ಆಪರೇಷನ್ ಸಿಂಧೂರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದರು. ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.
ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಬಂಧಿಸಿದ ನಂತರ, ನೂರಾರು ವಿದ್ಯಾರ್ಥಿಗಳು ಈ ಕ್ರಮವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಾಧ್ಯಾಪಕರು ದೇಶ ಅಥವಾ ಸಂವಿಧಾನದ ಬಗ್ಗೆ ಎಂದಿಗೂ ಅಗೌರವ ವ್ಯಕ್ತಪಡಿಸಿಲ್ಲ. ಅವರು ನಮಗೆ ತರಗತಿಯಲ್ಲಿ ಅಂತಹ ಅಗೌರವವನ್ನು ಎಂದಿಗೂ ಕಲಿಸಿಲ್ಲ, ಅವರನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದರು.
ಈ ನಡುವೆ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ಮಹ್ಮದಾಬಾದ್ ಅವರ ಕುಟುಂಬ ಶ್ರೇಷ್ಠ ಪರಂಪರೆ ಹಾಗೂ ಪೂರ್ವಜರು ಜಾತ್ಯತೀತತೆ, ದೇಶಪ್ರೇಮವನ್ನೇ ಉಸಿರಾಗಿಸಿಕೊಂಡಿದ್ದವರು ಎಂಬುದನ್ನು ತಿಳಿದುಕೊಂಡಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂದಿನ ಮೂರು ವರ್ಷದಲ್ಲಾದರೂ ಸರ್ಕಾರ ಜನಪರವಾಗಿರಬಹುದೇ?
ಅಲಿ ಖಾನ್ ಮಹ್ಮದಾಬಾದ್ ಅವರು ವಿಶ್ವದಲ್ಲೇ ಹೆಸರುವಾಸಿಯಾಗಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ. ಅವರ ತಂದೆ, ರಾಜಾ ಮಹ್ಮದಾಬಾದ್ ಕೂಡ ರಾಜಕೀಯದಲ್ಲಿದ್ದವರು. ಮಹ್ಮದಾಬಾದ್ ಅವರ ತಾಯಿ, ರಾಣಿ ವಿಜಯ್ ಅವರು ನಾಗರೀಕ ಸೇವೆ ಅಧಿಕಾರಿಯಾಗಿ ಭಾರತದ ರಾಯಭಾರಿ ಕಚೇರಿಯಲ್ಲಿ ಅಧಿಕಾರಿಯಾಗಿ ಹೆಸರು ಮಾಡಿದ್ದ ಜಗತ್ ಸಿಂಗ್ ಮೆಹ್ತಾ ಅವರ ಪುತ್ರಿ. ಅವರ ಸೋದರ ವಿಕ್ರಮ್ ಮೆಹ್ತಾ ಕೂಡ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು.
ಬಹುತೇಕ ದೇಶಗಳಲ್ಲಿ, ಇಂತಹ ಶ್ರೇಷ್ಠ ಪರಂಪರೆ ಮತ್ತು ವಿದ್ವತ್ಪೂರ್ಣ ಸ್ಥಾನಮಾನ ಹೊಂದಿರುವ ನಾಗರಿಕರನ್ನು ಹಾಗೂ ಅವರ ಕುಟುಂಬದವರನ್ನು ಗೌರವಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ದೇಶದ್ರೇಹದ ಪಟ್ಟಕಟ್ಟಲಾಗುತ್ತದೆ. ಇದು ನಮ್ಮ ನವ ಭಾರತ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





