಿದೆ. ಆದರೆ ಸಿಪಿಐಎಂ ನಾಯಕರು ಇದನ್ನು ಅಲ್ಲಗಳೆದಿದ್ದಾರೆ.
“ನಮಗೆ ಕೇರಳದಲ್ಲಿ 5.5 ಲಕ್ಷ ಸದಸ್ಯರಿದ್ದಾರೆ. ಸುಮಾರು 2.5 ಲಕ್ಷ ಸಹಾನುಭೂತಿದಾರರು ಇದ್ದಾರೆ. ಇದರಲ್ಲಿ, ಐದು ಅಥವಾ ಆರು ಜನರು ತೊರೆದರೆ ಅವರು ಕಮ್ಯುನಿಸ್ಟ್ ಚಳುವಳಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಬಹುದೇ” ಎಂದು ಪ್ರಶ್ನಿಸಿದರು. ಹಾಗೆಯೇ ಕಾಂಗ್ರೆಸ್ನಂತೆ ಸಿಪಿಐ (ಎಂ) ಒಳಗೆ ಯಾವುದೇ ಆಂತರಿಕ ಭಿನ್ನಾಭಿಪ್ರಾಯವಿಲ್ಲ ಎಂದು ಸಮರ್ಥಿಸಿಕೊಂಡರು.
“ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಕೆಲವರು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಬಹುದು. ಅಂತಹ ವಿಷಯಗಳನ್ನು ಪಕ್ಷದೊಳಗೆ ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
ಇನ್ನು ಪಾಲಕ್ಕಾಡ್ನಂತಹ ಕ್ಷೇತ್ರಗಳಲ್ಲಿ ವಿರೋಧ ಪಕ್ಷ ಬಿಜೆಪಿ ಮತ್ತು ಸಿಪಿಐ(ಎಂ) ನಡುವೆ ರಾಜಿ ನಡೆದಿದೆ ಎಂಬ ಕಾಂಗ್ರೆಸ್ ನಾಯಕ ವಿ ಡಿ ಸತೀಸನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಆರೋಪವನ್ನು ಆಧಾರರಹಿತ” ಎಂದು ತಳ್ಳಿಹಾಕಿದರು. “ವಿರೋಧ ಪಕ್ಷದ ನಾಯಕರು ಪ್ರತಿದಿನ ಇಂತಹ ಆರೋಪಗಳನ್ನು ಮಾಡುತ್ತಾರೆ. ಅಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ” ಎಂದು ಗೋವಿಂದನ್ ತಿಳಿಸಿದರು.
ಕೇರಳದ 140 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದ ಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ. ಮೇ 4ರಂದು ಎಣಿಕೆ ನಡೆಯಲಿದೆ. ಒಂದು ದಶಕದ ಆಡಳಿತದ ನಂತರ ಎಡರಂಗವು ಸತತ ಮೂರನೇ ಅವಧಿಗೆ ಅಧಿಕಾರ ಪಡೆಯಲು ತಯಾರಿ ನಡೆಸುತ್ತಿದೆ.





